;Resize=(412,232))
ಸಿನಿವಾರ್ತೆ
ಇಂದು ರಾಜಸ್ತಾನದ ಉದಯಪುರದ ಐಟಿಸಿ ಮೆಮೆಂಟೋಸ್ ರೆಸಾರ್ಟಿನಲ್ಲಿ ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಹಾಗೂ ತೆಲುಗು ನಟ ವಿಜಯ ದೇವರಕೊಂಡ ವಿವಾಹ ಅದ್ದೂರಿಯಾಗಿ ನಡೆಯಲಿದೆ. ತೆಲುಗು ಸಂಪ್ರದಾಯ ಮತ್ತು ಕೊಡವ ಸಂಪ್ರದಾಯದ ಪ್ರಕಾರ ವಿವಾಹ ನಡೆಯಲಿದೆ ಎನ್ನಲಾಗಿದೆ. ಎರಡೂ ಕುಟುಂಬಗಳ ರೀತಿ ರಿವಾಜುಗಳ ಬಗ್ಗೆ ಪರಸ್ಪರರಿಗೆ ತಿಳಿಯಲು ಹಾಗೂ ಯಾರಿಗೂ ಅಸಮಾಧಾನವಾಗದೇ ಇರಲಿ ಎಂಬ ಉದ್ದೇಶದಿಂದ ಎರಡೂ ಸಂಪ್ರದಾಯದ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕನ್ನಡದ ನಟಿ ಆಶಿಕಾ ರಂಗನಾಥ್ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದು, ಮದುವೆಯಲ್ಲಿ ಏನು ನಡೆಯುತ್ತಿದೆ ಎಂಬ ಗುಟ್ಟು ಬಿಟ್ಟುಕೊಡದಂತೆ, ಆದರೆ ತಾನು ಭಾಗಿಯಾಗಿದ್ದು ಗೊತ್ತಾಗುವಂತೆ ಕೆಲವು ಫೋಟೋಗಳು ಪೋಸ್ಟ್ ಮಾಡಿದ್ದಾರೆ.
ಉಳಿದಂತೆ ‘ಅನಿಮಲ್’ ನಿರ್ದೇಶಕ ಸಂದೀಪ ರೆಡ್ಡಿ ವಂಗ, ನಿರ್ದೇಶಕ ತರುಣ್ ಭಾಸ್ಕರ್, ನಟಿ ಈಶಾ ರೇಬ್ಬಾ, ಸ್ಟೈಲಿಸ್ಟ್ ಶ್ರಾವ್ಯಾ ವರ್ಮಾ, ‘ದಿ ಗರ್ಲ್ ಫ್ರೆಂಡ್’ ನಿರ್ದೇಶಕ ರಾಹುಲ್ ರವೀಂದ್ರನ್ ಭಾಗಿಯಾಗಿದ್ದಾರೆ. ಸ್ಟಾರ್ ನಟರಾದ ಸಲ್ಮಾನ್ ಖಾನ್, ಅಲ್ಲು ಅರ್ಜುನ್ ಭಾಗಿಯಾಗುವ ಸಾಧ್ಯತೆ ಇದೆ.
ಮೊದಲ ಸಿನಿಮಾ ‘ಕಿರಿಕ್ ಪಾರ್ಟಿ’ ಯಿಂದ 2021ರಲ್ಲಿ ಬಿಡುಗಡೆಯಾದ ‘ಪೊಗರು’ ಸಿನಿಮಾವರೆಗೆ ರಶ್ಮಿಕಾ ಈವರೆಗೆ ಐದು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೂಲಗಳ ಪ್ರಕಾರ ಅವರ ಮದುವೆ ಆಹ್ವಾನ ಬಂದಿರುವುದು ಬಂದಿರುವುದು ಕೇವಲ ನಟಿ ಆಶಿಕಾ ರಂಗನಾಥ್ ಅವರಿಗೆ ಮಾತ್ರ. ಆದರೆ ಮಾರ್ಚ್ 4ರಂದು ಹೈದರಾಬಾದ್ನಲ್ಲಿ ನಡೆಯಲಿರುವ ಅದ್ದೂರಿ ಆರತಕ್ಷತೆಗೆ ಸ್ಯಾಂಡಲ್ವುಡ್ನ 11 ಮಂದಿಗೆ ಆಹ್ವಾನದ ಜೊತೆಗೆ ಖಾಸಗಿ ಸಂದೇಶವೂ ರವಾನೆಯಾಗಿದೆ ಎನ್ನಲಾಗಿದೆ.
ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಯಶ್, ರವಿಚಂದ್ರನ್, ಧ್ರುವ ಸರ್ಜಾ, ಗಣೇಶ್, ನಿರ್ಮಾಪಕಿ ಅಶ್ವಿನಿ ಪುನೀತ್ರಾಜ್ ಕುಮಾರ್, ನಿರ್ದೇಶಕರಾದ ಎ.ಹರ್ಷ, ನಂದ ಕಿಶೋರ್, ಸಿಂಪಲ್ ಸುನಿ ಆರತಕ್ಷತೆಗೆ ಆಹ್ವಾನಿಸಲ್ಪಟ್ಟ ಸ್ಯಾಂಡಲ್ವುಡ್ ಗಣ್ಯರು.
ರಶ್ಮಿಕಾ ಮಂದಣ್ಣ ಮೊಟ್ಟ ಮೊದಲ ಸಲ ಮನರಂಜನಾ ಜಗತ್ತಿಗೆ ಕಾಲಿಟ್ಟದ್ದು ರಕ್ಷಿತ್ ಶೆಟ್ಟಿ ನಟನೆಯ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ. ಈ ಸಿನಿಮಾವನ್ನು ನಿರ್ದೇಶನ ಮಾಡಿದವರು ರಿಷಬ್ ಶೆಟ್ಟಿ. ಮದುವೆಗೆ ಇವರ್ಯಾರಿಗೂ ಆಹ್ವಾನ ಬಂದಿಲ್ಲ. ಈ ಬಗ್ಗೆ ಕೇಳಲಾದ ಪ್ರಶ್ನೆಗೆ ರಿಷಬ್ ಶೆಟ್ಟಿ ಏನೂ ಉತ್ತರಿಸದೇ ಮೌನವಾಗಿ ಹೊರನಡೆದ ಘಟನೆ ಮಂತ್ರಾಲಯದಲ್ಲಿ ವರದಿಯಾಗಿದೆ.
ಕೊಡಗಿನಲ್ಲೂ ಆರತಕ್ಷತೆ ನಡೆಯುವ ಸಾಧ್ಯತೆ
ರಶ್ಮಿಕಾ ಮಂದಣ್ಣ ತಂದೆ ಕೊಡಗು-ವಿರಾಜಪೇಟೆ ಭಾಗದ ಉದ್ಯಮಿಯಾಗಿದ್ದು, ಗೆಳೆಯರು, ಬಂಧುಗಳ ದೊಡ್ಡ ಬಳಗವಿದೆ. ವಿರಾಜಪೇಟೆಯಲ್ಲಿ ಇವರಿಗೆ ಕಲ್ಯಾಣ ಮಂಟಪವೂ ಇದೆ. ಅಲ್ಲೇ ಬಂಧುಗಳು ಹಾಗೂ ಕುಟುಂಬದ ಆಪ್ತರಿಗೆ ಆರತಕ್ಷತೆ ಆಯೋಜಿಸಲಾಗಿದೆ ಎನ್ನಲಾಗಿದೆ. ಮಾ.4ರಂದು ಹೈದರಾಬಾದ್ ರಿಸೆಪ್ಶನ್ ಮುಗಿಸಿ ರಶ್ಮಿಕಾ ಹಾಗೂ ವಿಜಯ್ ವಿದೇಶದಲ್ಲಿ ಹನಿಮೂನ್ಗೆ ಹೋಗಲಿದ್ದು, ಆ ಬಳಿಕ ಈ ಆರತಕ್ಷತೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.