ಕಾಗಿನೆಲೆ ಮಹಾಸಂಸ್ಥಾನದ ಸಿದ್ದರಾಮಯ್ಯ ಮಹಿಳಾ ವಸತಿನಿಲಯಕ್ಕೆ ಭೇಟಿ ನೀಡಿವಿದ್ಯಾರ್ಥಿನಿಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ
ಕಾಗಿನೆಲೆ ಮಹಾಸಂಸ್ಥಾನದ ಸಿದ್ದರಾಮಯ್ಯ ಮಹಿಳಾ ವಸತಿನಿಲಯಕ್ಕೆ ಭೇಟಿ ನೀಡಿವಿದ್ಯಾರ್ಥಿನಿಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ
---
ಕನ್ನಡಪ್ರಭ ವಾರ್ತೆ ಮೈಸೂರು
ವಿದ್ಯಾರ್ಥಿನಿಯರು ಚೆನ್ನಾಗಿ ಓದಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಯಶಸ್ವಿಯಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.
ವಿಜಯನಗರ 2ನೇ ಹಂತದಲ್ಲಿರುವ ಶ್ರೀ ಕಾಗಿನೆಲೆ ಮಹಾಸಂಸ್ಥಾನದ ಸಿದ್ದರಾಮಯ್ಯ ಮಹಿಳಾ ವಸತಿನಿಲಯಕ್ಕೆ ಶನಿವಾರ ಭೇಟಿ ನೀಡಿ ನೂತನ ಕಟ್ಟಡವನ್ನು ಪರಿಶೀಲಿಸಿ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿದ ಅವರು, ಹೆಣ್ಣು ಮಕ್ಕಳಿಗೆ ಶತ ಶತಮಾನಗಳಿಂದ ಓದುವ ಹಕ್ಕು ಇರಲಿಲ್ಲ ಎಂದರು.
ಚತುವರ್ಣ ವ್ಯವಸ್ಥೆಯಲ್ಲಿ ಬ್ರಾಹ್ಮಣ, ವೈಶ್ಯ, ಕ್ಷತ್ರೀಯ, ಶೂದ್ರ ಎಂದು ಮಾಡಿಕೊಂಡು, ಪುನರ್ಜನ್ಮ, ಹಿಂದಿನ ಜನ್ಮ ಎಂದು ಮೌಢ್ಯವನ್ನು ಬಿತ್ತಿ, ಜಾತಿ ವ್ಯವಸ್ಥೆಯನ್ನು ಸ್ವಾರ್ಥಕ್ಕಾಗಿ ಮಾಡಿಕೊಂಡಿದ್ದರು. ಬಸವಾದಿ ಶರಣರು ಶ್ರೇಣಿಕೃತ ವ್ಯವಸ್ಥೆಯನ್ನು ತೆಗೆದು ಹಾಕಿ ಸಮ ಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸಿದರು ಎಂದು ಅವರು ಹೇಳಿದರು.
ಹೀಗಾಗಿ, ಮನುಷ್ಯ ಹುಟ್ಟಿದ ಮೇಲೆ ಏನಾದರೂ ಸಾಧನೆ ಮಾಡಬೇಕು. ನೀವೇ ಪ್ರಶ್ನೆ ಹಾಕಿಕೊಳ್ಳಬೇಕು. ಯೋಚನೆ ಮಾಡಬೇಕು. ನೀವೆಲ್ಲರು ಮದುವೆ ಆದನಂತರ ನಿಮ್ಮ ಮಕ್ಕಳಿಗೆ ಮನುಷ್ಯತ್ವದ ಪಾಠ ಕಲಿಸಿಕೊಡಬೇಕು. ಬೇರೆಯವರನ್ನು ಗೌರವಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಕಾಗಿನೆಲೆ ಮಹಾಸಂಸ್ಥಾನದ ಶ್ರೀ ಶಿವಾನಂದಪುರಿ ಸ್ವಾಮೀಜಿ, ಶಾಸಕ ಡಿ. ರವಿಶಂಕರ್, ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಗಳಾದ ಎಂ. ರಾಮಯ್ಯ, ಬಿ. ಶಿವಸ್ವಾಮಿ, ಮಹಾದೇವ್, ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ವಕೀಲ ಎಸ್.ಜೆ. ಶಿವಣ್ಣೇಗೌಡ, ಕಾರ್ಯದರ್ಶಿ ಪುಟ್ಟಬಸವೇಗೌಡ, ಜಿಪಂ ಮಾಜಿ ಅಧ್ಯಕ್ಷ ಕೆ. ಮರೀಗೌಡ, ಕೆಪಿಸಿಸಿ ಸದಸ್ಯ ದೊಡ್ಡಸ್ವಾಮಿಗೌಡ, ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಸಿ. ಸತ್ಯನಾರಾಯಣ್, ಎಂಜಿನಿಯರ್ ಎಂ. ಕುಮಾರಸ್ವಾಮಿ, ಆನಂದ್, ಹರೀಶ್, ಬಿಸಿಎಂ ಜಿಲ್ಲಾ ಅಧಿಕಾರಿ ರಾಘವೇಂದ್ರ, ಬಿಇಓ ವಿವೇಕಾನಂದ, ಎಂ. ಪುಟ್ಟಬಸವೇಗೌಡ ಮೊದಲಾದವರು ಇದ್ದರು.
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.