ರೋಹಿತ್‌ ನಾಗೇಶ್‌ ನಾಯಕನಾಗಿರುವ ಸಾಮಾಜಿಕ ಜವಾಬ್ದಾರಿ ಮೇಲೆ ನಿಂತಿರುವ ಚಿತ್ರ ವಿಕಾಸ ಪರ್ವ ಇಂದು ಬಿಡುಗಡೆ

KannadaprabhaNewsNetwork |  
Published : Sep 13, 2024, 01:33 AM ISTUpdated : Sep 13, 2024, 07:45 AM IST
Film Theater

ಸಾರಾಂಶ

ಸಿನಿಮಾ, ಸೀರಿಯಲ್‌ಗಳಲ್ಲಿ ಪಾತ್ರ ಮಾಡುತ್ತಿದ್ದ ರೋಹಿತ್‌ ನಾಗೇಶ್‌ ಇದೀಗ ‘ವಿಕಾಸ ಪರ್ವ’ ಸಿನಿಮಾದ ನಾಯಕನಾಗಿದ್ದಾರೆ. ಅನ್ಬು ಅರಸ್‌ ನಿರ್ದೇಶನ, ಸಮೀರ್‌ ನಿರ್ಮಾಣದ ಈ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಬಗ್ಗೆ ರೋಹಿತ್‌ ನಾಗೇಶ್‌ ಮಾತು.

- ಈ ಸಿನಿಮಾಗೆ ಕತೆ, ಚಿತ್ರಕಥೆ ಬರೆದವರು ವಿಶ್ರುತ್‌ ನಾಯಕ್‌. ಅವರು ಯಾವಾಗಲೂ ಒಂದೊಳ್ಳೆ ಕಥೆ ತರ್ತೀನಿ ಸಿನಿಮಾ ಮಾಡೋಣ ಅಂತ ಹೇಳ್ತಿದ್ರು. ಒಮ್ಮೆ ಅವರು ನಿರ್ದೇಶಕ ಅನ್ಬು ಅರಸ್‌ ಜೊತೆ ಬಂದರು. ಒಂದು ಕಥೆ ಹೇಳಿದರು. ಬಹಳ ಚೆನ್ನಾಗಿದೆಯಲ್ಲಾ ಅನಿಸಿತು. ‘ಈ ಕಥೆ ಸಿನಿಮಾ ಆಗಬೇಕು’ ಅಂತ ಅವರ ಬಳಿ ಹೇಳಿದೆ.

- ದೆಹಲಿಯಲ್ಲಿರುವ ಕರ್ನಾಟಕ ಮೂಲದ ಸಮೀರ್‌ ಕಥೆ ಕೇಳಿದ ಕೂಡಲೇ ಸಿನಿಮಾ ನಿರ್ಮಿಸಲು ಮುಂದಾದರು. ಒಂದೊಳ್ಳೆ ಕಥೆಗೆ ಪ್ರೊಡ್ಯೂಸರ್‌ ಸಿಕ್ಕರಲ್ಲಾ ಅಂತ ಸಂತೋಷಪಟ್ಟು ನನ್ನ ಪಾಡಿಗಿದ್ದೆ. ಆಗ ವಿಶ್ರುತ್‌ ಮತ್ತು ಅನ್ಬು ಮತ್ತೆ ಬಂದು ನೀವೇ ಲೀಡ್‌ ಪಾತ್ರ ಮಾಡಬೇಕು ಅಂದುಬಿಟ್ಟರು. ಪಾತ್ರ ನನಗೆ ಚೆನ್ನಾಗಿ ಸೂಟ್ ಆಗ್ತಿದೆ ಅನಿಸಿ ಒಪ್ಪಿದೆ. ಅಂದುಕೊಂಡ ಹಾಗೆ ಸಿನಿಮಾದ ಕೆಲಸ ಮುಗಿದು ಇದೀಗ ತೆರೆಗೆ ಬರುತ್ತಿದೆ. ಎಂದೋ ಮನಸ್ಸೊಳಗೆ ಸೇರಿಕೊಂಡ ಕನಸು ಇದೀಗ ನನಸಾಗುತ್ತಿದೆ.- ಸಾಮಾಜಿಕ ಜವಾಬ್ದಾರಿ ಇಟ್ಟುಕೊಂಡು ನಾವು ಈ ಸಿನಿಮಾ ಮಾಡಿದ್ದೀವಿ. ಪ್ರೇಕ್ಷಕ ಸಿನಿಮಾ ನೋಡಿ ವಾಪಾಸ್‌ ಹೋಗುವಾಗ ಮನರಂಜನೆಯ ಜೊತೆಗೆ ಭಾವನಾತ್ಮಕ ವಿಷಯವನ್ನು ಎದೆಯೊಳಗೆ ಇಟ್ಟುಕೊಂಡು ಹೋಗ್ತಾನೆ.

- ಬಹಳ ಸರಳವಾದ ವಿಷಯ ಸಿನಿಮಾದ್ದು, ಆದರೆ ಸಂಕೀರ್ಣ ವಿಚಾರ ಇದೆ. ಇದು ಪ್ರತಿ ಮನೆಯ ಸಮಸ್ಯೆ. ಮೇಲ್ನೋಟಕ್ಕೆ ಸಿಂಪಲ್‌. ಆದರೆ ಇದು ಜಾಸ್ತಿಯಾಗುತ್ತಾ ಹೋಗಿ ಗಹನಕ್ಕೆ ಇಳಿದಾಗ ಅದರ ಗಾಂಭೀರ್ಯ ಅರ್ಥ ಆಗುತ್ತೆ. - ಸಿನಿಮಾದ ಅಡಿಬರಹ ‘ಕನ್‌ಫ್ಯೂಶನ್‌ ಟು ಕನ್‌ಕ್ಲೂಷನ್‌’ ಅಂತಿದೆ. ಕನ್‌ಫ್ಯೂಶನ್‌ನೊಂದಿಗೆ ಹೊರಟ ವ್ಯಕ್ತಿಯೊಬ್ಬ ಕನ್‌ಕ್ಲೂಷನ್‌ಗೆ ಬರುವವರೆಗಿನ ಜರ್ನಿಯೇ ವಿಕಾಸ ಪರ್ವ.

- ಸಕಲೇಶಪುರ ನನ್ನೂರು. ಇಂಜಿನಿಯರಿಂಗ್‌ ಮಾಡ್ತಿದ್ದಾಗ ಕಾಲೇಜಿಗೇ ‘ಕಲ್ಚರಲ್‌ ಚಾಂಪಿಯನ್‌’ ಆಗಿದ್ದೆ. ಆದರೆ ಸಿನಿಮಾ ನಟನೆಯ ಕಲ್ಪನೆ ಇರಲಿಲ್ಲ. ಕಾಲೇಜು ಮುಗಿದು ಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡ್ಕೊಂಡಿದ್ದೆ. ನನ್ನ ಎಂಗೇಜ್‌ಮೆಂಟ್‌ ಮತ್ತು ಮದುವೆ ಸಮಯದಲ್ಲಿ ಸಿನಿಮಾ ಅವಕಾಶಗಳು ಬಂದವು. ಆದರೆ ನನ್ನ ಹುಡುಗಿ ಒಪ್ಪದಿದ್ದ ಕಾರಣ ಮಾಡಲಿಲ್ಲ. ಮುಂದೆ ಆಕೆಯ ಮನಪರಿವರ್ತನೆ ಆಗಿ, ‘ನೀನು ಸಿನಿಮಾ ಮಾಡಬೇಕು’ ಅಂತ ಒತ್ತಾಯಿಸಿದ ಕಾರಣಕ್ಕೆ ಮತ್ತೆ ಸಿನಿಮಾ ರಂಗಕ್ಕೆ ಬಂದೆ. ಈಗ ಕಾರ್ಪೊರೇಟ್‌ ಟ್ರೈನರ್‌ - ಎನ್‌ಎಲ್‌ಬಿ ಮಾಸ್ಟರ್‌ ಕೋಚ್‌ ಆಗಿದ್ದೀನಿ. ಸಿನಿಮಾ, ಸೀರಿಯಲ್‌ನಲ್ಲೂ ನಟಿಸ್ತೀನಿ. ಸದ್ಯ ತೆಲುಗು, ಮಲಯಾಳಂ ಸಿನಿಮಾಗಳಲ್ಲೂ ನಟಿಸುತ್ತಿದ್ದೇನೆ. ಹೆಂಡತಿಗೆ ನಾನು ಒಳ್ಳೆಯವನು ಅಂತ ಗೊತ್ತಾಗಿದೆ. ಅವಳು ಖುಷಿಯಾಗಿದ್ದಾಳೆ.

PREV

Recommended Stories

ವೈರಲ್ ಆಗುತ್ತಿರುವ ಸುದೀಪ್‌ ಹೊಸ ಲುಕ್ಕು : ಗಮನ ಸೆಳೆಯುತ್ತಿರುವ ಹೊಸ ಹೇರ್ ಸ್ಟೈಲ್‌
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಮಿಳು ನಟ ಮದನ್ ಬಾಬ್ ನಿಧನ