ಟೆರರ್‌ ಡಾಕ್ಟರ್‌ ಬಳಿ ಜಪ್ತಾಗಿದ್ದ ಬಾಂಬ್‌ ಸಿಡಿದು 9 ಸಾವು

KannadaprabhaNewsNetwork |  
Published : Nov 16, 2025, 01:45 AM ISTUpdated : Nov 16, 2025, 04:29 AM IST
Shrinagar

ಸಾರಾಂಶ

ವೈದ್ಯ ಉಗ್ರರಿಂದ ವಶಪಡಿಸಿಕೊಂಡ ಭಾರೀ ಪ್ರಮಾಣದ ಸ್ಫೋಟಕಗಳನ್ನು ಪರಿಶೀಲಿಸುವ ವೇಳೆ, ಆ ಸ್ಫೋಟಕಗಳು ಆಕಸ್ಮಿಕವಾಗಿ ಸಿಡಿದು ಪೊಲೀಸ್‌ ಸಿಬ್ಬಂದಿ ಸೇರಿ 9 ಮಂದಿ ಮೃತಟ್ಟಿದ್ದಾರೆ ಹಾಗೂ 32 ಮಂದಿ ಗಾಯಗೊಂಡಿದ್ದಾರೆ.  

 ಶ್ರೀನಗರ :  ವೈದ್ಯ ಉಗ್ರರಿಂದ ವಶಪಡಿಸಿಕೊಂಡ ಭಾರೀ ಪ್ರಮಾಣದ ಸ್ಫೋಟಕಗಳನ್ನು ಪರಿಶೀಲಿಸುವ ವೇಳೆ, ಆ ಸ್ಫೋಟಕಗಳು ಆಕಸ್ಮಿಕವಾಗಿ ಸಿಡಿದು ಪೊಲೀಸ್‌ ಸಿಬ್ಬಂದಿ ಸೇರಿ 9 ಮಂದಿ ಮೃತಟ್ಟಿದ್ದಾರೆ ಹಾಗೂ 32 ಮಂದಿ ಗಾಯಗೊಂಡಿದ್ದಾರೆ. ಈ ಆಘಾತಕಾರಿ ಘಟನೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ನೌಗಾಮ್‌ ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಸ್ಫೋಟದ ತೀವ್ರತೆ ಭಾರೀ ಹೆಚ್ಚಿದ್ದ ಕಾರಣ, ಇದೊಂದು ಉಗ್ರ ದಾಳಿ ಇರಬಹುದು ಎಂಬ ಭಾರೀ ವದಂತಿ ಹಬ್ಬಿತ್ತು. ಆದರೆ ಇದನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಪೊಲೀಸ್‌ ಅಧಿಕಾರಿಗಳು, ಸ್ಫೋಟಕದ ತಪಾಸಣೆ ವೇಳೆ ಆಕಸ್ಮಿಕವಾಗಿ ಸಂಭವಿಸಿದ ದುರ್ಘಟನೆ ಇದು ಎಂದು ಸ್ಪಷ್ಟಪಡಿಸಿದ್ದಾರೆ. ಈ ನಡುವೆ ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ. ಅಲ್ಲದೆ ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 10 ಲಕ್ಷ ರು. ಪರಿಹಾರ ಪ್ರಕಟಿಸಿದೆ.

ಏನಾಯ್ತು?:

ಇತ್ತೀಚೆಗೆ ಹರ್ಯಾಣದ ಫರೀದಾಬಾದ್‌ನಲ್ಲಿ ಉಗ್ರ ವೈದ್ಯ ಮುಜಮ್ಮಿಲ್‌ಗೆ ಸೇರಿದ ಮನೆಯಿಂದ 360 ಕೆಜಿಯಷ್ಟು ಅಮೋನಿಯಂ ನೈಟ್ರೇಟ್‌ ವಶಪಡಿಸಿಕೊಳ್ಳಲಾಗಿತ್ತು. ಇದರ ತಪಾಸಣೆಗೆಂದು ಪೊಲೀಸರು, ವಿಧಿವಿಜ್ಞಾನ ತಜ್ಞರು, ಕಂದಾಯ ಇಲಾಖೆ ಅಧಿಕಾರಿಗಳು ಶುಕ್ರವಾರ ರಾತ್ರಿ ನೌಗಾಮ್‌ ಠಾಣೆಯಲ್ಲಿ ಸೇರಿದ್ದರು. ರಾತ್ರಿ 11.20ರ ವೇಳೆಗೆ ತಪಾಸಣೆಗೆ ಮಾದರಿ ಸಂಗ್ರಹಿಸಲು ಮುಂದಾದ ವೇಳೆ ಏಕಾಏಕಿ ಅದಕ್ಕೆ ಬೆಂಕಿಹತ್ತಿಕೊಂಡು ಭಾರೀ ಸ್ಫೋಟ ಸಂಭವಿಸಿದೆ. ಅಮೋನಿಯಂ ನೈಟ್ರೇಟ್‌ ಭಾರೀ ದಹನಕಾರಿ ವಸ್ತುವಾದ ಕಾರಣ ಕ್ಷಣಾರ್ಧದಲ್ಲಿ ಭಾರೀ ಸ್ಫೋಟದ ಸದ್ದಿನೊಂದಿಗೆ ಮುಗಿಲೆತ್ತರಕ್ಕೆ ಬೆಂಕಿ ಅಲೆ ಎದ್ದಿವೆ.

ಸ್ಫೋಟದ ತೀವ್ರತೆ ಮತ್ತು ಅಗ್ನಿಯ ಕೆನ್ನಾಲಿಗೆಗೆ ಸಿಕ್ಕು ಘಟನಾ ಸ್ಥಳದಲ್ಲೇ ವಿಧಿವಿಜ್ಞಾನ ಪ್ರಯೋಗಾಲಯದ ಮೂವರು ಸಿಬ್ಬಂದಿ, ಇಬ್ಬರು ಕ್ರೈಂ ಫೋಟೋಗ್ರಾಫರ್‌ಗಳು, ಇಬ್ಬರು ಕಂದಾಯ ಅಧಿಕಾರಿಗಳು, ಜಮ್ಮು ಮತ್ತು ಕಾಶ್ಮೀರ ಉಗ್ರ ನಿಗ್ರಹ ತಂಡದ ಒಬ್ಬ ಅಧಿಕಾರಿ ಮತ್ತು ಈ ತಂಡದೊಂದಿಗಿದ್ದ ಓರ್ವ ಟೈಲರ್‌ ಮೃತಪಟ್ಟಿದ್ದಾನೆ. 27 ಪೊಲೀಸರು, ಇಬ್ಬರು ಕಂದಾಯ ಅಧಿಕಾರಿಗಳು, ಮೂವರು ನಾಗರಿಕರು ಸೇರಿ 32 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಯಾಂಪಲ್‌ ಸಂಗ್ರಹ ಪ್ರಕ್ರಿಯೆ ಕಳೆದ ಎರಡು ದಿನಗಳಿಂದ ನಡೆಯುತ್ತಿದೆ. ಅಸ್ಥಿರ ಹಾಗೂ ತೀರಾ ಸೂಕ್ಷ್ಮ ಪ್ರಕ್ರಿಯೆಯ ಸ್ಫೋಟಕ ಆಗಿರುವ ಕಾರಣ ಸ್ಯಾಂಪಲ್‌ ಸಂಗ್ರಹ ಕಾರ್ಯವನ್ನು ಭಾರೀ ಎಚ್ಚರಿಕೆಯಿಂದ ನಡೆಸಲಾಗುತ್ತಿತ್ತು. ಆದರೂ ದುರಾದೃಷ್ಟವಶಾತ್‌ ರಾತ್ರಿ 11.20ರ ಸುಮಾರಿಗೆ ಅಚಾನಕ್‌ ಆಗಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

300 ಮೀ. ದೂರ ಅವಶೇಷ ಪತ್ತೆ:

ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಕೆಲವರ ದೇಹದ ಭಾಗಗಳು ಸುಮಾರು 300 ಮೀಟರ್‌ ದೂರದಲ್ಲಿ ಹರಡಿ ಬಿದ್ದಿದ್ದವು. ಘಟನೆ ವೇಳೆ ಹಲವು ವಾಹನಗಳೂ ಬೆಂಕಿಗಾಹುತಿಯಾಗಿವೆ. ಇಡೀ ಪ್ರದೇಶದಲ್ಲಿ ಅವಶೇಷಗಳ ರಾಶಿ ಹರಡಿ ಬಿದ್ದಿದ್ದು ಕಂಡುಬಂದಿದೆ.

ಟ್ರಕ್‌ನಲ್ಲಿ ಬಾಂಬ್‌ ಸಾಗಾಟ:

ನ.9 ಮತ್ತು 10ರಂದು ದೆಹಲಿ ಸ್ಫೋಟಕ್ಕೂ ಮುನ್ನ ಫರೀದಾಬಾದ್‌ನಲ್ಲಿ ಉಗ್ರ ವೈದ್ಯರಿಂದ ಅಮೋನಿಯಂ ನೈಟ್ರೇಟ್‌ ಮತ್ತಿತರ ರಾಸಾಯನಿಕಗಳು ಸೇರಿ 360 ಕೆ.ಜಿ. ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಸ್ಫೋಟಕಗಳನ್ನು ಟ್ರಕ್‌ನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಾಗಿಸಲಾಗಿತ್ತು. ಸಣ್ಣ ಸಣ್ಣ ಬ್ಯಾಗ್‌ಗಳಲ್ಲಿದ್ದ ಈ ಸ್ಫೋಟಕಗಳನ್ನು ನೌಗಾಮ್‌ ಪೊಲೀಸ್‌ ಠಾಣೆ ಆವರಣದಲ್ಲಿ ಇರಿಸಲಾಗಿತ್ತು. ವೈದ್ಯ ಉಗ್ರರ ಸಂಚಿನ ಕುರಿತು ಪ್ರಾಥಮಿಕ ಪ್ರಕರಣ ನೌಗಾಮ್‌ ಠಾಣೆಯಲ್ಲೇ ದಾಖಲಾಗಿದ್ದ ಹಿನ್ನೆಲೆಯಲ್ಲಿ ಆ ಸ್ಫೋಟಕಗಳನ್ನು ಇಲ್ಲಿಗೇ ತರಲಾಗಿತ್ತು.

ಹೊಸ ಫೋಟೋ!

ದಿಲ್ಲಿ ಕೆಂಪುಕೋಟೆ ಹೊರಗಡೆ ಕಾರು ಬಾಂಬ್‌ ಸ್ಫೋಟಿಸಿ 13 ಜನರ ಬಲಿ ಪಡೆದ ಕಾಶ್ಮೀರ ಮೂಲದ ವೈದ್ಯ ಡಾ। ಉಮರ್ ನಬಿ, ವೈದ್ಯಕೀಯ ಉಡುಪಿನಲ್ಲಿರುವ ಹೊಸ ಫೋಟೋ ಬಿಡುಗಡೆ ಆಗಿದೆ

ದಿಲ್ಲಿ ಸ್ಫೋಟಕ್ಕೆ 2 ಕೇಜಿ ಅಮೋನಿಯಂ ನೈಟ್ರೇಟ್‌,ಪೆಟ್ರೋಲಿಯಂ ಬಳಕೆ

ನವದೆಹಲಿ: 13 ಜನರನ್ನು ಬಲಿಪಡೆದ ದೆಹಲಿಯ ಕೆಂಪುಕೋಟೆ ಬಳಿ, ವೈದ್ಯ ಉಗ್ರ ಡಾ। ಉಮರ್ ನಬಿ ನಡೆಸಿದ ಕಾರು ಬಾಂಬ್‌ ಸ್ಫೋಟಕ್ಕೆ 2 ಕೇಜಿಗೂ ಅಧಿಕ ಅಮೋನಿಯಂ ನೈಟ್ರೇಟ್‌ ಮತ್ತು ಪೆಟ್ರೋಲಿಯಂ ಬಳಕೆಯಾಗಿದೆ ಎಂದು ಗೊತ್ತಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬಂಗಾಳಕೊಲ್ಲೀಲಿ ವಾಯುಭಾರ ಕುಸಿತ : ಭಾರೀ ಮಳೆ ಎಚ್ಚರಿಕೆ
ಜಿ ರಾಮ್‌ ಜಿ ವಿರುದ್ಧ ಕೈ ಹೋರಾಟ ಶುರು