ಕಾಂಗ್ರೆಸ್‌ ಈಗ ‘ಮುಸ್ಲಿಂ ಲೀಗ್‌-ಮಾವೋ’ ಪಕ್ಷ: ಮೋದಿ

KannadaprabhaNewsNetwork |  
Published : Nov 16, 2025, 01:45 AM ISTUpdated : Nov 16, 2025, 04:37 AM IST
PM Modi

ಸಾರಾಂಶ

ಕಾಂಗ್ರೆಸ್‌ ಪಕ್ಷ ಮುಸ್ಲಿಂ ಲೀಗ್‌-ಮಾವೋವಾದಿ ಕಾಂಗ್ರೆಸ್‌ ಆಗಿ ಬದಲಾಗಿದೆ. ಬಿಹಾರದ ಜನತೆ ಜಾತಿವಾದದ ವಿಷವನ್ನು ಬಿತ್ತಿದ್ದವರನ್ನು ತಿರಸ್ಕರಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ ವಿರುದ್ಧ ಶನಿವಾರ ಟೀಕಾಪ್ರಹಾರ ನಡೆಸಿದ್ದಾರೆ.

ಸೂರತ್‌: ಕಾಂಗ್ರೆಸ್‌ ಪಕ್ಷ ಮುಸ್ಲಿಂ ಲೀಗ್‌-ಮಾವೋವಾದಿ ಕಾಂಗ್ರೆಸ್‌ ಆಗಿ ಬದಲಾಗಿದೆ. ಬಿಹಾರದ ಜನತೆ ಜಾತಿವಾದದ ವಿಷವನ್ನು ಬಿತ್ತಿದ್ದವರನ್ನು ತಿರಸ್ಕರಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ ವಿರುದ್ಧ ಶನಿವಾರ ಟೀಕಾಪ್ರಹಾರ ನಡೆಸಿದ್ದಾರೆ.

ಬಿಹಾರ ಗೆಲುವಿನ ಹಿನ್ನೆಲೆಯಲ್ಲಿ ತಮಗೆ ಸೂರತ್‌ನಲ್ಲಿ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜನರು ಮುಸ್ಲಿಂ ಲೀಗ್-ಮಾವೋವಾದಿ ಕಾಂಗ್ರೆಸ್ (ಎಂಎಂಸಿ) ಪಕ್ಷವನ್ನು ತಿರಸ್ಕರಿಸಿದ್ದಾರೆ. ಅಷ್ಟೇ ಅಲ್ಲ, ಇಂದಿರಾ ಗಾಂಧಿ ಮತ್ತು ರಾಜೀವ್‌ ಗಾಂಧಿ ಅವರೊಂದಿಗೆ ಕೆಲಸ ಮಾಡಿದ ಆ ಪಕ್ಷದಲ್ಲಿನ ರಾಷ್ಟ್ರೀಯವಾದಿ ನಾಯಕರು ‘ನಾಮ್‌ದಾರ್’ (ರಾಹುಲ್ ಗಾಂಧಿ) ಅವರ ಸಾಹಸಗಳಿಂದಾಗಿ ದುಃಖಿತರಾಗಿದ್ದಾರೆ. ಬಿಹಾರ ಚುನಾವಣೆ ಜಾತಿವಾದದ ವಿಷ ಬಿತ್ತಿದವರನ್ನು ಜನರು ತಿರಸ್ಕರಿಸಿದ್ದಾರೆ ಎಂಬುದನ್ನು ತೋರಿಸಿದೆ’ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ, ‘ಕಾಂಗ್ರೆಸ್ ತನ್ನ ಮಿತ್ರಪಕ್ಷಗಳಿಗೆ ಮತ್ತು ಕಾರ್ಯಕರ್ತರಿಗೆ ಸೋಲಿನ ಬಗ್ಗೆ ವಿವರಿಸಲು ಸಾಧ್ಯವಿಲ್ಲ. ಹಾಗಾಗಿ ಇವಿಎಂ, ಚುನಾವಣಾ ಆಯೋಗ ಮತ್ತು ಮತಪಟ್ಟಿ ಪರಿಷ್ಕರಣೆಯನ್ನು ದೂಷಿಸುವ ಮೂಲಕ ಸುಲಭವಾದ ಮಾರ್ಗವನ್ನು ಕಂಡುಕೊಂಡಿದೆ’ ಎಂದು ಕುಟುಕಿದರು.

ಸೋಲಿನ ಬಗ್ಗೆ ಖರ್ಗೆ- ರಾಹುಲ್‌ ಚರ್ಚೆ

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯ ನಿರಾಶಾದಾಯಕ ಫಲಿತಾಂಶದ ಬೆನ್ನಲ್ಲೇ, ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಹಿರಿಯ ನಾಯಕ ರಾಹುಲ್‌ ಗಾಂಧಿ ಮತ್ತಿತರೆ ನಾಯಕರು ಶನಿವಾರ ಇಲ್ಲಿ ಸಭೆ ನಡೆಸಿ ಸೋಲಿನ ಪರಾಮರ್ಶೆ ನಡೆಸಿದ್ದಾರೆ.

ಸ್ಪರ್ಧಿಸಿದ್ದ 61 ಸ್ಥಾನಗಳ ಪೈಕಿ ಕೇವಲ 6ರಲ್ಲಿ ಮಾತ್ರವೇ ಕಾಂಗ್ರೆಸ್‌ ಜಯಗಳಿಸಿತ್ತು. ಈ ಹಿನ್ನೆಲೆಯಲ್ಲಿ ಸೋಲಿಗೆ ಕಾರಣವಾದ ಅಂಶಗಳ ಬಗ್ಗೆ ಖರ್ಗೆ, ರಾಹುಲ್‌, ಪಕ್ಷದ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ವೇಣುಗೋಪಾಲ್‌, ಖಜಾಂಚಿ ಅಜಯ್ ಮಾಕೆನ್‌, ಬಿಹಾರ ಕಾಂಗ್ರೆಸ್‌ ಉಸ್ತುವಾರಿ ಕೃಷ್ಣ ಅಲ್ಲಾವರು ಚರ್ಚೆ ನಡೆಸಿದರು. ಇದು 2010ರ (ಕೇವಲ 4 ಸ್ಥಾನ)ರ ಬಳಿಕ ಪಕ್ಷದ ಅತ್ಯಂತ ಕಳಪೆ ಸಾಧನೆಯಾಗಿದೆ.

ಕಾಂಗ್ರೆಸ್‌ ಸೋಲಿಗೆ ಆಯೋಗ ಕಾರಣ: ವೇಣು

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ಪೂರ್ಣ ಹೊಣೆಯನ್ನು ಚುನಾವಣಾ ಆಯೋಗದ ಮೇಲೆ ಹೊರಿಸಿರುವ ಕಾಂಗ್ರೆಸ್, ಚುನಾವಣಾ ಅಕ್ರಮದ ಕುರಿತು ಮುಂದಿನ ದಿನಗಳಲ್ಲಿ ಸಾಕ್ಷ್ಯ ಬಿಡುಗಡೆ ಮಾಡುವುದಾಗಿ ಹೇಳಿದೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌, ಇದು ನಂಬಲಾಗದ ಫಲಿತಾಂಶ. ಇದು ನಮಗೆ ಮಾತ್ರವಲ್ಲ, ಇಡೀ ಬಿಹಾರದ ಜನತೆಗೆ ಆಘಾತ ತಂದಿದೆ.

ಯಾವುದೇ ಪಕ್ಷವೊಂದಕ್ಕೆ ಶೆ.90ರಷ್ಟು ಸ್ಟ್ರೈಕ್‌ರೇಟ್‌ ಬಂದಿರುವುದು ದೇಶದ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲು. ಹೀಗಾಗಿ ನಾವು ಬಿಹಾರದಿಂದ ಈ ಕುರಿತು ದಾಖಲೆಗಳನ್ನು ಸಂಗ್ರಹಿಸುತ್ತಿದ್ದೇವೆ. ಅದನ್ನು ಅಧ್ಯಯನ ಮಾಡಿ ಬಳಿಕ ಒಂದೆರೆಡು ವಾರದಲ್ಲಿ ಸೂಕ್ತ ಸಾಕ್ಷ್ಯಗಳನ್ನು ಬಿಡುಗಡೆ ಮಾಡಲಿದ್ದೇವೆ. ಚುನಾವಣಾ ಆಯೋಗ ಒಂದು ಪಕ್ಷದ ಪರವಾಗಿತ್ತು. ಇಡೀ ಪ್ರಕ್ರಿಯೆಯಲ್ಲಿ ಯಾವುದೇ ಪಾರದರ್ಶಕತೆ ಇರಲಿಲ್ಲ ಎಂದು ಹೇಳಿದ್ದಾರೆ.

PREV
Read more Articles on

Recommended Stories

ಎನ್‌ಡಿಎ ಜಯ ಹಿಂದೆ ಆರೆಸ್ಸೆಸ್‌ ‘ಮಿಷನ್‌ ತ್ರಿಶೂಲ್‌’!
ಟೆರರ್‌ ಡಾಕ್ಟರ್‌ ಬಳಿ ಜಪ್ತಾಗಿದ್ದ ಬಾಂಬ್‌ ಸಿಡಿದು 9 ಸಾವು