ನವದೆಹಲಿ: ಇಲ್ಲಿನ ಮಂಡೋಲಿ ಜೈಲಿನಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ಯಾವುದಾದರೂ ಜೈಲಿಗೆ ತನ್ನನ್ನು ಸ್ಥಳಾಂತರಿಸುವಂತೆ ಕೋರಿ ಆರೋಪಿ ಹಲವು ಉದ್ಯಮಿಗಳಿಗೆ ನೂರಾರು ಕೋಟಿ ವಂಚಿಸಿದ ಸುಕೇಶ್ ಚಂದ್ರಶೇಖರ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ. ಜತೆಗೆ, ಕಾನೂನನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದೀರೆಂದು ಛೀಮಾರಿ ಹಾಕಿದೆ. ನಿಮ್ಮ ಬಳಿ ಖರ್ಚು ಮಾಡಲು ಹಣವಿದೆಯೆಂದು ಅವಕಾಶಗಳನ್ನು ತೆಗೆದುಕೊಳ್ಳುತ್ತಿದ್ದೀರಿ. ಇದೇ ಮನವಿಯುಳ್ಳ ಅರ್ಜಿಗಳನ್ನು ಪದೇ ಪದೇ ಹೇಗೆ ಸಲ್ಲಿಸುತ್ತಿದ್ದೀರಿ ಎಂದು ಪ್ರಶ್ನಿಸಿದೆ. ಕುಟುಂಬದ ಸಮೀಪ ಇರಲು ಅನುವಾಗುವಂತೆ ಕರ್ನಾಟಕ ಜೈಲಿಗೆ ವರ್ಗ ಮಾಡುವಂತೆ ಸುಕೇಶ್ ಮನವಿ ಮಾಡಿದ್ದ.
==ಚಿನ್ನದ ಬೆಲೆ 300 ರು. ಏರಿಕೆ: 10 ಗ್ರಾಂಗೆ ಇದೀಗ ₹88500!
ನವದೆಹಲಿ: ಜಾಗತಿಕ ಆರ್ಥಿಕ ಅನಿಶ್ಚತತೆ ನಡುವೆಯೇ ಚಿನ್ನದ ಬೆಲೆ ಮತ್ತಷ್ಟು ಏರಿಕೆ ಕಂಡಿದೆ. ಬುಧವಾರ ಇಲ್ಲಿ ಪ್ರತಿ 10 ಗ್ರಾಂ ಶೇ.99.9 ಪರಿಶುದ್ಧತೆಯ ಚಿನ್ನದ ಬೆಲೆ 300 ರು.ನಷ್ಟು ಏರಿಕೆ ಕಂಡು 88500 ರು.ಗೆ ತಲುಪಿದೆ. ಇನ್ನು ಶೇ.99.5 ಶುದ್ಧತೆಯ ಚಿನ್ನದ ಬೆಲೆ 88200 ರು.ಗೆ ತಲುಪಿದೆ. ಇನ್ನೊಂದೆಡೆ ಬೆಳ್ಳಿ ಧಾರಣೆಯು ಪ್ರತಿ ಕೆ.ಜಿ.ಗೆ 800 ರು. ಹೆಚ್ಚಳವಾಗಿ 99,000 ರು. ತಲುಪಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ತಿಳಿಸಿದೆ.
==1ನೇ ತರಗತಿಗೆ ಪ್ರವೇಶ ಪರೀಕ್ಷೆಗೆ ಅನುಮತಿ ಇಲ್ಲ: ಕೇರಳ ಸರ್ಕಾರ
ತಿರುವನಂತಪುರಂ: ಒಂದನೇ ತರಗತಿ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಕೆಲವು ಶಾಲೆಗಳು ಪ್ರವೇಶ ಪರೀಕ್ಷೆಗಳನ್ನು ನಡೆಸುವ ಪದ್ಧತಿಯನ್ನು ಕೇರಳ ಸರ್ಕಾರ ವಿರೋಧಿಸಿದ್ದು, ರಾಜ್ಯದಲ್ಲಿ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಕೇರಳ ಶಿಕ್ಷಣ ಸಚಿವ ವಿ.ಶಿವನ್ಕುಟ್ಟಿ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವ ಶಿವನ್ಕುಟ್ಟಿ ‘ಕೆಲವು ಶಾಲೆಗಳು ಒಂದನೇ ತರಗತಿ ಪ್ರವೇಶಕ್ಕೂ ಪರೀಕ್ಷೆ ನಡೆಸುತ್ತಿವೆ, ಸಂದರ್ಶನ ನಡೆಸುತ್ತಿವೆ.. ಮೊದಲನೇ ತರಗತಿಗೆ ಇಂಥದೆಲ್ಲಾ ಅಗತ್ಯವಿದೆಯೇ ಎಂದು ಚಿಂತಿಸುವ ಸಮಯವಿದು. ಇದಕ್ಕೆಲ್ಲಾ ರಾಜ್ಯದಲ್ಲಿ ಅವಕಾಶ ನೀಡುವುದಿಲ್ಲ’ ಎಂದು ಹೇಳಿದ್ದಾರೆ.
==ಕುಂಭಮೇಳ ಅವಧಿಯಲ್ಲಿ ವಿಸ್ತರಣೆ ಇಲ್ಲ: ವದಂತಿಗೆ ಪ್ರಯಾಗ್ರಾಜ್ ಡಿಸಿ ಸ್ಪಷ್ಟನೆ
ಪ್ರಯಾಗ್ರಾಜ್: ಮಹಾಕುಂಭ ಮೇಳದ ಅವಧಿ ವಿಸ್ತರಣೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹಬ್ಬುತ್ತಿರುವ ವದಂತಿಗಳಿಗೆ ಪ್ರಯಾಗ್ರಾಜ್ ಜಿಲ್ಲಾಧಿಕಾರಿ ರವೀಂದ್ರ ಮಂದರ್ ತೆರೆ ಎಳೆದಿದ್ದಾರೆ. ಮಹಾಕುಂಭದ ಅವಧಿಯು ಧಾರ್ಮಿಕ ಮುಹೂರ್ತಗಳ ಮೇಲೆ ನಿರ್ಧರಿತವಾಗಿದ್ದು, ಫೆ.26ರ ಶಿವರಾತ್ರಿಯಂದು ಕೊನೆಗೊಳ್ಳಲಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮೇಳದ ದಿನಾಂಕ ವಿಸ್ತರಿಸುವ ಯಾವುದೇ ಪ್ರಸ್ತಾಪ ಸರ್ಕಾರ ಅಥವಾ ಜಿಲ್ಲಾಡಳಿತದ ಮುಂದಿಲ್ಲ ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾಧವ್ ಅವಧಿ ವಿಸ್ತರಣೆಗೆ ಮನವಿ ಮಾಡಿದ್ದರು. ಕುಂಭಮೇಳಕ್ಕೆ ಈವರೆಗೆ 55 ಕೋಟಿ ಜನರು ಭೇಟಿ ನೀಡಿದ್ದಾರೆ.
==ಇದು ಮಹಾ ಕುಂಭ ಅಲ್ಲ, ಮೃತ್ಯು ಕುಂಭ: ಬಂಗಾಳ ಸಿಎಂ ಮಮತಾ ಕಿಡಿ
ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡುವ ಭರದಲ್ಲಿ ಮಹಾಕುಂಭಮೇಳವನ್ನು ಮೃತ್ಯು ಕುಂಭ ಮೇಳ ಎಂದು ಕರೆದಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಮಮತಾ, ನನಗೆ ಕುಂಭಮೇಳದ ಬಗ್ಗೆ ಗೌರವವಿದೆ. ಗಂಗಾಮಾತೆಯ ಬಗ್ಗೆ ಗೌರವವಿದೆ. ಆದರೆ ಪ್ರಯಾಗದಲ್ಲಿನ ಕುಂಭಮೇಳವು ಮೃತ್ಯುಕುಂಭಮೇಳವಾಗಿದೆ. ಕಾಲ್ತುಳಿತಕ್ಕೆ ಉತ್ತರ ಪ್ರದೇಶ ಸರ್ಕಾರ ಕಾರಣ ನೀಡಿಲ್ಲ. ಮೃತಪಟ್ಟವರಿಗೆ ಪರಿಹಾರ ನೀಡಿಲ್ಲ. ಕಾಲ್ತುಳಿತದಲ್ಲಿ ಹತರಾದ ಬಂಗಾಳದವರ ಮರಣೋತ್ತರ ಪರೀಕ್ಷೆಯನ್ನು ಯೋಗಿ ಸರ್ಕಾರ ನಡೆಸಲಿಲ್ಲ. ಅದನ್ನೂ ನಾವೇ ಮಾಡಿದೆವು. ಸಾವಿನ ಸಂಖ್ಯೆಯನ್ನು ಸಹ ಸರಿಯಾಗಿ ಕೊಟ್ಟಿಲ್ಲ’ ಎಂದು ದೂರಿದರು.