ಪೆಟ್ರೋಲ್‌, ಡೀಸೆಲ್‌ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ 10 ರು.ನಷ್ಟು ಕಡಿತ

Published : Mar 28, 2026, 04:14 AM IST
 india

ಸಾರಾಂಶ

ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆಯಾಗುತ್ತಿರುವ ತೈಲ ದರದ ಬಿಸಿ ತೈಲ ಕಂಪನಿಗಳಿಗೆ ತಟ್ಟುವುದನ್ನು ತಡೆಯಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 

  ನವದೆಹಲಿ :  ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆಯಾಗುತ್ತಿರುವ ತೈಲ ದರದ ಬಿಸಿ ತೈಲ ಕಂಪನಿಗಳಿಗೆ ತಟ್ಟುವುದನ್ನು ತಡೆಯಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ವಿಧಿಸುತ್ತಿರುವ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ತಲಾ 10 ರು.ನಷ್ಟು ಕಡಿತಗೊಳಿಸಿದೆ.

ವಿಶೇಷ ಹೆಚ್ಚುವರಿ ಅಬಕಾರಿ ಸುಂಕವು ತೈಲ ಮಾರುಕಟ್ಟೆ ಕಂಪನಿಗಳು ಸರ್ಕಾರಕ್ಕೆ ಪಾವತಿಸುವ ತೆರಿಗೆಯಾಗಿದೆ. ಆ ದರವು ಈಗ ಇಳಿದಿದೆ. ಹೋಗಾಗಿ ಇದರ ಇಳಿಕೆಯಿಂದ ಬಂಕ್‌ಗಳಲ್ಲಿನ ದರ ಇಳಿಯುವುದಿಲ್ಲ. ಇಳಿಕೆಯ ನೇರ ಲಾಭವು ಗ್ರಾಹಕರ ಬದಲು, ತೈಲ ಮಾರಾಟ ಸಂಸ್ಥೆಗಳಿಗೆ ಸಿಗಲಿದೆ. ಅಂದರೆ ಇಳಿಕೆಯಾದ ಸುಂಕದ ಮೊತ್ತವನ್ನು ತೈಲ ಕಂಪನಿಗಳು ಗರಿಷ್ಠ ಮಾರಾಟ ದರದಲ್ಲೇ ಸರಿದೂಗಿಸುತ್ತವೆ.

ವರ್ಷವೊಂದರಲ್ಲಿ ದೇಶದಲ್ಲಿ 17,500 ಕೋಟಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ಮಾರಾಟವಾಗುತ್ತಿದ್ದು, ಈ ಸುಂಕ ಕಡಿತದ ನಿರ್ಧಾರದಿಂದ ಸರ್ಕಾರಕ್ಕೆ ವಾರ್ಷಿಕ 1.75 ಲಕ್ಷ ಕೋಟಿ ರು. ಆದಾಯ ನಷ್ಟ ಆಗಲಿದೆ ಎಂದು ಅಂದಾಜಿಸಲಾಗಿದೆ.

3 ರು. ಹಾಗೂ ಶೂನ್ಯಕ್ಕೆ ಇಳಿಕೆ:

ಕೇಂದ್ರದ ಈ ನಿರ್ಧಾರದಿಂದ ಪ್ರತಿ ಲೀಟರ್‌ ಪೆಟ್ರೋಲ್‌ ಮೇಲೆ ಈವರೆಗೆ ವಿಧಿಸಲಾಗುತ್ತಿದ್ದ 13 ರು. ವಿಶೇಷ ಹೆಚ್ಚುವರಿ ಅಬಕಾರಿ ಸುಂಕ 3 ರು.ಗೆ ಹಾಗೂ ಡೀಸೆಲ್‌ ಮೇಲೆ ವಿಧಿಸಲಾಗುತ್ತಿದ್ದ 10 ರು. ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಇನ್ನು ಶೂನ್ಯಕ್ಕಿಳಿಯಲಿದೆ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ 1 ತಿಂಗಳಲ್ಲಿ 30 ಡಾಲರ್‌ನಷ್ಟು ಏರಿಕೆಯಾಗಿದ್ದರೂ ದೇಶದಲ್ಲಿ ಕಡಿಮೆ ದರದಲ್ಲೇ ಪೆಟ್ರೋಲ್‌, ಡೀಸೆಲ್‌ ಅನ್ನು ತೈಲ ಕಂಪನಿಗಳು ಮಾರಾಟ ಮಾಡುತ್ತಿವೆ. ಇದರಿಂದ ತೈಲ ಮಾರುಕಟ್ಟೆ ಕಂಪನಿಗಳಿಗೆ ಭಾರೀ ನಷ್ಟ ಆಗುತ್ತಿತ್ತು. ಈ ನಷ್ಟ ಸರಿದೂಗಿಸಲು ಕೇಂದ್ರ ಈ ನಿರ್ಧಾರ ತೆಗೆದುಕೊಂಡಿದೆ.

ಸುಂಕದ ಪ್ರಮಾಣ ಎಷ್ಟು?:

ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಪೆಟ್ರೋಲ್‌ ಮೇಲಿನ ಒಟ್ಟಾರೆ ಅಬಕಾರಿ ಸುಂಕ ಈ ಮುಂಚಿನ 21.90 ರು.ನಿಂದ 11.9 ರು.ಗೆ ಇಳಿಯಲಿದೆ. ಇದರಲ್ಲಿ 1.40 ರು. ಮೂಲ ಅಬಕಾರಿ ಸುಂಕ, 3 ರು. ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಮತ್ತು 2.50 ಕೃಷಿ ಮೂಲಸೌಲಭ್ಯ ಮತ್ತು ಅಭಿವೃದ್ಧಿ ಸುಂಕ, 5 ರು. ರಸ್ತೆ ಮತ್ತು ಮೂಲಸೌಲಭ್ಯ ಸುಂಕ ಸೇರಿದೆ.

ಇನ್ನು ಡೀಸೆಲ್‌ ಮೇಲಿನ ಸುಂಕ ಪ್ರತಿ ಲೀಟರ್‌ಗೆ 17.80 ರು.ನಿಂದ 7.80 ರು.ಗೆ ಇಳಿಕೆಯಾಗಲಿದೆ. ಇದರಲ್ಲಿ 1.80 ಮೂಲ ಅಬಕಾರಿ ಸುಂಕ, 4 ರು. ಕೃಷಿ ಮೂಲಸೌಲಭ್ಯ ಮತ್ತು ಅಭಿವೃದ್ಧಿ ಸುಂಕ ಹಾಗೂ 2 ರು. ರಸ್ತೆ ಮತ್ತು ಮೂಲಸೌಲಭ್ಯ ಸುಂಕ ಇರಲಿದೆ.

ಕಾಂಗ್ರೆಸ್ ಕಿಡಿ:

‘ಸರ್ಕಾರದ ಅಬಕಾರಿ ಸುಂಕ ಕಡಿತವು ವಿತರಕರು ಮತ್ತು ಗ್ರಾಹಕರಿಗೆ ಬೆಲೆಗಳನ್ನು ಬದಲಾಯಿಸುವುದಿಲ್ಲ ಮತ್ತು ಪರಿಹಾರವು ನಿರೂಪಣೆಯಲ್ಲಿ ಮಾತ್ರ ಅಸ್ತಿತ್ವದಲ್ಲಿದೆ, ವಾಸ್ತವದಲ್ಲಿ ಅಲ್ಲ’ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಕಿಡಿಕಾರಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಯುದ್ಧದಿಂದ ಸವಾಲಿನ ಪರಿಸ್ಥಿತಿ - ಟೀಂ ಇಂಡಿಯಾ ಆಗಿ ಕೆಲಸ ಮಾಡೋಣ : ಮೋದಿ ಪರಿಹಾರಗಳು
ಇಂದು ರೋಮಾಂಚನದನಡೆ: ಅಮೆರಿಕದ ಸಸ್ಪೆನ್ಸ್‌- ಇರಾನ್‌ ಯುದ್ಧ ಮಧ್ಯೆಯೇ ಶ್ವೇತಭವನ ಪೋಸ್ಟ್‌- ಏನದು ಘೋಷಣೆ ಎಂದು ವಿಶ್ವಾದ್ಯಂತ ಕುತೂಹಲ