ಶ್ರೀಶೈಲ: ಜಗನ್ಮೋಹನ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಿರುಪತಿಗೆ ಮಾತ್ರವಲ್ಲ, ಶ್ರೀಶೈಲ ಮಲ್ಲಿಕಾರ್ಜುನ ದೇಗುಲಕ್ಕೂ ಕಲಬೆರಕೆಯ ತುಪ್ಪ ಪೂರೈಕೆಯಾಗಿತ್ತು. ಇದೇ ತುಪ್ಪ ಬಳಸಿ ಲಡ್ಡು ಹಾಗೂ ಇತರ ಪ್ರಸಾದ ಸಿದ್ಧಪಡಿಸಲಾಗುತ್ತಿತ್ತು ಎಂಬುದನ್ನು ಸಿಬಿಐ ವಿಶೇಷ ತನಿಖಾ ತಂಡದ (ಎಸ್ಐಟಿ) ವರದಿ ಖಚಿತಪಡಿಸಿದೆ.
ಮೇ 2022 ರಿಂದ ಮಾರ್ಚ್ 2023ರ ನಡುವೆ ಶ್ರೀಶೈಲಕ್ಕೆ ಕಲಬೆರಕೆ ತುಪ್ಪ ಪೂರೈಸಲಾಗಿದೆ. ತಿರುಪತಿಗೆ ಕಲಬೆರಕೆ ತುಪ್ಪ ಪೂರೈಸಿದ್ದ ಭೋಲೇ ಬಾಬಾ ಡೈರಿಯಿಂದಲೇ ರಾಜೇಶ್ ಕಾರ್ಪೊರೇಷನ್ ಸಂಸ್ಥೆ ಈ ತುಪ್ಪ ಖರೀದಿಸಿ ಶ್ರೀಶೈಲಕ್ಕೆ ಪೂರೈಸಿದೆ. ಭೋಲೇ ಬಾಬಾ ಡೈರಿ ಪೂರೈಸಿದ ತುಪ್ಪವನ್ನು ಸಸ್ಯಜನ್ಯ ತೈಲ ಮತ್ತು ಕೆಲ ರಾಸಾಯನಿಕಗಳ ಮಿಶ್ರಣದಿಂದ ತಯಾರಿಸಲಾಗಿದೆ ಎಂದು ಎಸ್ಐಟಿ ಹೇಳಿದೆ.
ಸಾಮಾನ್ಯವಾಗಿ ಶ್ರೀಶೈಲ ದೇವಸ್ಥಾನ ಹಿಂದಿನಿಂದಲೂ ನಂದ್ಯಾಲದ ವಿಜಯ್ ಡೈರಿಯಿಂದ ತುಪ್ಪ ಖರೀದಿಸುತ್ತಾ ಬಂದಿದೆ. ಆದರೆ ವೈಎಸ್ಆರ್ಸಿ ಸರ್ಕಾರದ ಅವಧಿಯಲ್ಲಿ ದರದ ವಿಚಾರವಾಗಿ ವಿವಾದ ತಲೆದೋರಿ ರಾಜೇಶ್ ಕಾರ್ಪೊರೇಷನ್ ಪ್ರತಿ ಕೆ.ಜಿ.ಗೆ. 489 ರು.ನಲ್ಲಿ ತುಪ್ಪಪೂರೈಸುವ ಟೆಂಡರ್ ಪಡೆದಿತ್ತು. ಇದೇ ವೇಳೆ, ವಿಜಯ್ ಡೈರಿಯನ್ನು ಮೊದಲೇ ಪ್ಲ್ಯಾನ್ ಮಾಡಿ ತುಪ್ಪ ಪೂರೈಕೆದಾರನ ಸ್ಥಾನದಿಂದ ತೆಗೆದುಹಾಕಲಾಗಿತ್ತು ಎಂಬ ಆರೋಪವೂ ಇದೆ.
ಮೇ 2022 ರಿಂದ ಮಾರ್ಚ್ 2023ರ ನಡುವೆ ಮಾತ್ರ 3.25 ಲಕ್ಷ ಕೆ.ಜಿ. ತುಪ್ಪವನ್ನು 15.89 ಕೋಟಿ ರು. ವೆಚ್ಚದಲ್ಲಿ ರಾಜೇಶ್ ಕಾರ್ಪೊರೇಷನ್ನಿಂದ ಶ್ರೀಶೈಲ ದೇಗುಲ ಖರೀದಿಸಿದೆ.