- 30 ಶಾಸಕರ ಬೆಂಬಲ ಸಾಧ್ಯತೆ । ಎಡಿಎಂಕೆ ಇಬ್ಭಾಗ ಖಚಿತ?
---
ಇಂದು ವಿಜಯ್ಗೆವಿಶ್ವಾಸಮತ
ಚೆನ್ನೈ: ಬುಧವಾರ ವಿಧಾನಸಭೆಯಲ್ಲಿ ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಕೋರಲಿದ್ದಾರೆ. ಇತ್ತೀಚೆಗೆ ಅವರು ಕಾಂಗ್ರೆಸ್ ಹಾಗೂ ಕೆಲ ಪಕ್ಷಗಳ ಬೆಂಬಲ ಗಿಟ್ಟಿಸಿ 120 ಸದಸ್ಯ ಬಲದಿಂದ ಅಧಿಕಾರಕ್ಕೆ ಬಂದಿದ್ದರು. ಬಹುಮತ ಸಾಬೀತಿಗೆ ರಾಜ್ಯಪಾಲರು ಮೇ 13ರ ಗಡುವು ವಿಧಿಸಿದ್ದರು.---
ಚೆನ್ನೈ: ಟಿವಿಕೆ ಸರ್ಕಾರ ಬೆಂಬಲಿಸುವ ಕುರಿತು ಅಣ್ಣಾಡಿಎಂಕೆ ಪಕ್ಷದಲ್ಲಿ ಕಾಣಿಸಿಕೊಂಡ ಭಿನ್ನಮತ ಬಹುತೇಕ ಸ್ಫೋಟಗೊಂಡಿದ್ದು, ಯಾವುದೇ ಕ್ಷಣದಲ್ಲಿ ಪಕ್ಷ ಎರಡು ಹೋಳಾಗುವುದು ನಿಚ್ಚಳವಾಗಿದೆ. ಇದಕ್ಕೆ ಪೂರಕವೆಂಬಂತೆ ಮುಖಂಡರಾದ ಎ.ಪಿ.ವೇಲುಸ್ವಾಮಿ ಮತ್ತು ಸಿ.ವಿ.ಷಣ್ಮುಗಂ ನೇತೃತ್ವದ 30 ಶಾಸಕರ ಎಐಎಡಿಎಂಕೆಯ ಬಂಡಾಯ ಬಣ, ಮಂಗಳವಾರ ಮುಖ್ಯಮಂತ್ರಿ ವಿಜಯ್ ನೇತೃತ್ವದ ಟಿವಿಕೆ ಸರ್ಕಾರಕ್ಕೆ ಬಹಿರಂಗವಾಗಿ ಬೆಂಬಲ ಘೋಷಿಸಿದೆ.
ಆದಾಗ್ಯೂ ವಿಶ್ವಾಸಮತ ಯಾಚನೆ ವೇಳೆ ಸರ್ಕಾರವನ್ನು ವಿರೋಧಿಸುವ ನಿಲುವನ್ನು ಪಕ್ಷವು ತೆಗೆದುಕೊಂಡಿದೆ. ‘ಒಂದು ವೇಳೆ ಯಾರಾದರೂ ಪಕ್ಷಕ್ಕೆ ವಿರುದ್ಧವಾಗಿ ಅಡ್ಡಮತದಾನ ಮಾಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಅಧ್ಯಕ್ಷ ಎಡಪ್ಪಾಡಿ ಬಣದ ಅಗ್ರಿ ಎಸ್.ಎಸ್. ಕೃಷ್ಣಮೂರ್ತಿ ಹೇಳಿದ್ದಾರೆ.
ಏನೇ ಆದರೂ ಬುಧವಾರದ ಬೆಳವಣಿಗೆ ಬಳಿಕ ಪಕ್ಷ ವಿಭಜನೆಯ ಅಥವಾ ಪಕ್ಷದ ನಾಯಕತ್ವದಿಂದ ಎಡಪ್ಪಾಡಿ ಪಳನಿಸ್ವಾಮಿ ಕೆಳಗಿಳಿಯಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗುವುದು ಖಚಿತ ಎನ್ನಲಾಗಿದೆ.
ಇದೇ ವೇಳೆ ಪಳನಿಸ್ವಾಮಿ ಡಿಎಂಕೆ ಬೆಂಬಲದೊಂದಿಗೆ ಮುಖ್ಯಮಂತ್ರಿ ಆಗುವ ಇರಾದೆ ಹೊಂದಿದ್ದರು. ಆದರೆ ಅವರ ಪ್ರಸ್ತಾಪವನ್ನು ಬಹುತೇಕ ಶಾಸಕರು ನಿರಾಕರಿಸಿದರು. ಯಾಕೆಂದರೆ ಈ ಪ್ರಸ್ತಾಪ ಎಐಎಡಿಎಂಕೆಯ ಮೂಲ ಸಿದ್ಧಾಂತಕ್ಕೆ ವಿರುದ್ಧವಾಗಿತ್ತು. ಡಿಎಂಕೆ ವಿರೋಧಿಸಲೆಂದೇ ಎಐಎಡಿಎಂಕೆ ಸ್ಥಾಪಿಸಲಾಗಿತ್ತು. ಡಿಎಂಕೆ ಜತೆಗೇನಾದರೂ ಪಕ್ಷ ಮೈತ್ರಿ ಮಾಡಿಕೊಂಡರೆ ಭವಿಷ್ಯದಲ್ಲಿ ಎಐಎಡಿಎಂಕೆ ಸಂಪೂರ್ಣವಾಗಿ ನಾಶವಾಗುವ ಅಪಾಯವಿತ್ತು ಎಂದು ಸುದ್ದಿಗಾರರಿಗೆ ಷಣ್ಮುಗಂ ತಿಳಿಸಿದ್ದಾರೆ. ಆದರೆ ಈ ಆರೋಪವನ್ನು ಎಡಪ್ಪಾಡಿ ಬಣ ಮತ್ತು ಡಿಎಂಕೆ ಎರಡೂ ತಳ್ಳಿಹಾಕಿವೆ.