ಬಂಗಾಳ ಸಂಪುಟದ ಮೊದಲ ಕ್ರಮ : ಬಾಂಗ್ಲಾ ಗಡಿಗೆ ಬೇಲಿ

Published : May 12, 2026, 06:40 AM IST
West Bengal CM Suvendu Adhikari

ಸಾರಾಂಶ

ನೆರೆಯ ಬಾಂಗ್ಲಾದೇಶ ಗಡಿಯಿಂದ ಅಕ್ರಮ ಒಳನುಸುಳುವಿಕೆ ತಡೆಯನ್ನು ತನ್ನ ಪ್ರಮುಖ ಚುನಾವಣಾ ವಿಷಯಗಳ ಪೈಕಿ ಒಂದಾಗಿ ಮಾಡಿದ್ದ ಪಶ್ಚಿಮ ಬಂಗಾಳ ಬಿಜೆಪಿ, ತನ್ನ ಮೊದಲ ಸಚಿವ ಸಂಪುಟ ಸಭೆಯಲ್ಲೇ ಗಡಿಯನ್ನು ಮತ್ತಷ್ಟು ಬಿಗಿಗೊಳಿಸುವ ಸಲುವಾಗಿ ಸೇನೆಗೆ ಜಾಗ ಹಸ್ತಾಂತರ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದೆ.

 ಕೋಲ್ಕತಾ: ನೆರೆಯ ಬಾಂಗ್ಲಾದೇಶ ಗಡಿಯಿಂದ ಅಕ್ರಮ ಒಳನುಸುಳುವಿಕೆ ತಡೆಯನ್ನು ತನ್ನ ಪ್ರಮುಖ ಚುನಾವಣಾ ವಿಷಯಗಳ ಪೈಕಿ ಒಂದಾಗಿ ಮಾಡಿದ್ದ ಪಶ್ಚಿಮ ಬಂಗಾಳ ಬಿಜೆಪಿ, ತನ್ನ ಮೊದಲ ಸಚಿವ ಸಂಪುಟ ಸಭೆಯಲ್ಲೇ ಗಡಿಯನ್ನು ಮತ್ತಷ್ಟು ಬಿಗಿಗೊಳಿಸುವ ಸಲುವಾಗಿ ಸೇನೆಗೆ ಜಾಗ ಹಸ್ತಾಂತರ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಸೋಮವಾರ ಇಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಗಡಿ ನಿರ್ಮಾಣಕ್ಕೆ ಅಗತ್ಯವಾದ ಭೂಮಿಯನ್ನು 45 ದಿನಗಳ ಒಳಗೆ ಬಿಎಸ್‌ಎಫ್‌ಗೆ ಹಸ್ತಾಂತರಿಸಲು ನಿರ್ಣಯಿಸಲಾಯಿತು. ಜೂನ್‌ 1ರಿಂದ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅನುಮತಿ, ಕೇಂದ್ರದ ಹಲವು ಯೋಜನೆಗಳ ವ್ಯಾಪ್ತಿಗೆ ಸೇರುವ ಪ್ರಸ್ತಾವಗಳಿಗೆ ಅನುಮೋದನೆ ನೀಡಲಾಯಿತು.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುವೇಂದು, ‘ಗಡಿ ಜಿಲ್ಲೆಗಳಲ್ಲಿ ಜನಸಂಖ್ಯೆ (ಡೆಮಾಗ್ರಫಿ) ನಿರಂತರವಾಗಿ ಬದಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಗಡಿಯಲ್ಲಿ ಬೇಲಿಗಳನ್ನು ನಿರ್ಮಿಸಲು ಬಿಎಸ್‌ಎಫ್‌ಗೆ ಅಗತ್ಯವಾದ ಭೂಮಿಯನ್ನು ಹಸ್ತಾಂತರಿಸುವ ಪ್ರಕ್ರಿಯೆಗೆ ನಮ್ಮ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಂದಿನ 45 ದಿನಗಳಲ್ಲಿ ಭೂ ವರ್ಗಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ರಾಜ್ಯದ ಭೂ ಮತ್ತು ಭೂ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗೆ ಸೂಚಿಸಲಾಗಿದೆ’ ಎಂದರು.

ಜನಗಣತಿ, ಆಯುಷ್ಮಾನ್‌ಗೆ ಅಸ್ತು:

ಉಳಿದಂತೆ ಆಯುಷ್ಮಾನ್‌ ಭಾರತ್‌ ಯೋಜನೆ ಜಾರಿ, ಜನಗಣತಿ ಆರಂಭ, ಪಿಎಂ ಜನ ಆರೋಗ್ಯ ಯೋಜನೆ, ಪಿಎಂ ಫಸಲ್‌ ಬಿಮಾ ಯೋಜನೆ, ಪಿಎಂ ಶ್ರೀ, ಪಿಎಂ ವಿಶ್ವಕರ್ಮ ಯೋಜನೆ ವ್ಯಾಪ್ತಿಗೆ ಸೇರ್ಪಡೆ, ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ತಕ್ಷಣದ ಅನುಷ್ಠಾನ, ಹಿಂದಿನ ವರ್ಷಗಳಲ್ಲಿ ನೇಮಕಾತಿ ಅವಕಾಶ ತಪ್ಪಿಸಿಕೊಂಡ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ, ಐಎಎಸ್, ಐಪಿಎಸ್ ಮತ್ತು ಡಬ್ಲ್ಯೂಬಿಪಿಎಸ್ ಅಧಿಕಾರಿಗಳನ್ನು ತರಬೇತಿಗಾಗಿ ಇತರ ರಾಜ್ಯಗಳಿಗೆ ಕಳುಹಿಸಲು ಅವಕಾಶ ನೀಡುವ ಹಿಂದಿನ ನೀತಿಯನ್ನು ರದ್ದುಗೊಳಿಸಲಾಗಿದೆ.

ಭೂಮಿಗೆ ವಿರೋಧ:

ಹಿಂದಿನ ಟಿಎಂಸಿ ಸರ್ಕಾರದ ಅವಧಿಯಲ್ಲಿ ಗಡಿಯಲ್ಲಿ ಬೇಲಿ ನಿರ್ಮಿಸಲು ಅಗತ್ಯ ಭೂಮಿ ಹಸ್ತಾಂತರಕ್ಕೆ ಮುಖ್ಯಮಂತ್ರಿ ಮಮತಾ ಷರತ್ತು ಒಡ್ಡಿದ್ದರು. ಹೀಗಾಗಿ ಗಡಿಯಲ್ಲಿ ಬೇಲಿ ನಿರ್ಮಾಣಕ್ಕೆ ಅಡ್ಡಿಯಾಗಿತ್ತು. 

- ಕೇಂದ್ರ ಯೋಜನೆಗಳು ಈಗ ಬಂಗಾಳದಲ್ಲಿ ಜಾರಿ

- ಬಾಂಗ್ಲಾದೇಶದಿಂದ ಅಕ್ರಮವಾಗಿ ಒಳನುಸುಳುವವರ ಸಮಸ್ಯೆ ಪಶ್ಚಿಮ ಬಂಗಾಳದಲ್ಲಿ ಇದೆ

- ಅಧಿಕಾರಕ್ಕೆ ಬಂದರೆ ಒಳನುಸುಳುವಿಕೆಯನ್ನು ತಡೆಯುವುದಾಗಿ ಬಿಜೆಪಿ ಭರವಸೆ ನೀಡಿತ್ತು

- ಗದ್ದುಗೆಗೇರಿದ ಬೆನ್ನಲ್ಲೇ ನಡೆದ ಮೊದಲ ಸಂಪುಟ ಸಭೆಯಲ್ಲಿ ಬಾಂಗ್ಲಾ ಗಡಿಗೆ ಬೇಲಿ ನಿರ್ಧಾರ

- ಇದಕ್ಕಾಗಿ 45 ದಿನದೊಳಗೆ ಬಿಎಸ್‌ಎಫ್‌ಗೆ ಅಗತ್ಯ ಭೂಮಿ ಹಸ್ತಾಂತರ ಮಾಡಲು ತೀರ್ಮಾನ

- ಭೂಮಿ ಹಸ್ತಾಂತರಿಸಲು ಮಮತಾ ಹಲವು ಷರತ್ತು ವಿಧಿಸಿದ್ದರಿಂದ ನೆನೆಗುದಿಗೆ ಬಿದ್ದಿತ್ತು ಕಾರ್ಯ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಜಿ ರಾಮ್‌ ಜಿ ಕಾಯ್ದೆ ಜು.1ಕ್ಕೆ ದೇಶಾದ್ಯಂತ ಜಾರಿ : ಕೇಂದ್ರ
12 ವರ್ಷಗಳ ಪಿಎಂ ಮೋದಿ ವೈಫಲ್ಯಕ್ಕೆ ಸಾಕ್ಷ್ಯ : ಪ್ರತಿಪಕ್ಷ