ಮತ್ತೊಂದು ದುರಂತದಿಂದ ಏರಿಂಡಿಯಾ ಪ್ಲೇನ್‌ ಪಾರು

KannadaprabhaNewsNetwork |  
Published : Feb 03, 2026, 02:00 AM IST
Plane

ಸಾರಾಂಶ

ಕಳೆದ ವರ್ಷ 260 ಜನ ಬಲಿ ಪಡೆದಿದ್ದ ಏರಿಂಡಿಯಾ ವಿಮಾನದಲ್ಲಿ ಕಾಣಿಸಿಕೊಂಡಿದ್ದ ಸಮಸ್ಯೆಯೊಂದು ಮತ್ತೆ ಏರ್‌ ಇಂಡಿಯಾದ ಡ್ರೀಮ್‌ಲೈನರ್‌ ವಿಮಾನದಲ್ಲಿ ಕಾಣಿಸಿಕೊಂಡಿದೆ. ಲಂಡನ್‌ನಿಂದ ಬೆಂಗಳೂರಿಗೆ ಹೊರಟಿದ್ದ ವಿಮಾನದಲ್ಲಿ ಸಮಸ್ಯೆ  

ನವದೆಹಲಿ: ಕಳೆದ ವರ್ಷ ಅಹಮದಾಬಾದ್‌ನಲ್ಲಿ 260 ಜನರನ್ನು ಬಲಿ ಪಡೆದಿದ್ದ ಏರಿಂಡಿಯಾ ವಿಮಾನದಲ್ಲಿ ಕಾಣಿಸಿಕೊಂಡಿದ್ದ ತಾಂತ್ರಿಕ ಸಮಸ್ಯೆಯೊಂದು ಮತ್ತೆ ಏರ್‌ ಇಂಡಿಯಾದ ಡ್ರೀಮ್‌ಲೈನರ್‌ ವಿಮಾನದಲ್ಲಿ ಕಾಣಿಸಿಕೊಂಡಿದೆ. ಲಂಡನ್‌ನಿಂದ ಬೆಂಗಳೂರಿಗೆ ಹೊರಟಿದ್ದ ವಿಮಾನದಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದ್ದು ಅದೃಷ್ಟವಶಾತ್‌ ಯಾವುದೇ ತೊಂದರೆ ಇಲ್ಲದೇ ವಿಮಾನ ಸುರಕ್ಷಿತವಾಗಿ ಬೆಂಗಳೂರಿನಲ್ಲಿ ಸೋಮವಾರ ಬೆಳಗ್ಗೆ ಬಂದಿಳಿದಿದೆ.

ಈ ಘಟನೆಯ ಹಿನ್ನೆಲೆಯಲ್ಲಿ 200ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ತಂದಿದ್ದ ವಿಮಾನವನ್ನು ಸೇವೆಯಿಂದ ಹಿಂದಕ್ಕೆ ಪಡೆದು ಪರಿಶೀಲನೆಗೆ ಒಳಪಡಿಸಲಾಗಿದೆ.

ಫ್ಯೂಯಲ್‌ ಸ್ವಿಚ್‌ನಲ್ಲಿ ಸಂಭವನೀಯ ದೋಷದ ಬಗ್ಗೆ ಪೈಲಟ್‌ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದಷ್ಟೇ ಏರಿಂಡಿಯಾ ಮಾಹಿತಿ ನೀಡಿದೆ. ಆದರೆ ತಾಂತ್ರಿಕ ಸಮಸ್ಯೆ ಯಾವ ಹಂತದಲ್ಲಿ ಕಂಡುಬಂದಿತ್ತು ಎಂಬುದನ್ನು ಏರಿಂಡಿಯಾ ಸ್ಪಷ್ಟಪಡಿಸಿಲ್ಲ. ಹೀಗಾಗಿ ದೋಷ ಕಂಡುಬಂದ ಬಳಿಕವೂ ಸಂಚಾರ ನಡೆಸಲಾಗಿತ್ತೇ? ಸಮಸ್ಯೆ ಇತ್ಯರ್ಥಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿತ್ತೇ? ಎಂಬ ಪ್ರಶ್ನೆಗಳು ಎದ್ದಿವೆ. ಎರಡು ಎಂಜಿನ್‌ಗಳ ಪೈಕಿ ಒಂದು ಎಂಜಿನ್‌ನ ಸ್ವಿಚ್‌ನಲ್ಲಿ ಸಮಸ್ಯೆ ಕಂಡುಬಂದ ಕಾರಣ ವಿಮಾನ ಸಂಚಾರ ನಡೆಸಿರಬಹುದು ಎಂದು ಊಹಿಸಲಾಗಿದೆ.

ಏನಾಯ್ತು?:

ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹೊರಟಿದ್ದ ವಿಮಾನದಲ್ಲಿ ಎಂಜಿನ್‌ಗೆ ಇಂಧನ ಪೂರೈಕೆ ಮಾಡುವ ಸ್ವಿಚ್‌ 2 ಬಾರಿ ತನ್ನಷ್ಟಕ್ಕೇ ಕಟಾಫ್‌ (ಎಂಜಿನ್‌ಗೆ ಇಂಧನ ಪೂರೈಕೆ ಸ್ಥಗಿತ) ಆಗಿತ್ತು. ಅಂದರೆ ರನ್‌ ಮೋಡ್‌ಗೆ ಹಾಕಿದರೂ ಅದು ತಂತಾನೆ ಆಫ್‌ ಮೋಡ್‌ಗೆ ಹೋಗುತ್ತಿತ್ತು. ರನ್‌ ಮೋಡ್‌ನಲ್ಲಿ ಇದ್ದರೆ ವಿಮಾನ ಸಂಚಾರ ಸಾಧ್ಯ. ಕಟಾಫ್‌ ಮೋಡ್‌ಗೆ ಹೋದರೆ ಇಂಧನ ಪೂರೈಕೆ ಬಂದ್‌ ಆಗಿ ವಿಮಾನ ಪತನಗೊಳ್ಳುವ ಸಾಧ್ಯತೆ ಇರುತ್ತದೆ. ಆದರೆ ವಿಮಾನದಲ್ಲಿ ಎರಡು ಎಂಜಿನ್‌ ಇರುವ ಕಾರಣ ಮತ್ತೊಂದು ಎಂಜಿನ್ ಸಹಾಯದಿಂದ ವಿಮಾನವನ್ನು ಸುರಕ್ಷಿತವಾಗಿ ತರಲಾಗಿದೆ ಎನ್ನಲಾಗಿದೆ.

ಏರ್‌ ಇಂಡಿಯಾ ಹೇಳಿಕೆಯಲ್ಲಿ ಬಿಡುಗಡೆ

ಕೂಡಲೇ ವಿಮಾನವನ್ನು ಇಳಿಸಲಾಯಿತು. ಈ ಬಗ್ಗೆ ಏರ್‌ ಇಂಡಿಯಾ ಹೇಳಿಕೆಯಲ್ಲಿ ಬಿಡುಗಡೆ ಮಾಡಿದ್ದು, ‘ವಿಮಾನ ಉತ್ಪಾದಕರಿಗೆ ಮಾಹಿತಿ ನೀಡಿ ಆದ್ಯತೆಯ ಮೇರೆಗೆ ಪರಿಶೀಲಿಸಲಾಗುವುದು. ನಾಗರಿಕ ವಿಮಾನಯಾನ ನಿಯಂತ್ರಕ ಡಿಜಿಸಿಎಗೂ ಮಾಹಿತಿ ನೀಡಲಾಗಿದೆ’ ಎಂದು ಹೇಳಿದೆ. ಜತೆಗೆ, ‘ಡಿಜಿಸಿಎ ಆದೇಶದ ಬೆನ್ನಲ್ಲೇ ಏರ್‌ಇಂಡಿಯ ತನ್ನೆಲ್ಲಾ ಬೋಯಿಂಗ್‌ 787 ವಿಮಾನಗಳ ಇಂಧನ ಸ್ವಿಚ್‌ ಪರಿಶೀಲನೆ ನಡೆಸಿತ್ತು ಹಾಗೂ ಯಾವುದರಲ್ಲೂ ಸಮಸ್ಯೆ ಕಂಡುಬಂದಿರಲಿಲ್ಲ’ ಎಂದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಅಣ್ವಸ್ತ್ರ ಕ್ಷಿಪಣೀಲಿ ಇಂಧನ ಬದಲು ನೀರು ತುಂಬಿದ್ದ ಅಧ್ಯಕ್ಷ ಕ್ಸಿ ಆಪ್ತ!
ಚುನಾವಣೆಗೆ ನಿಲ್ಲಲು ಅಡ್ಡಿ ಎಂದು ಮಗಳನ್ನೇ ಹತ್ಯೆಗೈದ ಪಾಪಿ ಅಪ್ಪ