ಬಾಂಗ್ಲಾದೇಶದ ನಿಷೇಧಿತ ಉಗ್ರ ಸಂಘಟನೆಯೊಂದು ಭಾರತದೊಳಗೆ ನುಗ್ಗಿ ಹಿಂದೂ ನಾಯಕರ ಹತ್ಯೆ ಮತ್ತು ರಸ್ತೆ ಕಾರಿಡಾರ್ ಸ್ಫೋಟದ ಮೂಲಕ ಆರ್ಥಿಕ ವಿನಾಶಕ್ಕೆ ಸಂಚು ರೂಪಿಸಿದ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಕೋಲ್ಕತಾ: ಒಂದೆಡೆ ಬಾಂಗ್ಲಾದೇಶದಲ್ಲಿ ದೇಗುಲಗಳ ಮೇಲೆ, ಹಿಂದೂಗಳ ಮೇಲೆ ಅಲ್ಲಿನ ಮತಾಂಧರು ದಾಳಿ ನಡೆಸುತ್ತಿರುವ ಹೊತ್ತಿನಲ್ಲೇ ಇನ್ನೊಂದೆಡೆ ಬಾಂಗ್ಲಾದೇಶದ ನಿಷೇಧಿತ ಉಗ್ರ ಸಂಘಟನೆಯೊಂದು ಭಾರತದೊಳಗೆ ನುಗ್ಗಿ ಹಿಂದೂ ನಾಯಕರ ಹತ್ಯೆ ಮತ್ತು ರಸ್ತೆ ಕಾರಿಡಾರ್ ಸ್ಫೋಟದ ಮೂಲಕ ಆರ್ಥಿಕ ವಿನಾಶಕ್ಕೆ ಸಂಚು ರೂಪಿಸಿದ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಕಳೆದ ಕೆಲ ದಿನಗಳ ಅವಧಿಯಲ್ಲಿ ಪಶ್ಚಿಮ ಬಂಗಾಳ, ಕೇರಳ ಮತ್ತು ಅಸ್ಸಾಂನಲ್ಲಿ ಬಾಂಗ್ಲಾದೇಶ ಮೂಲದ ಅನ್ಸರ್ ಅಲ್ ಇಸ್ಲಾಂ ಸಂಘಟನೆಗೆ ಸೇರಿದ 8 ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ, ಈಶಾನ್ಯ ರಾಜ್ಯಗಳಲ್ಲಿನ ಪ್ರಮುಖ ಹಿಂದೂ ನಾಯಕರ ಹತ್ಯೆಯ ಉದ್ದೇಶವನ್ನು ಉಗ್ರರು ಹೊಂದಿದ್ದು ಬೆಳಕಿಗೆ ಬಂದಿದೆ.
ಇದರ ಜೊತೆಗೆ ಪಶ್ಚಿಮ ಬಂಗಾಳದ ಸಿಲಿಗುರಿಗೆ ಈಶಾನ್ಯ ರಾಜ್ಯಗಳ ನಂಟು ಬೆಸೆಯುವ ಚಿಕನ್ ನೆಕ್ ಎಂದು ಕರೆಯಲಾಗುವ ಸಿಲಿಗುರಿ ಕಾರಿಡಾರ್ ರಸ್ತೆ ಸ್ಫೋಟಗೊಳಿಸುವ ಮೂಲಕ ಇಡೀ ಪ್ರದೇಶದಲ್ಲಿ ಅಸ್ಥಿರತೆ ಸೃಷ್ಟಿಸಲು ಯತ್ನಿಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಇದು ಈಶಾನ್ಯ ರಾಜ್ಯಗಳಿಗೆ ಭಾರತವನ್ನು ಬೆಸೆಯುವ ಏಕೈಕ ರಸ್ತೆ ಮಾರ್ಗವಾಗಿದೆ.
ಹಸೀನಾ ಕಾಲದ ಬಲವಂತದ ನಾಪತ್ತೆ ಹಿಂದೆ ಭಾರತದ ಕೈವಾಡ ಆರೋಪ
ಢಾಕಾ: ಮಾಜಿ ಪ್ರಧಾನಿ ಶೇಖ್ ಹಸೀನಾ ಅವಧಿಯಲ್ಲಿ ನಡೆದಿದ್ದ ಬಾಂಗ್ಲಾ ಪ್ರಜೆಗಳ ಬಲವಂತದ ನಾಪತ್ತೆ ಹಿಂದೆ ಭಾರತದ ಕೈವಾಡವಿದೆ ಎಂದು ಬಾಂಗ್ಲಾದ ಮಧ್ಯಂತರ ಸರ್ಕಾರ ರಚಿಸಿರುವ ಸಮಿತಿಯ ವರದಿ ಹೇಳಿದೆ.ಬಾಂಗ್ಲಾದ ಸುದ್ದಿ ಸಂಸ್ಥೆ ಬಾಂಗ್ಲಾದೇಶದ ಸಂಗ್ಬಾದ್ ಸಂಸ್ಥೆಯು ಬಲವಂತದ ನಾಪತ್ತೆಯ ಕುರಿತಾದ ತನಿಖಾ ವರದಿಯನ್ನು ಉಲ್ಲೇಖಿಸಿ ವರದಿ ನೀಡಿದ್ದು, ‘ ಬಾಂಗ್ಲಾದೇಶದ ಬಲವಂತದ ನಾಪತ್ತೆ ಪ್ರಕರಣಗಳಲ್ಲಿ ಭಾರತೀಯರ ಪಾಲ್ಗೊಳ್ಳುವಿಕೆ ಸಾರ್ವಜನಿಕ ದಾಖಲೆಯ ವಿಷಯವಾಗಿದೆ.
ಭಾರತದಲ್ಲಿ ಇನ್ನೂ ಬಂಧಿಯಾಗಿರುವ ಯಾವುದೇ ಬಾಂಗ್ಲಾದೇಶದ ನಾಯಕರನ್ನು ಗುರುತಿಸಲು ತಮ್ಮ ಪ್ರಯತ್ನಗಳನ್ನು ವಿಸ್ತರಿಸಲು ವಿದೇಶಾಂಗ ಮತ್ತು ಗೃಹ ಸಚಿವಾಲಯಗಳಿಗೆ ಶಿಫಾರಸ್ಸು ಮಾಡುತ್ತೇವೆ. ಬಾಂಗ್ಲಾದೇಶದ ಹೊರಗೆ ಈ ಜಾಡು ಅನುಸರಿಸುವುದು ನ್ಯಾಯದ ವ್ಯಾಪ್ತಿಯನ್ನು ಮೀರುತ್ತದೆ’ ಎಂದು ತನಿಖಾ ಆಯೋಗದ ವರದಿ ಉಲ್ಲೇಖಿಸಿದೆ.