ಟಿವಿಕೆ ಮೇಲೆ ಕುದುರೆ ವ್ಯಾಪಾರ ಆರೋಪ

KannadaprabhaNewsNetwork |  
Published : May 10, 2026, 01:45 AM IST
ಟಿವಿಕೆ | Kannada Prabha

ಸಾರಾಂಶ

ಸರ್ಕಾರ ರಚನೆಗೂ ಮುನ್ನವೇ ವಿಜಯ್ ಅವರ ಟಿವಿಕೆ ಪಕ್ಷದ ವಿರುದ್ಧ ಕುದುರೆ ವ್ಯಾಪಾರದ ಆರೋಪ ಕೇಳಿಬಂದಿದೆ. ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಎಎಂಎಂಕೆಯಿಂದ ಆಯ್ಕೆಯಾದ ಏಕೈಕ ಶಾಸಕ ಎಸ್. ಕಾಮರಾಜ್ ಅವರ ನಕಲಿ ಬೆಂಬಲ ಪತ್ರವನ್ನು ವಿಜಯ್‌ ಸಲ್ಲಿಸಿದ್ದಾರೆ ಎಂದು ಎಎಂಎಂಕೆ ಪೊಲೀಸರಿಗೆ ದೂರು ನೀಡಿದೆ. ಇದು ಕುದುರೆ ವ್ಯಾಪಾರ ಎಂದು ಎಎಂಎಂಕೆ ಮುಖ್ಯಸ್ಥ ಟಿಟಿವಿ ದಿನಕರನ್‌ ಆರೋಪಿಸಿದ್ದಾರೆ.

- ಎಂಎಂಎಂಕೆ ಶಾಸಕನ ಬೆಂಬಲ ಪತ್ರ ಸಲ್ಲಿಸಿದ್ದ ಟಿವಿಕೆ

- ಇದು ನಕಲಿ ಪತ್ರ: ದಿನಕರನ್‌, ಶಾಸಕ ಕಾಮರಾಜ್ ಸ್ಪಷ್ಟನೆ

- ಶಾಸಕ ಸಹಿ ಹಾಕಿದ್ದು ನಿಜ ಎಂದು ಟಿವಿಕೆ ವಿಡಿಯೋ ಬಿಡುಗಡೆ

- ಪತ್ರ ನಕಲಿ ಎಂದು ಪೊಲೀಸರಿಗೆ ಎಂಎಂಎಂಕೆ ದೂರುಪಿಟಿಐ ಚೆನ್ನೈ

ಸರ್ಕಾರ ರಚನೆಗೂ ಮುನ್ನವೇ ವಿಜಯ್ ಅವರ ಟಿವಿಕೆ ಪಕ್ಷದ ವಿರುದ್ಧ ಕುದುರೆ ವ್ಯಾಪಾರದ ಆರೋಪ ಕೇಳಿಬಂದಿದೆ. ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಎಎಂಎಂಕೆಯಿಂದ ಆಯ್ಕೆಯಾದ ಏಕೈಕ ಶಾಸಕ ಎಸ್. ಕಾಮರಾಜ್ ಅವರ ನಕಲಿ ಬೆಂಬಲ ಪತ್ರವನ್ನು ವಿಜಯ್‌ ಸಲ್ಲಿಸಿದ್ದಾರೆ ಎಂದು ಎಎಂಎಂಕೆ ಪೊಲೀಸರಿಗೆ ದೂರು ನೀಡಿದೆ. ಇದು ಕುದುರೆ ವ್ಯಾಪಾರ ಎಂದು ಎಎಂಎಂಕೆ ಮುಖ್ಯಸ್ಥ ಟಿಟಿವಿ ದಿನಕರನ್‌ ಆರೋಪಿಸಿದ್ದಾರೆ.

ಶುಕ್ರವಾರ ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಿದ್ದ ವಿಜಯ್‌ ಶಾಸಕರ ಬೆಂಬಲ ಪತ್ರವನ್ನು ಸಲ್ಲಿಸಿದ್ದರು. ಇದರಲ್ಲಿ ಮನ್ನಾರ್ಗುಡಿಯ ಎಎಂಎಂಕೆ ಶಾಸಕ ಎಸ್. ಕಾಮರಾಜ್‌ ಅವರ ‘ಫೋಟೋ ಕಾಪಿ’ (ಜೆರಾಕ್ಸ್) ಬೆಂಬಲ ಪತ್ರವೂ ಇತ್ತು ಎನ್ನಲಾಗಿದೆ.

ಶುಕ್ರವಾರ ರಾತ್ರಿ ವಿಷಯ ತಿಳಿದ ಕೂಡಲೇ ರಾಜ್ಯಪಾಲರನ್ನು ಭೇಟಿ ಮಾಡಿದ ದಿನಕರನ್‌, ‘ನಮ್ಮ ಶಾಸಕ ಯಾವುದೇ ಬೆಂಬಲ ಪತ್ರ ಸಲ್ಲಿಸಿಲ್ಲ. ಅದು ನಕಲಿ’ ಎಂದು ದೂರು ನೀಡಿದರು. ಆಗ ರಾಜ್ಯಪಾಲರು ಟಿವಿಕೆಗೆ ಆಹ್ವಾನ ನೀಡುವ ನಿರ್ಧಾರ ಮುಂದೂಡಿದರು ಎಂದು ಮೂಲಗಳು ಹೇಳಿವೆ.

ಇದರ ಬೆನ್ನಲ್ಲೇ ಎಎಂಎಂಕೆ ಚೆನ್ನೈನ ಗಿಂಡಿ ಪೊಲೀಸ್ ಠಾಣೆಗೆ ದೂರು ನೀಡಿದೆ. ಬಳಿಕ ಟಿಟಿವಿ ದಿನಕರನ್‌ ಮಾತನಾಡಿ, ‘ರಾಜ್ಯಪಾಲರಿಗೆ ನಕಲಿ ಪತ್ರದ ಛಾಯಾಚಿತ್ರ ಪ್ರತಿಯನ್ನು ಸಲ್ಲಿಸಿದ್ದಾರೆ. ಬೆಂಬಲ ನೀಡಿದ್ದೇ ನಿಜವಾಗಿದ್ದಲ್ಲಿ ಮೂಲ ಪ್ರತಿ ಏಕೆ ಸಲ್ಲಿಸಿಲ್ಲ? ಶುದ್ಧ ಶಕ್ತಿ ಎಂದು ಹೇಳಿಕೊಳ್ಳುವ ಟಿವಿಕೆ, ನಕಲಿ ಮತ್ತು ಕುದುರೆ ವ್ಯಾಪಾರದಲ್ಲಿ ತೊಡಗಿದೆ’ ಎಂದು ಆರೋಪಿಸಿದರು.

ಈ ನಡುವೆ ಕೆಲ ಕಾಲ ನಾಪತ್ತೆಯಾಗಿದ್ದಾರೆ ಎಂದು ಭಾವಿಸಲಾದ ಕಾಮರಾಜ್ ಕೂಡ ಪ್ರತ್ಯಕ್ಷವಾಗಿ, ‘ನಾನು ಅಣ್ಣಾಡಿಎಂಕೆ ಶಾಸಕರ ಜತೆ ಪುದುಚೇರಿಯಲ್ಲಿದ್ದೆ. ನಾನು ಟಿವಿಕೆ ಬೆಂಬಲ ಪತ್ರಕ್ಕೆ ಸಹಿ ಹಾಕಿಲ್ಲ’ ಎಂದು ಸ್ಪಷ್ಟಪಡಿಸಿದರು.

ಕಾಮರಾಜ್‌ ಸಹಿ ವಿಡಿಯೋ ಬಿಡುಗಡೆ:

ಏತನ್ಮಧ್ಯೆ, ಈ ಆರೋಪಗಳನ್ನು ಟಿವಿಕೆ ಸುಳ್ಳು ಎಂದಿದೆ. ಜತೆಗೆ ಕಾಮರಾಜ್ ‘ಸ್ವಯಂಪ್ರೇರಣೆಯಿಂದ’ ಬೆಂಬಲ ಪತ್ರಕ್ಕೆ ಸಹಿ ಹಾಕುತ್ತಿದ್ದಾರೆ ಎಂಬುದನ್ನು ತೋರಿಸುವ ವೀಡಿಯೊವನ್ನು ಬಿಡುಗಡೆ ಮಾಡಿದೆ.

ಎಫ್‌ಐಆರ್ ದಾಖಲಿಸುವ ಬಗ್ಗೆ ನಿರ್ಧರಿಸುವ ಮೊದಲು ಗಿಂಡಿ ಪೊಲೀಸರು ಅರ್ಜಿಯ ಪ್ರಾಥಮಿಕ ತನಿಖೆ ನಡೆಸುವ ನಿರೀಕ್ಷೆಯಿದೆ.

==

ಗೌರ್ನರ್ ನಡೆಯಿಂದ ಹತಾಶರಾಗಿದ್ದ ವಿಜಯ್‌: ನಟ ಮನ್ಸೂರ್‌

ಚೆನ್ನೈ: ಸರ್ಕಾರ ರಚನೆಗೆ ಅವಕಾಶ ನೀಡದಿದ್ದ ತಮಿಳುನಾಡು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ನಡೆಯಿಂದ ಟಿವಿಕೆ ನೇತಾರ ವಿಜಯ್‌ ಹತಾಶರಾಗಿದ್ದರು ಎಂದು ನಟ ಮನ್ಸೂರ್ ಅಲಿಖಾನ್‌ ಹೇಳಿಕೊಂಡಿದ್ದಾರೆ.ಲಾಲ್ಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಟ ಮನ್ಸೂರ್ ಅಲಿ ಖಾನ್ ನಟ ವಿಜಯ್‌ ಅವರ ನಿವಾಸಕ್ಕೆ ಶನಿವಾರ ಭೇಟಿ ನೀಡಿದರು.

ಬಳಿಕ ಮಾಧ್ಯಮಗಳ ಜತೆ ಅವರು ಮಾತನಾಡಿ, ‘ರಾಜ್ಯಪಾಲರ ನಡೆಯಿಂದ ವಿಕಯ್‌ ಹತಾಶರಾಗಿದ್ದಾರೆ. ಈ ಸಮಯದಲ್ಲಿ ವಿಜಯ್‌ ಅವರನ್ನು ಭೇಟಿ ಮಾಡಿ ಅವರಿಗೆ ಧೈರ್ಯ ತುಂಬಲು ಬಂದಿದ್ದೇನೆ. ಎಲ್ಲವೂ ಸರಿ ಹೋಗುತ್ತದೆ ಎಂದು ಹೇಳಿದ್ದೇನೆ. ರಾಜ್ಯಪಾಲರು ತಮಿಳುನಾಡಿನ ಜನರಿಗೆ ದೊಡ್ಡ ಅನ್ಯಾಯ ಮಾಡುತ್ತಿದ್ದಾರೆ. ಅವರಿಗೆ (ರಾಜ್ಯಪಾಲರಿಗೆ) ಏನನ್ನೂ ಹೇಳುವ ಹಕ್ಕಿಲ್ಲ’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಹುಮತ ವಿಜಯ- 120 ನಂಬರ್ ಪಡೆದ ನಟ । ಇಂದು ಬೆಳಗ್ಗೆ 10ಕ್ಕೆ ಸಿಎಂ ಆಗಿ ಶಪಥ- 13ರೊಳಗೆ ಬಹುಮತ ಸಾಬೀತುಪಡಿಸಲು ರಾಜ್ಯಪಾಲರಿಂದ ಗಡುವು
ಕೋಲ್ಕತಾ ಬ್ರಿಗೇಡ್ ಮೈದಾನದಲ್ಲಿ ಕೇಸರಿ ಜನಸಾಗರ