ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಬಾಹ್ಯಾಕಾಶ ಪ್ರಯೋಗಕ್ಕೆ ಬಳಸುವ ಹಲ್ಲಿ 60 ರು.ಗೆ ಮಾರಾಟ ಮಾಡಲು ಯತ್ನ : ಅರೆಸ್ಟ್‌

KannadaprabhaNewsNetwork | Updated : Apr 14 2025, 04:48 AM IST

ಬಾಹ್ಯಾಕಾಶದ ಸಂಶೋಧನಾ ಪ್ರಯೋಗಗಳಿಗೆ ಬಳಸಲಾಗುವ ಟೊಕಾಯ್ ಗೇಕೊ ಎನ್ನುವ ಅಪರೂಪದ ಹಲ್ಲಿಯನ್ನು 60 ಲಕ್ಷ ರು.ಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಅಸ್ಸಾಂನ ದಿಬ್ರುಗಢದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಗುವಾಹಟಿ: ಬಾಹ್ಯಾಕಾಶದ ಸಂಶೋಧನಾ ಪ್ರಯೋಗಗಳಿಗೆ ಬಳಸಲಾಗುವ ಟೊಕಾಯ್ ಗೇಕೊ ಎನ್ನುವ ಅಪರೂಪದ ಹಲ್ಲಿಯನ್ನು 60 ಲಕ್ಷ ರು.ಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಅಸ್ಸಾಂನ ದಿಬ್ರುಗಢದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 11 ಹಲ್ಲಿಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.  

ಆರೋಪಿಗಳು ತಲಾ 60 ಲಕ್ಷ ರು.ಗೆ ಈ ಹಲ್ಲಿಗಳನ್ನು ಕಳ್ಳ ಸಾಗಣೆ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್‌) ಅಧಿಕಾರಿಗಳು ಬಂಧಿಸಿದ್ದಾರೆ. ಅಪರೂಪದ ಜಾತಿಗೆ ಸೇರಿರುವ ಈ ಟೊಕಾಯ್‌ ಗೇಕೊ ಹಲ್ಲಿ ಹೆಚ್ಚಿನ ಮೌಲ್ಯವನ್ನು ಹೊಂದಿದ್ದು, ಬಾಹ್ಯಾಕಾಶ ಸಂಶೋಧನೆಗಳಿಗೆ ಬಳಕೆಯಾಗುತ್ತದೆ. ಸಾಕು ಪ್ರಾಣಿಯನ್ನಾಗಿ ಇದನ್ನು ಬಳಸುವುದರ ಜೊತೆಗೆ ಚೀನಾದಲ್ಲಿ ಆಸ್ತಮಾ, ಕ್ಯಾನ್ಸರ್‌ ಚಿಕಿತ್ಸೆಗಳಿಗೂ ಬಳಸಲಾಗುತ್ತದೆ.

ನಿರ್ಬಂಧ ವಿರೋಧಿಸಿ ಕೇರಳದ ಭಗವತಿ ದೇಗುಲದ ಗರ್ಭಗುಡಿ ಹೊರವಲಯ ಪ್ರವೇಶಿಸಿದ ಗುಂಪು

ಕಾಸರಗೋಡು: ಕೇರಳದ ಕಾಸರಗೋಡು ಜಿಲ್ಲೆಯ ರಾಯರಮಂಗಲದಲ್ಲಿರುವ ಭಗವತಿ ದೇವಸ್ಥಾನದ ನಿಯಮಗಳನ್ನು ಉಲ್ಲಂಘಿಸಿ ಭಕ್ತರ ಗುಂಪೊಂದು ಗರ್ಭಗುಡಿಯ ಹೊರವಲಯವನ್ನು ಪ್ರವೇಶಿಸಿದ ಘಟನೆ ನಡೆದಿದೆ.

ಗರ್ಭಗುಡಿಯ ಹೊರಗಿನ ಪ್ರದೇಶ ಪ್ರವೇಶಿಸಲು ಕೆಲವು ವರ್ಗದ ಜನರಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಆರೋಪಿಸಿ ಕ್ರಿಯಾ ಸಮಿತಿಯ ಅಡಿಯಲ್ಲಿ ಕೆಲವರು ಪ್ರತಿಭಟನೆ ನಡೆಸಿದ್ದರು. ದೇವಸ್ವಂ ಅಧಿಕಾರಿಗಳಿಗೆ ಮತ್ತು ಸಚಿವರಿಗೆ ತಮ್ಮ ಬೇಡಿಕೆಯನ್ನು ತಿಳಿಸಿದ್ದರು. ಅದರ ಬೆನ್ನಲ್ಲೆ ಈ ಬೆಳವಣಿಗೆ ನಡೆದಿದೆ.‘ಕಳೆದ ತಿಂಗಳು ದೇವಾಲಯದ ತಂತ್ರಿಯೊಂದಿಗೆ ಚರ್ಚಿಸಿದ್ದೆವು. ಅವರು, ಭಕ್ತರು ತಮ್ಮ ಅನುಮತಿಯಿಲ್ಲದೆ ದೇಗುಲದ ಪ್ರಾಂಗಣವನ್ನು ಪ್ರವೇಶಿಸಬಹುದು, ಆದರೆ ಗರ್ಭಗುಡಿ ಹೊರವಲಯರ ಪ್ರವೇಶಿಸುವಂತಿಲ್ಲ ಎಂದಿದ್ದರು. ದೇವಾಲಯ ಪ್ರವೇಶವು ಅನೇಕ ವರ್ಗಗಳ ಜನರಿಗೆ ನಿರ್ದಿಷ್ಟ ಸಮಯದ ಮಿತಿಗೆ ಸೀಮಿತವಾಗಿದೆ. ಇದನ್ನು ವಿರೋಧಿಸಿ ಗರ್ಭಗುಡಿ ಪ್ರವೇಶಿಸಿದ್ದೇವೆ. ಇದು ಮುಂದುವರೆಯುತ್ತದೆ’ ಎಂದು ಸಂಸ್ಕಾರ ಸಾಹಿತ್ಯ ಸಂಘಟನೆಯ ನಾಯಕ ರಾಘವನ್ ಕುಳಂಗರ ತಿಳಿಸಿದ್ದಾರೆ.

ಕರ್ನಾಟಕ ಹೈಕೋರ್ಟ್‌ ಮಾಜಿ ಸಿಜೆ ಮಹೇಶ್ವರಿ ಕಾನೂನು ಆಯೋಗದ ಮುಖ್ಯಸ್ಥ?

ನವದೆಹಲಿ: ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ನ್ಯಾ. ದಿನೇಶ್ ಮಹೇಶ್ವರಿ ಅವರು ಕಾನೂನು ಆಯೋಗದ ಮುಖ್ಯಸ್ಥರಾಗಿ ನೇಮಕಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.23ನೇ ಕಾನೂನು ಆಯೋಗದ ಮುಖ್ಯಸ್ಥರಾಗಿ ಅವರ ನೇಮಕವನ್ನು ಘೋಷಿಸುವ ಔಪಚಾರಿಕ ಅಧಿಸೂಚನೆಯನ್ನು ಈ ವಾರ ಹೊರಡಿಸುವ ನಿರೀಕ್ಷೆಯಿದೆ.

ನ್ಯಾ. ಮಹೇಶ್ವರಿ ಅವರು ಮೇ 2023ರಲ್ಲಿ ಸುಪ್ರೀಂ ಕೋರ್ಟ್‌ನಿಂದ ನಿವೃತ್ತರಾಗಿದ್ದರು. ಅದಕ್ಕೂ ಮೊದಲು 2016ರಿಂದ ಮೇಘಾಲಯ ಹೈಕೋರ್ಟ್‌ನಲ್ಲಿ ಮತ್ತು 2018ರಿಂದ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಿದ್ದರು.23ನೇ ಕಾನೂನು ಆಯೋಗವನ್ನು ಕಳೆದ ವರ್ಷ ಸೆ.2ರಂದು 3 ವರ್ಷಗಳ ಅವಧಿಗೆ ಸ್ಥಾಪಿಸಲಾಗಿದೆ.

ಕ್ಷಮೆ ಹಿನ್ನೆಲೆ: ಮಾಯಾ ಸಂಬಂದಿ ಆನಂದ್‌ ಮರಳಿ ಬಿಎಸ್‌ಪಿಗೆ

ಲಖನೌ: ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ತಮ್ಮ ಸೋದರಳಿಯ ಆಕಾಶ್ ಆನಂದ್ ಅವರನ್ನು ಪುನಃ ಪಕ್ಷಕ್ಕೆ ಸೇರ್ಪಡೆಗೊಳಿಸುವುದಾಗಿ ಶನಿವಾರ ಘೋಷಿಸಿದ್ದಾರೆ. ಕಳೆದ ತಿಂಗಳಷ್ಟೆ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದರು. ಆದರೆ ಆಕಾಶ್ ಸಾರ್ವಜನಿಕವಾಗಿ ಮಾಯಾವತಿಯವರಲ್ಲಿ ಕ್ಷಮೆಯಾಚಿಸಿ, ತಮ್ಮನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಮನವಿ ಮಾಡಿದ ನಂತರ ಈ ಬೆಳವಣಿಗೆ ನಡೆದಿದೆ.