ಎಚ್‌1-ಬಿ ವೀಸಾ ದರದ ಏರಿಕೆಯಿಂದ ಬೆಂಗಳೂರಿಗೆ ಲಾಭ!

Published : Sep 21, 2025, 11:28 AM IST
h1 b visa news

ಸಾರಾಂಶ

ಎಚ್‌1-ಬಿ ವೀಸಾ ದರ ಏರಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಡೆ ತಕ್ಷಣಕ್ಕೆ ಭಾರತೀಯ ಕಂಪನಿಗಳಿಗೆ ಹೊರೆ ಎಂದು ಎನ್ನಿಸಿದರು, ಮುಂದಿನ ದಿನಗಳಲ್ಲಿ ಅವು ಬೆಂಗಳೂರು ಸೇರಿದಂತೆ ಭಾರತದ ಹಲವು ಐಟಿ ಸಿಟಿಗಳಿಗೆ ಲಾಭ ತಂದುಕೊಡಲಿದೆ ಎಂಬ ವಿಶ್ಲೇಷಣೆ ಕೇಳಿಬಂದಿದೆ.

 ನವದೆಹಲಿ: ಎಚ್‌1-ಬಿ ವೀಸಾ ದರ ಏರಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಡೆ ತಕ್ಷಣಕ್ಕೆ ಭಾರತೀಯ ಕಂಪನಿಗಳಿಗೆ ಹೊರೆ ಎಂದು ಎನ್ನಿಸಿದರು, ಮುಂದಿನ ದಿನಗಳಲ್ಲಿ ಅವು ಬೆಂಗಳೂರು ಸೇರಿದಂತೆ ಭಾರತದ ಹಲವು ಐಟಿ ಸಿಟಿಗಳಿಗೆ ಲಾಭ ತಂದುಕೊಡಲಿದೆ ಎಂಬ ವಿಶ್ಲೇಷಣೆ ಕೇಳಿಬಂದಿದೆ.

ಅನ್ಯ ದೇಶಿಗರ ಬದಲು ಅಮೆರಿಕನ್ನರಿಗೆ ಉದ್ಯೋಗಾವಕಾಶ ಹೆಚ್ಚು ಸಿಗುವಂತೆ ಮಾಡುವ ಉದ್ದೇಶದಿಂದ ಮಾಡಲಾಗಿರುವ ಈ ದರ ಏರಿಕೆಯ ಬಿಸಿ ಅಮೆರಿಕದ ಕಂಪನಿಗಳಿಗೇ ತಟ್ಟಲಿದ್ದು, ಅವು ಮುಂದಿನ ದಿನಗಳಲ್ಲಿ ಭಾರತೀಯರನ್ನು ನೇಮಿಸಿಕೊಳ್ಳಲು ಹಿಂಜರಿಯಬಹುದು. ಪರಿಣಾಮವಾಗಿ, ಭಾರತೀಯ ಪ್ರತಿಭೆಗಳು ಇಲ್ಲೇ ಉಳಿಯಲಿವೆ. ಇದರಿಂದ ನಷ್ಟವಾಗಲಿರುವುದು ಅಮೆರಿಕಕ್ಕೆ.

ಬೆಂಗಳೂರಿಗೆ ಲಾಭ:

‘ಎಚ್‌-1ಬಿ ವೀಸಾ ದರ ಏರಿಕೆಯು ಅಮೆರಿಕದಲ್ಲಿ ನಾವೀನ್ಯತೆಯನ್ನು ಕೊಲ್ಲಲಿದ್ದು, ಭಾರತಕ್ಕೆ ಇದು ಸುವರ್ಣಾವಕಾಶವಾಗಲಿದೆ. ಜಾಗತಿಕ ಪ್ರತಿಭೆಗಳಿಗೆ ಬಾಗಿಲು ಹಾಕುವ ಮೂಲಕ, ಅಮೆರಿಕವು ಪ್ರಯೋಗಾಲಯ, ಪೇಟೆಂಟ್‌, ನಾವೀನ್ಯತೆ ಮತ್ತು ನವೋದ್ಯಮಗಳ ಮುಂದಿನ ಅಲೆಯನ್ನು ಬೆಂಗಳೂರು ಮತ್ತು ಹೈದರಾಬಾದ್, ಪುಣೆ ಮತ್ತು ಗುರುಗ್ರಾಮಗಳಿಗೆ ತಳ್ಳುತ್ತಿದೆ’ ಎಂದು ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್‌ ಕಾಂತ್‌ ಹೇಳಿದ್ದಾರೆ.

‘ಭಾರತದ ಅತ್ಯುತ್ತಮ ವೈದ್ಯರು, ಎಂಜಿನಿಯರ್‌ಗಳು, ವಿಜ್ಞಾನಿಗಳು, ನಾವೀನ್ಯಕಾರರು ಭಾರತದ ಬೆಳವಣಿಗೆ ಮತ್ತು ಪ್ರಗತಿಗೆ ಕೊಡುಗೆ ನೀಡುವ ಮೂಲಕ ವಿಕಸಿತ ಭಾರತ ನಿರ್ಮಾಣದ ಭಾಗವಾಗುವ ಅವಕಾಶವನ್ನು ಹೊಂದಿದ್ದಾರೆ’ ಎನ್ನುವ ಮೂಲಕ ತಿರುಗೇಟು ನೀಡಿದ್ದಾರೆ.

ಭಾರತಕ್ಕೆ ಇನ್ನಷ್ಟು ಹೊರಗುತ್ತಿಗೆ:

‘88 ಲಕ್ಷ ರು. ಕೊಟ್ಟು ಯಾರೂ ವೀಸಾ ತೆಗೆದುಕೊಳ್ಳುವುದಿಲ್ಲ’ ಎಂದಿರುವ ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನದಾಸ್ ಪೈ, ‘ಇನ್ನುಮುಂದೆ ಅಮೆರಿಕದ ಕಂಪನಿಗಳು ಅಮೆರಿಕದ ಹೊರಗೆ ಉತ್ಪಾದನೆ ಶುರು ಮಾಡುತ್ತವೆ’ ಎಂದು ಹೇಳಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿರುವ ಅವರು, ‘ಅಮೆರಿಕದಲ್ಲಿ ಇನ್ನುಮುಂದೆ ಕೌಶಲ್ಯ ಲಭ್ಯವಿರುವುದಿಲ್ಲ. ಜತೆಗೆ ಅಲ್ಲಿ ಉತ್ಪಾದನೆಯ ವೆಚ್ಚವೂ ಹೆಚ್ಚಿದೆ. ಆದ್ದರಿಂದ ಕಂಪನಿಗಳು ಇನ್ನು 6 ತಿಂಗಳಲ್ಲಿ ವಿದೇಶಗಳಲ್ಲಿ ಉತ್ಪಾದನೆ ಶುರುಮಾಡಬಹುದು’ ಎಂದರು.

ಪ್ರತಿಭೆ ಮರಳಿ ಭಾರತಕ್ಕೆ:

‘ಎಚ್‌-1ಬಿ ವೀಸಾಗೆ ಸಂಬಂಧಿಸಿದ ಹೊಸ ನಿಯಮದಿಂದ ಅನೇಕ ಪ್ರತಿಭೆಗಳು ಭಾರತಕ್ಕೆ ಮರಳಲಿವೆ’ ಎಂದು ಸ್ನ್ಯಾಪ್‌ಡೀಲ್‌ನ ಸಹಸಂಸ್ಥಾಪಕ ಕುನಾಲ್‌ ಭಾಲ್‌ ಅಭಿಪ್ರಾಯಪಟ್ಟಿದ್ದಾರೆ. ‘ಮೊದಲಿಗೆ ಈ ಪ್ರಕ್ರಿಯೆ ಕಷ್ಟಕರವಾಗಬಹುದು. ಆದರೆ ಭಾರತದಲ್ಲಿ ಪ್ರತಿಭೆಗಳಿಗೆ ಭಾರೀ ಅವಕಾಶಗಳಿವೆ. ಆದ್ದರಿಂದ ಪ್ರತಿಭಾವಂತರ ಸಂಖ್ಯೆ ಭಾರತದಲ್ಲಿ ಹೆಚ್ಚುತ್ತದೆ’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕಾರು ಬುಕ್‌ ಮಾಡುವಾಗಲೇ ಟಿಪ್ಸ್‌ ಕೇಳುವುದಕ್ಕೆ ನಿಷೇಧ!
ರೈಲ್ವೆ ಪರಿಷ್ಕೃತ ದರ ಇಂದಿನಿಂದ ಜಾರಿಗೆ