ಭಾರತದ ಮೇಲಿನ ಕ್ಷಿಪಣಿ ದಾಳಿ ವಿಫಲ ಬೆನ್ನಲ್ಲೇ ಜಮ್ಮುವಿನ ಹಲವು ಕಡೆಗಳಲ್ಲಿ ಪಾಕ್ ಶೆಲ್ ದಾಳಿ ನಡೆಸಿದ್ದು, ಇಬ್ಬರ ಬಲಿಯಾಗಿದ್ದಾರೆ. ಘಟನೆಯಲ್ಲಿ ಸುಮಾರು 6 ಮಂದಿ ಗಾಯಗೊಂಡಿದ್ದಾರೆ.
ನವದೆಹಲಿ: ಭಾರತದ ಮೇಲಿನ ಕ್ಷಿಪಣಿ ದಾಳಿ ವಿಫಲ ಬೆನ್ನಲ್ಲೇ ಜಮ್ಮುವಿನ ಹಲವು ಕಡೆಗಳಲ್ಲಿ ಪಾಕ್ ಶೆಲ್ ದಾಳಿ ನಡೆಸಿದ್ದು, ಇಬ್ಬರ ಬಲಿಯಾಗಿದ್ದಾರೆ. ಘಟನೆಯಲ್ಲಿ ಸುಮಾರು 6 ಮಂದಿ ಗಾಯಗೊಂಡಿದ್ದಾರೆ. ಪರಿಸ್ಥಿತಿ ಉದ್ವಿಗ್ನ ಬೆನ್ನಲ್ಲೇ ಪಂಜಾಬ್, ಹರ್ಯಾಣ, ರಾಜಸ್ಥಾನ ಸೇರಿದಂತೆ ಹಲವು ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಶುಕ್ರವಾರ ಬೆಳಗಿನ ಜಾವ ಪಾಕಿಸ್ತಾನ ಉರಿ ವಲಯದ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಭಾರೀ ಪ್ರಮಾಣದ ಶೆಲ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ಮಹಿಳೆಯೊಬ್ಬಳು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಾರು ಡಿಕ್ಕಿಯಾಗಿ ಸಾವನ್ನಪ್ಪಿದ್ದರೆ, ಆಕೆಯ ಕುಟುಂಬದ ಮೂವರು ಗಾಯಗೊಂಡಿದ್ದಾರೆ. ಮತ್ತೊಂದು ಘಟನೆಯಲ್ಲಿ ಪೂಂಛ್ ಜಿಲ್ಲೆಯ ಲೋರನ್ ಮತ್ತು ಮೆಂಧರ್ ವಲಯಗಳಲ್ಲಿ ನಡೆದ ಶೆಲ್ ದಾಳಿಯಲ್ಲಿ ವ್ಯಕ್ತಿ ಸಾವನ್ನಪ್ಪಿದ್ದು ಆತನ ಪತ್ನಿ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.
ಕಣಿವೆ ರಾಜ್ಯ ಉದ್ವಿಗ್ನ:ಪಾಕಿಸ್ತಾನಿ ಪಡೆಗಳು ಗುರುವಾರ ರಾತ್ರಿಯಿಡಿ ಎಲ್ಒಸಿ ಬಳಿ ಕದನ ವಿರಾಮ ಉಲ್ಲಂಘಿಸಿದೆ. ಉರಿ ಸೆಕ್ಟರ್ ಸಿಲಿಕೋಟ್, ಬೋನಿಯಾರ್, ಕಮಲ್ಕೋಟ್, ಮೊಹ್ರಾ ಮತ್ತು ಜಿಂಗಲ್ ಸೇರಿದಂತೆ ಹಲವು ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದು, ಅನೇಕ ಮನೆಗಳಿಗೆ ಹಾನಿಯಾಗಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿದೆ. ಮುಂಜಾಗ್ರತಾ ಕ್ರಮವಾಗಿ ಕಾಶ್ಮೀರದಲ್ಲಿ ಎರಡು ದಿನಗಳ ಕಾಲ ಶಾಲಾ- ಕಾಲೇಜುಗಳನ್ನು ಮುಚ್ಚಲಾಗಿದೆ.
ಕಣಿವೆ ರಾಜ್ಯದಲ್ಲಿ ಶುಕ್ರವಾರ ಮುಂಜಾನೆಯಿಡಿ ಸ್ಫೋಟದ ಸದ್ದುಗಳು ಕೇಳಿಸಿದೆ.. ಪೂಂಛ್, ರಜೌರಿ, ಜಮ್ಮು ಜಿಲ್ಲೆಗಳಲ್ಲಿ ಪಾಕಿಸ್ತಾನ ರಾತ್ರಿಯಿಡೀ ಕದನ ವಿರಾಮ ಉಲ್ಲಂಘಿಸಿದೆ. ಭಾರತ ಸಲೇನೆಯೂ ತಕ್ಕ ಉತ್ತರ ನೀಡಿದೆ.. ಬೆಳಗಿನ ಜಾವ 3.50 ರಿಂದ 4.45ರ ನಡುವೆ ಭದ್ರತಾ ಪಡೆ ಸೈರನ್ ಮೊಳಗಿದೆ.
ಹಿಮಾಚಲದಲ್ಲಿ ಲೈಟ್ಆಫ್ಗೆ ಸೂಚನೆ :ಪರಿಸ್ಥಿತಿ ಉದ್ವಿಗ್ನ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಪಂಜಾಬ್ ಜೊತೆಗೆ ಗಡಿ ಹಂಚಿಕೊಂಡಿರುವ ಬಿಲಾಸ್ಪುರ ಜಿಲ್ಲಾಡಳಿತವು ನಾಗರಿಕರಿಗೆ ಸುರಕ್ಷತೆ ಮತ್ತು ಭದ್ರತೆಗೆ ಆದ್ಯತೆ ನೀಡುವಂತೆ ಸೂಚಿಸಿದೆ. ರಾತ್ರಿ ವೇಳೆಯಲ್ಲಿ ಹೊರಾಂಗಣ ಮತ್ತು ಒಳಾಂಗಣ ಲೈಟ್ ಆಫ್ ಮಾಡಬೇಕು. ಅನಗತ್ಯ ಪ್ರಯಾಣ ತಪ್ಪಿಸಬೇಕು. ತುರ್ತು ಪರಿಸ್ಥಿತಿಯ ಸಂದರ್ಭ ಹೊರತುಪಡಿಸಿ ರಾತ್ರಿ ಪ್ರಯಾಣ ತಪ್ಪಿಸಿ, ಭದ್ರತಾ ಪಡೆಗಳ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ರಾತ್ರಿ ವೇಳೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಬೇಕು ಎಂದಿದೆ.
ಪಂಜಾಬ್, ಹರ್ಯಾಣ ವಿದ್ಯುತ್ ಸ್ತಬ್ಧ, ಸೈರನ್ ಸದ್ದು:
ಅಮೃತಸರ ಸೇರಿ ಪಂಜಾಬ್ನ ಹಲವು ಜಿಲ್ಲೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಹಲವು ಜಿಲ್ಲೆಗಳಲ್ಲಿ ಜನರಿಗೆ ಲೈಟ್ ಆಫ್ ಮಾಡಿ ಮನೆಯಲ್ಲಿಯೇ ಇರುವಂತೆ ಅಧಿಕಾರಿಗಳು ಮನವಿ ಮಾಡಿದ್ದರು.. ಪಂಜಾಬ್ನಲ್ಲಿ ಜನರು ಕತ್ತಲೆಯಲ್ಲಿ ರಾತ್ರಿ ಕಳೆದರು.
ಇನ್ನು ಪಂಚಕುಲ ಮತ್ತು ಅಂಬಾಲದಲ್ಲಿಯೂ ಸೈರನ್ಗಳು ಮೊಳಗಿದ್ದು, ಜನರು ಮನೆಯೊಳಗೆ ಇರುವಂತೆ ಮನವಿ ಅಧಿಕಾರಿಗಳು ಗುರುವಾರ ರಾತ್ರಿ ಮನವಿ ಮಾಡಿದ್ದರು.
ರಾಜಸ್ಥಾನದಲ್ಲಿ ಹೈ ಅಲರ್ಟ್:ಗುರುವಾರ ರಾತ್ರಿ ದಾಳಿ ಆತಂಕ ಎದುರಿಸಿದ್ದ ರಾಜಸ್ಥಾನದಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ಮುನ್ನೆಚ್ಚರಿಕೆಯಿಂದಾಗಿ ಲೈಟ್ ಆಫ್ ಮಾಡಿ ಎಚ್ಚರ ವಹಿಸಲಾಗಿದೆ. ರಾಜ್ಯದ ಗಡಿ ಜಿಲ್ಲೆಗಳ ಜನರು ಸ್ಪೋಟದ ಶಬ್ದಗಳು ಕೇಳಿಸಿದೆ. ಈ ಮಧ್ಯೆ ಶುಕ್ರವಾರ ಬೆಳಿಗ್ಗೆ ಜೈಸಲ್ಮೇರ್ ಜಿಲ್ಲೆಯ ಕಿಶನ್ಘಾಟ್ ಪ್ರದೇಶದಲ್ಲಿ ಬಾಂಬ್ ರೀತಿಯ ವಸ್ತು ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.