ತುರ್ತುಸ್ಥಿತಿ ವೇಳೆ ಪ್ರಧಾನಿ ಮೋದಿ ಸ್ವಾಮೀಜಿ, ಸಿಖ್ ವೇಷಧಾರಿ : ಅಚ್ಚರಿಯ ಸಂಗತಿ ಬೆಳಕಿಗೆ

KannadaprabhaNewsNetwork | Updated : Jun 26 2025, 05:07 AM IST

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಕೈಗೊಂಡ ಹೋರಾಟಗಳ ಅಪರೂಪದ ಮಾಹಿತಿಗಳನ್ನು ಒಳಗೊಂಡ ‘ದಿ ಎಮರ್ಜೆನ್ಸಿ ಡೈರೀಸ್-ಇಯರ್ಸ್ ದೆಟ್ ಫೋರ್ಜಡ್ ಅ ಲೀಡರ್’ ಕೃತಿ ಬುಧವಾರ ಲೋಕಾರ್ಪಣೆಗೊಂಡಿದ್ದು, ಮೋದಿಯವರ ಕುರಿತು ಅಚ್ಚರಿಯ ಸಂಗತಿಗಳನ್ನು ತೆರೆದಿಟ್ಟಿದೆ.

ನವದೆಹಲಿ :  ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಕೈಗೊಂಡ ಹೋರಾಟಗಳ ಅಪರೂಪದ ಮಾಹಿತಿಗಳನ್ನು ಒಳಗೊಂಡ ‘ದಿ ಎಮರ್ಜೆನ್ಸಿ ಡೈರೀಸ್-ಇಯರ್ಸ್ ದೆಟ್ ಫೋರ್ಜಡ್ ಅ ಲೀಡರ್’ ಕೃತಿ ಬುಧವಾರ ಲೋಕಾರ್ಪಣೆಗೊಂಡಿದ್ದು, ಮೋದಿಯವರ ಕುರಿತು ಅಚ್ಚರಿಯ ಸಂಗತಿಗಳನ್ನು ತೆರೆದಿಟ್ಟಿದೆ.

ತುರ್ತುಸ್ಥಿತಿ ವೇಳೆ ಆರ್‌ಎಸ್‌ಎಸ್‌ನ ತರುಣ ಪ್ರಚಾರಕರಾಗಿದ್ದ ಮೋದಿ ವೇಷ ಬದಲಿಸಿಕೊಂಡು ಸಂಚರಿಸುತ್ತಿದ್ದರು. ಸಿಖ್ಖರ ವೇಷದಲ್ಲಿ, ಸ್ವಾಮೀಜಿಯ ವೇಷದಲ್ಲಿ ಕಾರ್ಯಕರ್ತರ ಜತೆ ಮಾತಾಡುತ್ತಿದ್ದುದು ಸೇರಿದಂತೆ ಹಲವು ಘಟನೆಗಳನ್ನು ಅವರ ಅಂದಿನ ಸಹಚರರು ಹಂಚಿಕೊಂಡಿದ್ದಾರೆ.

ಸ್ವಾಮೀಜಿ ವೇಷದಲ್ಲಿ:‘1976ರ ಸೆಪ್ಟೆಂಬರ್‌ನಲ್ಲಿ ನಾವೆಲ್ಲ ತುರ್ತುಸ್ಥಿತಿ ವಿರೋಧಿ ಹೋರಾಟದಲ್ಲಿ ಜೈಲು ಸೇರಿದ್ದೆವು. ಆಗ ಮೋದಿಯವರು ಸ್ವಾಮೀಜಿಯ ವೇಷದಲ್ಲಿ ಭಾವನಗರದ ಜೈಲಿಗೆ ಬಂದರು. ಸುಮಾರು 1 ಗಂಟೆ ಕಾಲ ನಮ್ಮೊಟ್ಟಿಗಿದ್ದ ಅವರು, ಜೈಲಿನ ಆಡಳಿತ, ನಮ್ಮ ಕುಟುಂಬದ ಕುರಿತು ಮಾಹಿತಿ ಹಾಗೂ ತುರ್ತುಸ್ಥಿತಿ ವಿರೋಧಿ ಪತ್ರಿಕೆಗಳನ್ನು ಹೆಚ್ಚು ಪ್ರಚಾರಗೊಳಿಸುವ ಕುರಿತು ಚರ್ಚೆ ನಡೆಸಿದರು. ಜೈಲಧಿಕಾರಿಗಳಿಗೆ ಸ್ವಾಮೀಜಿ ವೇಷದಲ್ಲಿ ಬಂದಿದ್ದು ಮೋದಿ ಎಂಬ ಸಂಶಯವೇ ಬರಲಿಲ್ಲ’ ಎಂದು ಜುನಾಗಢದ ಹಿರಿಯ ಪತ್ರಕರ್ತ ವಿಷ್ಣು ಪಾಂಡ್ಯಾ ವಿವರಿಸಿದ್ದಾರೆ.

ಸಿಖ್‌ ವೇಷದಲ್ಲಿ:‘ಆ ಸಂದರ್ಭದಲ್ಲಿ, ನಾಗರಿಕರ ಎದೆಯಲ್ಲಿ ಪ್ರಜಾಪ್ರಭುತ್ವದ ಜ್ವಾಲೆ ಪ್ರಜ್ವಲಿಸುವಂತೆ ಮಾಡುವಲ್ಲಿ ಸಾಹಿತ್ಯ ಮತ್ತು ಪ್ರಕಾಶನಗಳು ಬಹುಮುಖ್ಯ ಪಾತ್ರ ವಹಿಸುತ್ತಿದ್ದವು. ಆಗ ಮೋದಿಯವರು ಸಿಖ್ ವೇಷ ಧರಿಸಿಕೊಂಡು ಗುಜರಾತ್‌ನಾದ್ಯಂತ ಪತ್ರಿಕೆ, ಪುಸ್ತಕಗಳನ್ನು ತಲುಪಿಸುತ್ತಿದ್ದರು. ತುರ್ತುಸ್ಥಿತಿ ವಿರೋಧಿ ಸಾಹಿತ್ಯಗಳನ್ನು, ವಿವಿಧ ವರ್ಗದ ಜನರು ಸೇರುವ ಕ್ಷೌರದ ಅಂಗಡಿಗಳಲ್ಲಿ ಇಡುತ್ತಿದ್ದರು’ ಎಂದು ಆರ್‌ಎಸ್‌ಎಸ್‌ ಸ್ವಯಂಸೇವಕ ಹಸಮುಖ್ ಪಟೇಲ್ ನೆನಪಿಸಿಕೊಂಡಿದ್ದಾರೆ. 

‘ಆರ್‌ಎಸ್‌ಎಸ್‌ ಸ್ವಯಂಸೇವಕರು ಆಗಾಗ ಸಭೆಗಳನ್ನು ಆಯೋಜಿಸುತ್ತಿದ್ದರು. ಅವುಗಳನ್ನು ‘ಚಂದನದ ಕಾರ್ಯಕ್ರಮ’ ಎಂದು ಗುಪ್ತಭಾಷೆಯಲ್ಲಿ ಕರೆಯುತ್ತಿದ್ದರು. ಈ ಪದವನ್ನು ಪರಿಚಯಿಸಿದವರು ಮೋದಿಯವರು. ಆರ್‌ಎಸ್‌ಎಸ್‌ ಪ್ರಚಾರಕರು ತಾವು ಸಂಪರ್ಕಿಸಬೇಕಾದ ಮನೆಗಳನ್ನು ಎಚ್ಚರಿಕೆಯಿಂದ ಆಯ್ದುಕೊಳ್ಳುತ್ತಿದ್ದರು. ಪೊಲೀಸ್ ದಾಳಿ ಎದುರಾದರೆ ತಪ್ಪಿಸಿಕೊಳ್ಳಲು ಅನುಕೂಲವಾಗುವಂತೆ 2 ಅಥವಾ ಹೆಚ್ಚಿನ ನಿರ್ಗಮನ ದ್ವಾರವುಳ್ಳ ಮನೆಗಳನ್ನೇ ಮೋದಿಯವರು ಆಯ್ದುಕೊಳ್ಳುತ್ತಿದ್ದರು. ತುರ್ತುಸ್ಥಿತಿಯಲ್ಲಿ ಬಂಧನಕ್ಕೊಳಗಾದವರ ಕುಟುಂಬಗಳಿಗೆ ಸಹಾಯ ಮಾಡಲು ಅವರು ಸಾಕಷ್ಟು ಕೆಲಸ ಮಾಡಿದರು’ ಎಂದು ಆರ್‌ಎಸ್‌ಎಸ್‌ ಸ್ವಯಂಸೇವಕ ನಗರ್ ಭಾಯಿ ಚಾವ್ಡಾ ಕೃತಿಯಲ್ಲಿ ವಿವರಿಸಿದ್ದಾರೆ.

ತುರ್ತುಸ್ಥಿತಿ ವಿರುದ್ಧ ಮೋದಿ ಹೋರಾಟದ ಕೃತಿ ಬಿಡುಗಡೆ

ನವದೆಹಲಿ: 1975ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರು ದೇಶದ ಮೇಲೆ ಹೇರಿದ ತುರ್ತು ಪರಿಸ್ಥಿತಿಯ ವಿರುದ್ಧ ಇಂದಿನ ಪ್ರಧಾನಿ ನರೇಂದ್ರ ಮೋದಿಯವರು ಹೋರಾಡಿದ ಘಟನೆಗಳನ್ನು ವಿವರಿಸುವ ‘ದಿ ಎಮರ್ಜೆನ್ಸಿ ಡೈರೀಸ್ - ಇಯರ್ಸ್ ದಟ್ ಫೋರ್ಜ್ಡ್‌ ಎ ಲೀಡರ್’ ಕೃತಿಯನ್ನು ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಿದರು.

ಕೃತಿಯನ್ನು ಬ್ಲೂಕಾರ್ಟ್ ಡಿಜಿಟಲ್ ಫೌಂಡೇಶನ್ ಹೊರತಂದಿದ್ದು, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಮುನ್ನುಡಿ ಬರೆದಿದ್ದಾರೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಮೋದಿಯವರು ಕೈಗೊಂಡ ಹೋರಾಟ ಹಾಗೂ ಯುವನಾಯಕನಾಗಿ ಅವರು ಹೊರಹೊಮ್ಮಿದ ಸಂಪೂರ್ಣ ವಿವರಗಳನ್ನು ಕೃತಿ ಒಳಗೊಂಡಿದೆ. ಮೋದಿಯವರನ್ನು ಅತ್ಯಂತ ಪರಿವರ್ತನಶೀಲ ನಾಯಕನನ್ನಾಗಿ ರೂಪಿಸಿದ ಅಪರೂಪದ ಘಟನೆಗಳನ್ನು ಕೃತಿಯಲ್ಲಿ ವಿವರಿಸಲಾಗಿದೆ ಎಂದು ಬ್ಲೂಕಾರ್ಟ್ ತಿಳಿಸಿದೆ.ಈ ಬಗ್ಗೆ ಟ್ವೀಟ್‌ ಮಾಡಿರುವ ಮೋದಿ, ‘ತುರ್ತುಸ್ಥಿತಿ ವಿರುದ್ಧದ ಹೋರಾಟವು ನನಗೆ ಕಲಿಕಾ ಅನುಭವವಾಗಿತ್ತು’ ಎಂದಿದ್ದಾರೆ.==

ಮೋದಿ ಕುರಿತ ಪುಸ್ತಕಕ್ಕೆ ದೇವೇಗೌಡ ಮುನ್ನುಡಿ

ಪ್ರಧಾನಿ ನರೇಂದ್ರ ಮೋದಿ ಅವರು ತುರ್ತುಸ್ಥಿತಿ ವೇಳೆ ನಡೆಸಿದ ಹೋರಾಟದ ಕೃತಿಗೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮುನ್ನುಡಿ ಬರೆದಿದ್ದಾರೆ. ಈ ಬಗ್ಗೆ ಹರ್ಷಿಸಿರುವ ಮೋದಿ, ‘ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ತುರ್ತು ಪರಿಸ್ಥಿತಿಯ ನನ್ನ ಅನುಭವಗಳನ್ನು ಪುಸ್ತಕದ ರೂಪದಲ್ಲಿ ಸಂಗ್ರಹಿಸಿರುವುದು ಮತ್ತು ಪುಸ್ತಕದ ಮುನ್ನುಡಿಯನ್ನು ಸ್ವತಃ ತುರ್ತುಸ್ಥಿತಿ ವಿರೋಧಿ ಚಳವಳಿಯ ಪ್ರಮುಖರಾದ ದೇವೇಗೌಡರು ಬರೆದಿರುವುದು ನನಗೆ ಸಂತೋಷ ತಂದಿದೆ’ ಎಂದಿದ್ದಾರೆ.

ಮೋದಿ ಆಡಳಿತದಲ್ಲಿ 5 ಪಟ್ಟು ಅಘೋಷಿತ ತುರ್ತು ಪರಿಸ್ಥಿತಿ: ಕಾಂಗ್ರೆಸ್

ನವದೆಹಲಿ: ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಾಗಿ 50 ವರ್ಷ ಪೂರ್ಣವಾದ ಹಿನ್ನೆಲೆ ದೇಶಾದ್ಯಂತ ಬಿಜೆಪಿ ಕೈಗೊಂಡ ‘ಸಂವಿಧಾನ ಹತ್ಯಾ ದಿನ’ಕ್ಕೆ ವಿಪಕ್ಷ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಮೋದಿ, ಬಿಜೆಪಿ ಈ ನಾಟಕ ಆಡತೊಡಗಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಇದೇ ವೇಳೆ, ‘ಮೋದಿ ಆಡಳಿತದ 11 ವರ್ಷದಲ್ಲಿ ಅಂದಿನ ತುರ್ತುಸ್ಥಿತಿಗಿಂತ 5 ಪಟ್ಟು ಹೆಚ್ಚಿನ ಅಘೋಷಿತ ತುರ್ತುಸ್ಥಿತಿ ಇದೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಕಿಡಿ ಕಾರಿರುವ ಖರ್ಗೆ, ‘ಬಿಜೆಪಿಯವರು ಆಡಳಿತದಲ್ಲಿ ವಿಫಲರಾಗಿದ್ದಾರೆ. ಹಣದುಬ್ಬರ, ನಿರುದ್ಯೋಗ, ಭ್ರಷ್ಟಾಚಾರ ಮತ್ತು ಆರ್ಥಿಕ ವೈಫಲ್ಯಕ್ಕೆ ಸರ್ಕಾರದ ಬಳಿ ಯಾವುದೇ ಉತ್ತರವಿಲ್ಲ. ತಮ್ಮ ಸುಳ್ಳು ಮತ್ತು ವೈಫಲ್ಯವನ್ನು ಮರೆಮಾಚಲು ಸಂವಿಧಾನ ಹತ್ಯಾ ದಿನದ ನಾಟಕ ಪ್ರದರ್ಶಿಸಿದ್ದಾರೆ’ ಎಂದಿದ್ದಾರೆ.ಜೈರಾಂ ರಮೇಶ್ ,ಮಾತನಾಡಿ, ‘ಕಳೆದ 11 ವರ್ಷಗಳಲ್ಲಿ, ಭಾರತೀಯ ಪ್ರಜಾಪ್ರಭುತ್ವವು ಅಘೋಷಿತ ತುರ್ತು ಪರಿಸ್ಥಿತಿ@11 ಎಂದು ಉತ್ತಮವಾಗಿ ವಿವರಿಸಬಹುದಾದ, 5 ಪಟ್ಟು ಹೆಚ್ಚಿನ ವ್ಯವಸ್ಥಿತ ಮತ್ತು ಅಪಾಯಕಾರಿ ದಾಳಿಗೆ ಒಳಗಾಗಿದೆ. ಸಂವಿಧಾನ ಮೇಲಿನ ದಾಳಿ, ತೆರಿಗೆ ಭಯೋತ್ಪಾದನೆ, ವ್ಯವಹಾರಗಳು ಮತ್ತು ಸಂಸ್ಥೆಗಳ ಬೆದರಿಕೆ, ಮಾಧ್ಯಮಗಳ ಮೇಲೆ ನಿಯಂತ್ರಣ ಹಾಗೂ ತನಿಖಾ ಸಂಸ್ಥೆಗಳ ದುರ್ಬಳಕೆ ಮೂಲಕ ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುರ್ತುಸ್ಥಿತಿ ವಿರುದ್ಧ ಕೇಂದ್ರ ಸಂಪುಟ ನಿರ್ಣಯ ಅಂಗೀಕಾರ

ನವದೆಹಲಿ: 50 ವರ್ಷಗಳ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಹೇರಿದ ತುರ್ತು ಪರಿಸ್ಥಿತಿಯನ್ನು ಖಂಡಿಸಿ ಕೇಂದ್ರ ಸಚಿವ ಸಂಪುಟ ಬುಧವಾರ ನಿರ್ಣಯ ಅಂಗೀಕರಿಸಿದೆ. ಇದರ ವಿರುದ್ಧ ಹೋರಾಡಿದವರ ಸ್ಮರಣೆಗೆ ನಿರ್ಧಾರ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿದ್ದರು. 2 ನಿಮಿಷ ಮೌನಾಚರಣೆ ಮೂಲಕ ತುರ್ತುಸ್ಥಿತಿ ವೇಳೆ ದೌರ್ಜನ್ಯಕ್ಕೊಳಗಾದವರಿಗೆ ಗೌರವ ಸಲ್ಲಿಸಲಾಯಿತು.ಆ ಬಳಿಕ ನಿರ್ಣಯ ಮಂಡಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ‘ಪ್ರಧಾನಿ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ತುರ್ತು ಪರಿಸ್ಥಿತಿ ಮತ್ತು ಭಾರತೀಯ ಸಂವಿಧಾನದ ಚೈತನ್ಯವನ್ನು ಬುಡಮೇಲು ಮಾಡುವ ಪ್ರಯತ್ನವನ್ನು ಧೈರ್ಯದಿಂದ ವಿರೋಧಿಸಿದ ಅಸಂಖ್ಯಾತ ವ್ಯಕ್ತಿಗಳ ತ್ಯಾಗಗಳನ್ನು ಸ್ಮರಿಸಲು ಮತ್ತು ಗೌರವಿಸಲು ನಿರ್ಧರಿಸಿದೆ. ಪ್ರಜಾಪ್ರಭುತ್ವದ ತಾಯಿಯಾಗಿರುವ ಭಾರತವು ಸಾಂವಿಧಾನಿಕ ಮೌಲ್ಯಗಳನ್ನು ಕಾಪಾಡುವಲ್ಲಿ ಮೇಲ್ಪಂಕ್ತಿಯಾಗಿದೆ. ನಮ್ಮ ಸಂವಿಧಾನ, ಮತ್ತದರ ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ಮನೋಭಾವವನ್ನು ಎತ್ತಿಹಿಡಿಯುವ ನಮ್ಮ ಸಂಕಲ್ಪವನ್ನು ಪುನರುಚ್ಚರಿಸೋಣ’ ಎಂದರು.ತುರ್ತುಸ್ಥಿತಿ ಅತಿ ಕರಾಳ- ಮೋದಿ:ತುರ್ತು ಪರಿಸ್ಥಿತಿ ವಿರುದ್ಧ ಟ್ವೀಟರ್‌ನಲ್ಲಿ ವಾಗ್ದಾಳಿ ನಡೆಸಿರುವ ಪ್ರಧಾನಿ ಮೋದಿ, ‘ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಪ್ರಜಾಪ್ರಭುತ್ವ ಬಂಧನದಲ್ಲಿತ್ತು. ಭಾರತೀಯ ಇತಿಹಾಸದಲ್ಲೇ ಅದೊಂದು ಕರಾಳ ಅಧ್ಯಾಯ. ತುರ್ತುಸ್ಥಿತಿಯ ಸಮಯದಲ್ಲಿ ಸಂವಿಧಾನದ ಆಶಯವನ್ನು ಉಲ್ಲಂಘಿಸಿದ ರೀತಿಯನ್ನು ಯಾವ ಭಾರತೀಯನೂ ಎಂದಿಗೂ ಮರೆಯಲು ಸಾಧ್ಯವಿಲ್ಲ’ ಎಂದರು.

Read more Articles on