ಮತಪಟ್ಟಿ ಪರಿಷ್ಕರಣೆಗೆ ಬೆದರಿ ಅಕ್ರಮ ವಲಸಿಗರು ಬಾಂಗ್ಲಾಗೆ!

KannadaprabhaNewsNetwork |  
Published : Nov 24, 2025, 02:15 AM IST
ಪರಾರಿಯಾಗಲೆತ್ನಿಸಿದ ಬಾಂಗ್ಲನ್ನರು | Kannada Prabha

ಸಾರಾಂಶ

ಪಶ್ಚಿಮ ಬಂಗಾಳದಲ್ಲಿ ಆರಂಭವಾಗಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ರಾಜ್ಯದಲ್ಲಿ ಅಕ್ರಮವಾಗಿ ಬೀಡುಬಿಟ್ಟಿದ್ದ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ತಲ್ಲಣಗೊಳಿಸಿದೆ. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಅಕ್ರಮ ವಲಸಿಗರು ತಮ್ಮ ತವರಿನತ್ತ ದೌಡಾಯಿಸತೊಡಗಿದ್ದಾರೆ. ಕಳೆದ 6 ದಿನಗಳಲ್ಲಿ 1,200 ವಲಸಿಗರು ಬಾಂಗ್ಲಾಕ್ಕೆ ಮರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

- ಅಧಿಕಾರಿಗಳ ಕೈಗೆ ಸಿಕ್ಕಿಬೀಳುವ ಮೊದಲೇ ಪಲಾಯನ

- 6 ದಿನಗಳಲ್ಲಿ 1,200 ವಲಸಿಗರು ಬಾಂಗ್ಲಾಕ್ಕೆ ಮರುವಲಸೆ

--

ಎಸ್ಕೇಪ್‌

ಬಾಂಗ್ಲಾಗೆ ಪಾರಾರಿ ಏಕೆ?

- ಪ.ಬಂಗಾಳದಲ್ಲಿ ಕೇಂದ್ರ ಚುನಾವಣಾ ಆಯೋಗದಿಂದ ಇತ್ತೀಚೆಗೆ ಮತದಾರ ಪಟ್ಟಿ ಪರಿಷ್ಕರಣೆ ಶುರು

- ಮತದಾರರು ಸ್ಥಳೀಯರೇ ಹೌದೆ ಅಥವಾ ಅಕ್ರಮ ವಲಸಿಗರೇ ಎಂದು ಪರಿಷ್ಕರಣೆ ವೇಳೆ ಪರಿಶೀಲನೆ

- ಆದರೆ ಬಂಗಾಳದಲ್ಲಿ ವಾಸವಾಗಲು ಹಣ ಕೊಟ್ಟು ಅಕ್ರಮವಾಗಿ ದಾಖಲೆ ಪಡೆದಿದ್ದ ಬಾಂಗ್ಲಾ ವಂಚಕರು

- ಈಗ ಇಂಥ ನಕಲಿ ದಾಖಲೆಗಳನ್ನು ಪತ್ತೆ ಮಾಡುತ್ತಿರುವ ಚುನಾವಣಾ ಸಿಬ್ಬಂದಿ. ಪತ್ತೆಯಾದರೆ ಸೆರೆ

- ಹೀಗಾಗಿ ಬಂಧನದ ಭೀತಿಯಿಂದ ಸ್ವದೇಶಕ್ಕೆ ಮರಳಲು ಆರಂಭಿಸಿರುವ ಅಕ್ರಮ ಬಾಂಗ್ಲಾ ವಲಸಿಗರು

--

ಪಿಟಿಐ ಹಕೀಂಪುರ (ಪ.ಬಂಗಾಳ)

ಪಶ್ಚಿಮ ಬಂಗಾಳದಲ್ಲಿ ಆರಂಭವಾಗಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ರಾಜ್ಯದಲ್ಲಿ ಅಕ್ರಮವಾಗಿ ಬೀಡುಬಿಟ್ಟಿದ್ದ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ತಲ್ಲಣಗೊಳಿಸಿದೆ. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಅಕ್ರಮ ವಲಸಿಗರು ತಮ್ಮ ತವರಿನತ್ತ ದೌಡಾಯಿಸತೊಡಗಿದ್ದಾರೆ. ಕಳೆದ 6 ದಿನಗಳಲ್ಲಿ 1,200 ವಲಸಿಗರು ಬಾಂಗ್ಲಾಕ್ಕೆ ಮರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಗಡಿಯಲ್ಲಿ ರಾತ್ರಿ ವೇಳೆ ಸಾವಿರಾರು ಅಕ್ರಮ ವಲಸಿಗರು ಬಾಂಗ್ಲಾಕ್ಕೆ ಹಿಂದಿರುಗುತ್ತಿರುವ ದೃಶ್ಯಗಳು ಕಂಡುಬಂದಿವೆ. ಇವರಲ್ಲಿ ಹೆಚ್ಚಿನವರು ನ್ಯೂ ಟೌನ್, ಬಿರಾಟಿ, ಧುಲಗೋರಿ, ಬಮಾಂಗಚಿ, ಘುಸುರಿ ಮತ್ತು ಹೌರಾದ ಕೈಗಾರಿಕಾ ವಲಯದವರು. ಅನೇಕರು ದಶಕಗಳ ಹಿಂದೆಯೇ ಭಾರತಕ್ಕೆ ಬಂದು, ಸೂಕ್ತ ದಾಖಲೆಗಳಿಲ್ಲದೆ ನೆಲೆ ನಿಂತವರು. ಇನ್ನು ಕೆಲವರು ಹಣ ಕೊಟ್ಟು ಅಕ್ರಮವಾಗಿ ದಾಖಲೆಗಳನ್ನು ರೂಪಿಸಿಕೊಂಡವರು. ಇದೀಗ ಮತಪಟ್ಟಿ ಪರಿಷ್ಕರಣೆ ಇಂಥವರ ನಿದ್ದೆಗೆಡಿಸಿದೆ. ಅಧಿಕಾರಿಗಳು ದಾಖಲೆ ಕೇಳಿ, ವಿಚಾರಣೆ ನಡೆಸುವುದಕ್ಕೆ ಮುಂಚೆಯೇ ಬಾಂಗ್ಲಾಕ್ಕೆ ಹಿಂದಿರುಗುವುದು ಒಳಿತು ಎಂದು ಹಲವರು ಹೇಳಿಕೊಂಡಿದ್ದಾರೆ.

ಹಣ ಕೊಟ್ಟು ಅಕ್ರಮ ಪ್ರವೇಶ:

ಭಾರತಕ್ಕೆ ಪ್ರವೇಶ ಪಡೆಯಲು 5,000-7,000 ರು. ನೀಡಿದ್ದಾಗಿ ಕೆಲವರು ತಿಳಿಸಿದ್ದಾರೆ. ಇತ್ತೀಚೆಗೆ ದಾಖಲೆಗಳನ್ನು ಪಡೆಯಲು 20,000 ರು.ಗಳನ್ನು ಕೊಟ್ಟಿದ್ದಾಗಿ ಧುಲಗೋರಿಯಲ್ಲಿ ನೆಲೆಸಿದ ಮನಿರುಲ್‌ ಶೇಖ್‌ ಹೇಳಿಕೊಂಡಿದ್ದಾರೆ. ‘ನನ್ನ ಬಳಿ ಯಾವುದೇ ದಾಖಲೆಗಳಿಲ್ಲ. ಆದರೂ 2016, 2019, 2021 ಮತ್ತು 2024ರ ಚುನಾವಣೆಯಲ್ಲಿ ಮತ ಚಲಾಯಿಸಿದ್ದೇನೆ’ ಎಂದು ಇಮ್ರಾನ್‌ ಗಾಝಿ ಎಂಬಾತ ತಿಳಿಸಿದ್ದಾನೆ.

===

ರಾಜಕೀಯ ಜಟಾಪಟಿ: ‘ಚುನಾವಣಾ ಗೆಲುವಿಗಾಗಿ ಟಿಎಂಸಿ ಅಕ್ರಮ ವಲಸೆಗೆ ಅವಕಾಶ ಮಾಡಿಕೊಟ್ಟಿದೆ’ ಎಂದು ಬಿಜೆಪಿಯು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ. ಇದಕ್ಕೆ ತಿರುಗೇಟು ನೀಡಿರುವ ಟಿಎಂಸಿ, ‘ಹಿಂದುಳಿದ ಸಮುದಾಯದವರಿಗೆ ತೊಂದರೆ ಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಪರಿಷ್ಕರಣೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ’ ಎಂದು ಆರೋಪಿಸಿದೆ.

PREV

Recommended Stories

ಹರಿಣಗಳ ‘ಬಾಲ’ದೇಟಿಗೆ ಬೆಂಡಾದ ಭಾರತ!
ತಾಯಂದಿರ ಎದೆಹಾಲಲ್ಲೂ ವಿಷಕಾರಿ ಯುರೇನಿಯಂ!