ಪ್ರತಿಭಾವಂತ ವಿದ್ಯಾರ್ಥಿಗಳಿಗೆ 7.5 ಲಕ್ಷ ರು.ನಿಂದ 10 ಲಕ್ಷ ರು.ವರೆಗೆ ಕೇಂದ್ರ ಸರ್ಕಾರದಿಂದ ಖಾತ್ರಿರಹಿತ ಶಿಕ್ಷಣ ಸಾಲ ಭಾಗ್ಯ

KannadaprabhaNewsNetwork |  
Published : Nov 06, 2024, 11:50 PM ISTUpdated : Nov 07, 2024, 07:41 AM IST
ವಿದ್ಯಾರ್ಥಿಗಳು | Kannada Prabha

ಸಾರಾಂಶ

ಪ್ರತಿಭಾವಂತ ವಿದ್ಯಾರ್ಥಿಗಳಿಗೆ 7.5 ಲಕ್ಷ ರು.ನಿಂದ 10 ಲಕ್ಷ ರು.ವರೆಗೆ ಖಾತರಿರಹಿತ ಸಾಲದ ಆರ್ಥಿಕ ನೆರವು ನೀಡುವ ‘ಪಿಎಂ ವಿದ್ಯಾಲಕ್ಷ್ಮಿ ಯೋಜನೆ’ಗೆ ಬುಧವಾರ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದಕ್ಕಾಗಿ 3,600 ಕೋಟಿ ನಿಧಿಯನ್ನು ಮೀಸಲಿಡಲಾಗಿದೆ.

 ನವದೆಹಲಿ : ಪ್ರತಿಭಾವಂತ ವಿದ್ಯಾರ್ಥಿಗಳಿಗೆ 7.5 ಲಕ್ಷ ರು.ನಿಂದ 10 ಲಕ್ಷ ರು.ವರೆಗೆ ಖಾತರಿರಹಿತ ಸಾಲದ ಆರ್ಥಿಕ ನೆರವು ನೀಡುವ ‘ಪಿಎಂ ವಿದ್ಯಾಲಕ್ಷ್ಮಿ ಯೋಜನೆ’ಗೆ ಬುಧವಾರ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದಕ್ಕಾಗಿ 3,600 ಕೋಟಿ ನಿಧಿಯನ್ನು ಮೀಸಲಿಡಲಾಗಿದೆ.

ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ವಾರ್ತಾ ಸಚಿವ ಅಶ್ವಿನಿ ವೈಷ್ಣವ್‌, ‘ಆರ್ಥಿಕ ಸಮಸ್ಯೆಗಳಿಂದಾಗಿ ದೇಶದ ಯುವಕರು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ. ಆದರೆ ಇದನ್ನು ತಪ್ಪಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರ ನೀಡಲು ಈ ಯೋಜನೆ ರೂಪಿಸಲಾಗಿದೆ’ ಎಂದರು.

ಹೀಗಿದೆ ಯೋಜನೆ:

ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (ಕ್ಯುಎಚ್‌ಇಐ) ಪ್ರವೇಶ ದೊರೆತ ವಿದ್ಯಾರ್ಥಿಗಳಿಗೆ, ತಮ್ಮ ತಮ್ಮ ಶೈಕ್ಷಣಿಕ ವೆಚ್ಚಗಳನ್ನು ಭರಿಸಲು ಕೊಲಾಟರಲ್‌ ರಹಿತ ಅಥವಾ ಖಾತರಿದಾರರಿಲ್ಲದೆ ಬ್ಯಾಂಕ್‌ ಹಾಗೂ ಆರ್ಥಿಕ ಸಂಸ್ಥೆಗಳಿಂದ ಸಾಲ ನೀಡಲಾಗುತ್ತದೆ.

ಅಂದರೆ, ವಾರ್ಷಿಕ ₹8 ಲಕ್ಷಕ್ಕಿಂತ ಕಡಿಮೆ ಆದಾಯ ಗಳಿಸುವ ಪರಿವಾರದ ಹಾಗೂ ಯಾವುದೇ ಶಿಷ್ಯವೇತನ ಸೌಲಭ್ಯ ಪಡೆಯದ ವಿದ್ಯಾರ್ಥಿಗಳಿಗೆ 7.5 ಲಕ್ಷ ರು. ವರೆಗಿನ ಸಾಲದ ಶೇ.75ಕ್ಕೆ ಸರ್ಕಾರವೇ ಖಾತರಿ ಕೊಡಲಿದೆ. ಅಂತೆಯೇ, ₹8 ಲಕ್ಷಕ್ಕೂ ಅಧಿಕ ಆದಾಯವಿರುವ ಕುಟುಂಬದ ವಿದ್ಯಾರ್ಥಿಗಳಿಗೆ 10 ಲಕ್ಷ ರು. ವರೆಗಿನ ಸಾಲದ ಮೇಲೆ ಶೇ.3ರಷ್ಟು ಬಡ್ಡಿ ವಿನಾಯಿತಿ ನೀಡಲಾಗುವುದು.

ವಿದ್ಯಾರ್ಥಿಗಳು ಅರ್ಜಿ ಹೇಗೆ ಹಾಕಬೇಕು?:

ಈ ಯೋಜನೆಗೆ ಅರ್ಜಿ ಸಲ್ಲಿಸಲು ಉನ್ನತ ಶಿಕ್ಷಣ ಇಲಾಖೆ ಏಕೀಕೃತ ಪೋರ್ಟಲ್‌ ಪರಿಚಯಿಸಲಿದೆ. 860 ಕ್ಯುಎಚ್‌ಇಐ ಸಂಸ್ಥೆಗಳ 22 ಲಕ್ಷ ವಿದ್ಯಾರ್ಥಿಗಳು ಇದರ ಲಾಭ ಪಡೆಯಲು ಸಮರ್ಥರಾಗಿದ್ದಾರೆ.ಯೋಜನೆಯ ಲಾಭ ಪಡೆಯುವವರ ಪಟ್ಟಿಯನ್ನು ಎನ್‌ಐಆರ್‌ಎಫ್‌ ರ್‍ಯಾಂಕಿಂಗ್‌ ಆಧರಿಸಿ ಪ್ರತಿ ವರ್ಷ ಪರಿಷ್ಕರಿಸಲಾಗುವುದು.

ಯಾರು ಅರ್ಹರು?

- ವಾರ್ಷಿಕ ₹8 ಲಕ್ಷಕ್ಕಿಂತ ಕಡಿಮೆ ಆದಾಯ ಗಳಿಸುವ ಕುಟುಂಬದ ಮಕ್ಕಳು ಅರ್ಹರು

- ಇವರು ಸರ್ಕಾರದಿಂದ ಬೇರಾವುದೇ ಶಿಷ್ಯವೇತನ ಸೌಲಭ್ಯ ಪಡೆಯುತ್ತಿರಬಾರದು

- 7.5 ಲಕ್ಷ ರು. ವರೆಗಿನ ಸಾಲದ ಶೇ.75ಕ್ಕೆ ಕೇಂದ್ರ ಸರ್ಕಾರವೇ ಖಾತರಿ ಕೊಡಲಿದೆ

- ₹8 ಲಕ್ಷಕ್ಕೂ ಅಧಿಕ ಆದಾಯವಿರುವ ಕುಟುಂಬದ ವಿದ್ಯಾರ್ಥಿಗಳಿಗೆ 10 ಲಕ್ಷ ರು. ವರೆಗಿನ ಸಾಲದ ಮೇಲೆ ಶೇ.3ರಷ್ಟು ಬಡ್ಡಿ ವಿನಾಯಿತಿ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ