ಪ್ರಧಾನ್‌ರಿಂದ ಪ್ರಧಾನಿವರೆಗೆ ಹಬ್ಬಿತು ಹೋರಾಟ - ದೆಹಲಿಯಲ್ಲಿ ಜಿರಳೆ ಕ್ರಾಂತಿ!

KannadaprabhaNewsNetwork |  
Published : Jul 21, 2026, 02:00 AM IST
CJP

ಸಾರಾಂಶ

ನೀಟ್‌ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ, ಶಿಕ್ಷಣದಲ್ಲಿ ಸುಧಾರಣೆ ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್‌ ಜನತಾ ಪಾರ್ಟಿ(ಜಿರಳೆ ಜನತಾ ಪಕ್ಷ- ಸಿಜೆಪಿ) ಸೋಮವಾರ ಕರೆ ನೀಡಿದ್ದ ಸಂಸತ್‌ ಚಲೋಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತಾದರೂ, ಅದು ಹಿಂಸಾರೂಪಕ್ಕೆ ತಿರುಗಿದೆ.

ನವದೆಹಲಿ: ನೀಟ್‌ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ, ಶಿಕ್ಷಣದಲ್ಲಿ ಸುಧಾರಣೆ ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್‌ ಜನತಾ ಪಾರ್ಟಿ(ಜಿರಳೆ ಜನತಾ ಪಕ್ಷ- ಸಿಜೆಪಿ) ಸೋಮವಾರ ಕರೆ ನೀಡಿದ್ದ ಸಂಸತ್‌ ಚಲೋಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತಾದರೂ, ಅದು ಹಿಂಸಾರೂಪಕ್ಕೆ ತಿರುಗಿದೆ.

ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪೋಷಕರು, ಸಾಮಾಜಿಕ ಕಾರ್ಯಕರ್ತರು, ರಾಜಕಾರಣಿಗಳು ಸೇರಿದಂತೆ 20000ಕ್ಕೂ ಹೆಚ್ಚು ಜನರು ಸಂಸತ್‌ನತ್ತ ಹೆಜ್ಜೆ ಹಾಕುವ ಯತ್ನ ಮಾಡಿದರಾದರೂ ಸೂಕ್ಷ್ಮ ಪ್ರದೇಶ ಮತ್ತು ಅನುಮತಿ ಪಡೆದಿಲ್ಲ ಎನ್ನುವ ಕಾರಣಕ್ಕೆ ಪ್ರತಿಭಟನಾಕಾರರನ್ನು ಪೊಲೀಸರು ಮಾರ್ಗ ಮಧ್ಯದಲ್ಲೇ ತಡೆದಿದ್ದಾರೆ. ಈ ವೇಳೆ ಕಲ್ಲು ತೂರಾಟ ನಡೆದಿದೆ. 

ಜೊತೆಗೆ ಬ್ಯಾರಿಕೇಡ್ ದಾಟಿ ಮುಂದೆ ಸಾಗಲು ಯತ್ನಿಸಿದ ಪ್ರತಿಭಟನಾಕಾರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಭಾರೀ ಸಂಘರ್ಷ ನಡೆದಿದೆ. ಬಳಿಕ ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ಪೊಲೀಸರು ಅಶ್ರುವಾಯು ಸಿಡಿಸಿ, ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸುವ ಯತ್ನ ಮಾಡಿದ್ದಾರೆ. ಈ ವೇಳೆ 50ಕ್ಕೂ ಹೆಚ್ಚು ಪೊಲೀಸರು ಮತ್ತು ಪ್ರತಿಭಟನಾಕಾರರಿಗೆ ಗಾಯಗಳಾಗಿದ್ದು, ಪ್ರಕರಣ ಸಂಬಂಧ 100ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದರೊಂದಿಗೆ ಜೂ.20ರಂದು ಜಂತರ್‌ ಮಂತರ್‌ನಲ್ಲಿ ಅಭಿಜಿತ್‌ ದೀಪ್ಕೆ ನೇತೃತ್ವದಲ್ಲಿ ಸಣ್ಣಮಟ್ಟದಲ್ಲಿ ಆರಂಭವಾಗಿದ್ದ ಹೋರಾಟ, ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್‌ ಬೆಂಬಲದ ಬಳಿಕ ಬೃಹತ್‌ ಸ್ವರೂಪ ಪಡೆದುಕೊಂಡಿದ್ದ ಹೋರಾಟ ತಾರ್ಕಿಕ ಅಂತ್ಯದತ್ತ ಯಶಸ್ವಿಯಾಗಿ ಹೆಜ್ಜೆ ಇಟ್ಟಂತಾಗಿದೆ.

ಮಳೆಯಲ್ಲೂ ನಿಲ್ಲದ ಹೋರಾಟ:

ಸೋಮವಾರ ಬೆಳಗ್ಗೆ ದೆಹಲಿಯಲ್ಲಿ ಮಳೆಯ ಹೊರತಾಗಿಯೂ ಸಾವಿರಾರು ಜನರು ಜಂತರ್‌ಮಂತರ್‌ನಿಂದ ‘ಭಾರತ್‌ ಮಾತಾ ಕೀ ಜೈ’,‘ಜೈ ಭೀಮ್‌’, ‘ವಂದೇ ಮಾತರಂ’, ‘ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ಕೊಡಿ’ ಎಂಬ ಘೋಷಣೆ ಕೂಗುತ್ತಾ ಪ್ಲೆಕಾರ್ಡ್‌, ಬ್ಯಾನರ್‌ ಹಿಡಿದು ಸಂಸತ್ತಿನ ಹೆಜ್ಜೆ ಹಾಕಿದರು.

ಜನ ಸಾಗರ:

ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನರಿಂದಾಗಿ ಸೆಂಟ್ರಲ್‌ ದಿಲ್ಲಿಯಲ್ಲಿ ಜನಸಾಗರವೇ ಸೃಷ್ಟಿಯಾಗಿತ್ತು. ಪ್ರತಿಭಟನಾಕಾರರನ್ನು ತಡೆಯಲು ಸಂಸತ್ತು ಸಂಪರ್ಕಿಸುವ ಎಲ್ಲಾ ದೊಡ್ಡ, ಸಣ್ಣ ರಸ್ತೆಗಳಲ್ಲೂ ಬ್ಯಾರಿಕೇಡ್‌ ಹಾಕಿ, ಬಿಗಿ ಬಂದೋಬಸ್ತ್‌ ಕಲ್ಪಿಸಲಾಗಿತ್ತು. ಬೆಳಗ್ಗೆ 11.15ಕ್ಕೆ ಮೊದಲಿಗೆ ಪಾರ್ಲಿಮೆಂಟ್‌ ಸ್ಟ್ರೀಟ್‌ ಪೊಲೀಸ್‌ ಸ್ಟೇಷನ್‌ ಪ್ರತಿಭಟನಾಕಾರರು ಬ್ಯಾರಿಕೇಡ್‌ ಭೇದಿಸಿ ಮುನ್ನುಗ್ಗಲೆತ್ನಿಸಿದರು. ಈ ವೇಳೆ ಕೆಲ ಕಿಡಿಗೇಡಿಗಳು ಪೊಲೀಸರು ಮತ್ತು ಅಕ್ಕಪಕ್ಕ ನಿಲ್ಲಿಸಿದ ವಾಹನಗಳತ್ತ ಸಿಕ್ಕ ಸಿಕ್ಕ ವಸ್ತುಗಳನ್ನೆಸದರು. ಹೀಗಾಗಿ ಹಲವು ಪೊಲೀಸರು ಮತ್ತು ಪ್ರತಿಭಟನಾಕಾರರು ಗಾಯಗೊಂಡರು. ವಾಹನಗಳಿಗೂ ಹಾನಿಯಾಯಿತು. ಬಳಿಕ ಪಟೇಲ್ ಚೌಕ್‌, ರೈಲ್‌ ಭವನ್‌ ಮತ್ತಿತರ ಕಡೆಯಲ್ಲೂ ಪೊಲೀಸರು ಅಶ್ರುವಾಯು ಸಿಡಿಸಿ ಪ್ರತಿಭಟನಾಕಾರರನ್ನು ಚದುರಿಸಲೆತ್ನಿಸಿದರು. ಹಲವರನ್ನು ವಶಕ್ಕೂ ಪಡೆದು ನಂತರ ಬಿಡುಗಡೆ ಮಾಡಲಾಯಿತು.

ದೀಪ್ಕೆ ವಶಕ್ಕೆ:

ಈ ಮಧ್ಯೆ, ಸಂಸತ್‌ ಚಲೋಗೂ ಮುನ್ನವೇ ಜಂತರ್‌ ಮಂತರ್‌ನಿಂದ ಸಿಜೆಪಿ ಅಧ್ಯಕ್ಷ ಅಭಿಜಿತ್‌ ದೀಪ್ಕೆಯನ್ನು ವಶಕ್ಕೆ ಪಡೆಯಲಾಯಿತು. ಬಳಿಕ ಅವರನ್ನು ಬಂಧಿಸಲಾಗಿದೆ ಎಂಬ ಸುದ್ದಿ ಹರಡಿತಾದರೂ ಪೊಲೀಸರು ಅದನ್ನು ನಿರಾಕರಿಸಿದರು.

ಮೆಟ್ರೋ ಬಂದ್‌, ನೆಟ್ವರ್ಕ್‌ ಕಟ್‌:

ಪ್ರತಿಭಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಹಲವು ಮೆಟ್ರೋ ನಿಲ್ದಾಣಗಳನ್ನು ಬಂದ್‌ ಮಾಡಿದ್ದರೆ, ಕೆಲಕಾಲ ಇಂಟರ್ನೆಟ್‌ ಸೇವೆಯನ್ನೂ ಸ್ಥಗಿತಗೊಳಿಸಿದ್ದರು.

ಪ್ರಮುಖರು:

ಅಜಾದ್‌ ಸಮಾಜ್‌ ಪಕ್ಷದ ಸಂಸದೆ ನಗೀನಾ, ಚಂದ್ರಶೇಖರ್‌ ಆಜಾದ್‌ ಮತ್ತು ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್‌ ಯಾದವ್‌ ಸೇರಿ ಹಲವು ಪ್ರಮುಖರು ಪ್ರತಿಭಟನೆಯಲ್ಲಿ ಕಾಣಿಸಿಕೊಂಡರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕೇಂದ್ರಕ್ಕೆ ಜಿರಳೆ ಪಕ್ಷದ ಮೂರು ಬೇಡಿಕೆ
ಬೆಂಗ್ಳೂರು ಜೊತೆ ಡೀಲ್‌ಗೆ ಒತ್ತು ನೀಡಿದ್ದ ಬರ್ನ್‌ಹ್ಯಾಂ ಬ್ರಿಟನ್‌ ನೂತನ ಪ್ರಧಾನಿ