ನವದೆಹಲಿ: ‘ರೈಲು ನಿರ್ಗಮನದ 8 ತಾಸು ಮೊದಲು ಟಿಕೆಟ್ ರದ್ದು ಮಾಡಿದ್ರಷ್ಟೇ ರೀಫಂಡ್... ಅಂತಿಮ 8 ತಾಸಿನೊಳಗೆ ರದ್ದು ಮಾಡಿದರೆ ರೀಫಂಡ್ ಇಲ್ಲ’ ಎಂಬ ನಿಯಮ ಸೇರಿ ರೈಲ್ವೆ ಇಲಾಖೆ , ಹೊಸ ಮರುಪಾವತಿ ಸ್ಲ್ಯಾಬ್ಗಳನ್ನು ಪ್ರಕಟಿಸಿದೆ. ಹೊಸ ಹೊಸ ನಿಯಮವು ಈ ವರ್ಷ ಏಪ್ರಿಲ್ 1 ರಿಂದ 15 ರವರೆಗೆ ಜಾರಿಗೆ ಬರಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ನೆಟ್ವರ್ಕ್ ಅನ್ನು ಮೇಲ್ದರ್ಜೆಗೇರಿಸುವುದು ಮತ್ತು ಪ್ರಯಾಣಿಕರ ಸೇವೆಯನ್ನು ಉತ್ತಮಪಡಿಸುವ ಉದ್ದೇಶದಿಂದ ಸುಧಾರಣೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದಿದ್ದಾರೆ.
ರೈಲು ಟಿಕೆಟ್ ಅನ್ನು ರೈಲಿನ ನಿರ್ಗಮನದ 8 ಗಂಟೆಗಿಂತ ಮೊದಲು ಕ್ಯಾನ್ಸಲ್ ಮಾಡಿದರಷ್ಟೇ ರೀಫಂಡ್ ಸಿಗಲಿದೆ. ರೈಲು ಬಿಡುವ ಸಮಯಕ್ಕಿಂತ ಮೊದಲಿನ ‘8 ತಾಸು ಅವಧಿ’ಯಲ್ಲಿ ರದ್ದು ಮಾಡಿದರೆ ರೀಫಂಡ್ ಇಲ್ಲ. ಕೊನೇ ಕ್ಷಣದಲ್ಲಿ ಟಿಕೆಟ್ ರದ್ದು ಮಾಡುವ ಅಭ್ಯಾಸ ತಡೆಯುವುದು, ಅಗತ್ಯವಿರುವ ಪ್ರಯಾಣಿಕರಿಗೆ ಟಿಕೆಟ್ ಲಭ್ಯವಾಗುವಂತೆ ನೋಡಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮುನ್ನ ಪ್ರಯಾಣದ 4 ತಾಸು ಮುಂಚಿನವರೆಗೂ ಟಿಕೆಟ್ ರದ್ದು ಮಾಡಿ ರೀಫಂಡ್ ಪಡೆಯಬಹುದಾಗಿಯತ್ತು.
ಟಿಕೆಟ್ ರದ್ದು ಮಾಡಿದರೆ, ಪ್ರಯಾಣಕ್ಕಿಂತ ಮುಂಚಿನ 8ರಿಂದ24 ಗಂಟೆ ಒಳಗೆ ರದ್ದಾಗುವ ಟಿಕೆಟ್ನ ಶೇ.50ರಷ್ಟು, 24-72 ಗಂಟೆ ನಡುವೆ ರದ್ದಾಗುವ ಟಿಕೆಟ್ನ ಶೇ.75ರಷ್ಟು ಹಣ ರೀಫಂಡ್ ಆಗಲಿದೆ. 72 ಗಂಟೆಗಿಂತ ಹಿಂದಿನ ಅವಧಿಯಲ್ಲಿ ರದ್ದು ಮಾಡಿದರೆ ಕನಿಷ್ಠ ಶುಲ್ಕವನ್ನಷ್ಟೇ ಕಡಿತ ಮಾಡಲಾಗುತ್ತದೆ.
ರೈಲು ಪ್ರಯಾಣಕ್ಕೆ 30 ನಿಮಿಷ ಮೊದಲು ಪ್ರಯಾಣಿಕರು ತಾವು ಪ್ರಯಾಣಿಸುವ ಕ್ಲಾಸ್ ಅನ್ನು ಮೇಲ್ದರ್ಜೆಗೇರಿಸಲೂ ಅವಕಾಶ ಸಿಗಲಿದೆ. ಈ ಹಿಂದೆ ರಿಸರ್ವೇಷನ್ ಚಾರ್ಚ್ ಸಿದ್ಧಪಡಿಸುವ ಮೊದಲಷ್ಟೇ ಈ ರೀತಿಯ ಬದಲಾವಣೆಗೆ ಅವಕಾಶವಿತ್ತು.
ಬೋರ್ಡಿಂಗ್ ಪಾಯಿಂಟ್ ಬದಲಾವಣೆ:
ರೈಲು ನಿರ್ಗಮಿಸುವ ಅರ್ಧಗಂಟೆ ಮೊದಲು ಪ್ರಯಾಣಿಕರು ತಾವು ರೈಲು ಹತ್ತುವ ಸ್ಥಳವನ್ನೂ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಈ ಹಿಂದೆ ಚಾರ್ಟ್ ಸಿದ್ಧಪಡಿಸುವ ಮೊದಲಷ್ಟೇ ಇಂಥ ಬದಲಾವಣೆಗೆ ಅವಕಾಶ ಇತ್ತು.
ತತ್ಕಾಲ್ ಬುಕ್ಕಿಂಗ್ನಲ್ಲಿ ಬದಲಾವಣೆ:ತತ್ಕಾಲ್ ಬುಕ್ಕಿಂಗ್ಗೆ ಆಧಾರ್ ಆಧರಿತ ಒಟಿಪಿ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈ ಮೂಲಕ ನಕಲಿ ಬುಕ್ಕಿಂಗ್ಗಳನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ.
5 ಹೊಸ ಡೆಕ್ಗಳು:
ಇನ್ನು ಸರಕು ಸಾಗಣೆ ಕ್ಷೇತ್ರದಲ್ಲೂ ಇಲಾಖೆ ಸುಧಾರಣೆ ತರುತ್ತಿದ್ದು, ಹೊಸ ಸಿಂಗಲ್ ಡೆಕ್ ಮತ್ತು ಡಬಲ್ ಡೆಕ್ ವ್ಯಾಗನ್ಗಳನ್ನು ಇಲಾಖೆ ಪರಿಚಯಿಸುತ್ತಿದೆ. ಉಪ್ಪು ಮತ್ತು ಆಟೋಮೊಬೈಲ್ಗಳ ಸಾಗಣೆಗೆ ಇದರಿಂದ ಅನುಕೂಲ ಆಗಲಿದೆ.