ಬಾಂಗ್ಲಾ ಮುಸ್ಲಿಮರ ಗುರಿಯಾಗಿಸಿ ಅಸ್ಸಾಂ ಸಿಎಂ ಗನ್‌: ಟ್ವೀಟ್‌ ವಿವಾದ

KannadaprabhaNewsNetwork |  
Published : Feb 09, 2026, 02:00 AM IST
ಬಿಸ್ವಾ | Kannada Prabha

ಸಾರಾಂಶ

ಬಾಂಗ್ಲಾದೇಶಿ ಮುಸ್ಲಿಮರಿಬ್ಬರನ್ನು ಗುರಿಯಾಗಿಸಿ ಬಿಜೆಪಿ ನಾಯಕ ಹಾಗೂ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಗುಂಡು ಹಾರಿಸುವಂತೆ ಬಿಂಬಿಸವ ವಿಡಿಯೋವನ್ನು ಪೋಸ್ಟ್ ಮಾಡಿದ್ದ ಬಿಜೆಪಿ ಅಸ್ಸಾಂ ಘಟಕ ವಿವಾದ ಸೃಷ್ಟಿಯಾದ ಬಳಿಕ ಭಾನುವಾರ ಅಳಿಸಿ ಹಾಕಿದೆ.

ಗುವಾಹಟಿ: ಬಾಂಗ್ಲಾದೇಶಿ ಮುಸ್ಲಿಮರಿಬ್ಬರನ್ನು ಗುರಿಯಾಗಿಸಿ ಬಿಜೆಪಿ ನಾಯಕ ಹಾಗೂ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಗುಂಡು ಹಾರಿಸುವಂತೆ ಬಿಂಬಿಸವ ವಿಡಿಯೋವನ್ನು ಪೋಸ್ಟ್ ಮಾಡಿದ್ದ ಬಿಜೆಪಿ ಅಸ್ಸಾಂ ಘಟಕ ವಿವಾದ ಸೃಷ್ಟಿಯಾದ ಬಳಿಕ ಭಾನುವಾರ ಅಳಿಸಿ ಹಾಕಿದೆ.

ವಿಡಿಯೋವನ್ನು ಶನಿವಾರ ಅದು ಪೋಸ್ಟ್‌ ಮಾಡಿತ್ತು. ಗುಂಡಿನ ದಾಳಿಗೆ ಗುರಿಯಾಗುವ ವ್ಯಕ್ತಿಗಳಲ್ಲಿ ಒಬ್ಬ ಬಾಂಗ್ಲಾದೇಶಿ ಮುಸ್ಲಿಮನ ಥರ ಟೋಪಿ ಧರಿಸಿದ್ದ.

ಕಾಂಗ್ರೆಸ್‌ ಕಿಡಿ:

ಈ ಬಗ್ಗೆ ಕಾಂಗ್ರೆಸ್ ಭಾನುವಾರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ. ಇದು ಅಲ್ಪಸಂಖ್ಯಾತರ ಗುರಿಯಿಟ್ಟ ‘ಪಾಯಿಂಟ್-ಬ್ಲಾಂಕ್ ಹತ್ಯೆ’ಯನ್ನು ತೋರಿಸುತ್ತದೆ ಮತ್ತು ನ್ಯಾಯಾಂಗವು ಈ ವಿಷಯದಲ್ಲಿ ಯಾವುದೇ ಮೃದುತ್ವವನ್ನು ತೋರಿಸದೆ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದೆ.

==

ಅಮೆರಿಕ ಡೀಲ್‌ನಿಂದ ಭಾರತಕ್ಕೆ ಸಮಸ್ಯೆ ಆಗಲ್ಲ: ಗೋಯಲ್‌

ಅಮೆರಿಕದಿಂದ 45 ಲಕ್ಷ ಕೋಟಿ ರು. ವಸ್ತು ಆಮದು

5 ವರ್ಷಗಳ ಆಮದು ಬದ್ಧತೆ ನೀಡಿರುವ ಭಾರತ

ಭಾರತದ ಈ ಬದ್ಧತೆ ಸಮಸ್ಯೆ ಸೃಷ್ಟಿಸಲಿಕ್ಕಿಲ್ಲ

ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ವಿಶ್ವಾಸ

ನವದೆಹಲಿ: ದ್ವಿಪಕ್ಷೀಯ ಒಪ್ಪಂದದ ಭಾಗವಾಗಿ ಮುಂದಿನ ಐದು ವರ್ಷಗಳಲ್ಲಿ ಅಮೆರಿಕದಿಂದ 45 ಲಕ್ಷ ಕೋಟಿ ರು. ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಬದ್ಧತೆಯನ್ನು ಉಳಿಸಿಕೊಳ್ಳಲು ಭಾರತಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಅವರು, ‘ಭಾರತದ ಆರ್ಥಿಕತೆಯು ಬೆಳೆಯುತ್ತಿರುವ ವೇಗ ನೋಡಿದರೆ ಮುಂದಿನ ದಿನಗಳಲ್ಲಿ 181 ಲಕ್ಷ ಕೋಟಿ ರು. ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಅಗತ್ಯ ದೇಶಕ್ಕೆ ಬೀಳಲಿದೆ. ಸದ್ಯ ಭಾರತವು ಇತರೆ ದೇಶಗಳಿಂದ ಆಮದು ಮಾಡಿಕೊಳ್ಳುವ 22 ಲಕ್ಷ ಕೋಟಿ ರು. ಮೌಲ್ಯದ ವಸ್ತುಗಳನ್ನು ಅಮೆರಿಕದಿಂದ ಖರೀದಿಸಬಹುದಾಗಿದೆ. ನಾವು ವಿಶ್ವಾದ್ಯಂತ ವಿವಿಧ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮಲ್ಲಿ ಬೇಡಿಕೆ ಇದೆ, ಆದರೆ ಅದಕ್ಕಾಗಿ ನೀವು ಸ್ಪರ್ಧಾತ್ಮಕವಾಗಿರಬೇಕು ಎಂದು ಅಮೆರಿಕಕ್ಕೆ ತಿಳಿಸಿದ್ದೆವು’ ಎಂದರು.

‘ಹಲವು ದೊಡ್ಡ ಕಂಪನಿಗಳು ಭಾರತದಲ್ಲಿ ಹೂಡಿಕೆಗಳನ್ನು ಘೋಷಿಸಿದ್ದು, ನನ್ನ ಪ್ರಕಾರ ಭಾರತದಲ್ಲಿ 10 ಗಿಗಾ ವ್ಯಾಟ್‌ ಡೇಟಾ ಸೆಂಟರ್‌ಗಳನ್ನು ತೆರೆಯಲಿದೆ. ಇದಕ್ಕಾಗಿ ಭಾರತಕ್ಕೆ ಭಾರೀ ಪ್ರಮಾಣದ ಉಪಕರಣಗಳ ಅಗತ್ಯವಿದ್ದು, ಅದನ್ನು ಅಮೆರಿಕವೇ ಪೂರೈಸಲಿದೆ’ ಎಂದು ಗೋಯಲ್‌ ಹೇಳಿದ್ದಾರೆ.

ಸೋಯಾ ಉದ್ಯಮದಿಂದ ಎಚ್ಚರಿಕೆಯ ಸ್ವಾಗತ:ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಭಾಗವಾಗಿ ಅಮೆರಿಕದಿಂದ ಆಮದಾಗುವ ಸೋಯಾಬಿನ್‌ ಎಣ್ಣೆ, ಪಶುಆಹಾರದ ಮೇಲಿನ ತೆರಿಗೆ ಕಡಿತ ನಿರ್ಧಾರವನ್ನು ಭಾರತದ ಅಡುಗೆ ತೈಲ ಮತ್ತು ಸೋಯಾಬಿನ್‌ ಸಂಸ್ಕರಣಾ ಉದ್ದಿಮೆಗಳು ಸ್ವಾಗತಿಸಿವೆಯಾದರೂ ಒಪ್ಪಂದ ಕುರಿತ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ತಿಳಿಸಿವೆ. ಸದ್ಯದ ಸ್ಥಿತಿಯಲ್ಲಿ ಭಾರತದ ಕಂಪನಿಗಳ ಮೇಲೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.

ಸದ್ಯ ಭಾರತವು 1.50 ಲಕ್ಷದಿಂದ 2 ಲಕ್ಷ ಟನ್‌ ವರೆಗೆ ಸೋಯಾಬಿನ್‌ ತೈಲವನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತದೆ. ಸದ್ಯ ಅಮೆರಿಕದ ಸೋಯಾಬಿನ್‌ ಎಣ್ಣೆ ಮೇಲೆ ಶೇ.16.5ರಷ್ಟು ತೆರಿಗೆ ಇದೆ. ಆದರೆ, ಬೇರೆಡೆಗಿಂತ ಅಮೆರಿಕದ ಸೋಯಾಬಿನ್‌ ಎಣ್ಣೆ ದರ ಪ್ರತಿ ಟನ್‌ಗೆ 30-40 ಡಾಲರ್‌ನಷ್ಟು ಹೆಚ್ಚಿರುತ್ತದೆ. ಸಾರಿಗೆ ವೆಚ್ಚವೂ ಸೇರಿಸಿದರೆ ನಮ್ಮ ಮೇಲೆ ದೊಡ್ಡ ವ್ಯತ್ಯಾಸವೇನೂ ಆಗಲ್ಲ ಎಂದು ಸಂಸ್ಥೆಗಳು ಹೇಳಿಕೊಂಡಿವೆ.

==

ಅಮೆರಿಕ ಡೀಲ್‌ ವಿರುದ್ಧ ಫೆ.12ಕ್ಕೆ ದೇಶವ್ಯಾಪಿ ರೈತ ಪ್ರತಿಭಟನೆ

ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದಕ್ಕೆ ಸಂಯುಕ್ತ ಕಿಸಾನ್‌ ಮೋರ್ಚಾ ಸೇರಿ ಹಲವು ಸಂಘಟನೆಗಳು ಕಿಡಿಕಾರಿದ್ದು, ಫೆ.12ರಂದು ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಿವೆ. ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರತಿಕೃತಿ ದಹಿಸಲು ನಿರ್ಧರಿಸಿವೆ.‘ಭಾರತ ಸರ್ಕಾರವು ರೈತರ ಹಿತರಕ್ಷಣೆ ಮಾಡಲಿದ್ದೇವೆ ಎಂದು ಭರವಸೆ ಕೊಟ್ಟಿದೆ. ಆದರೆ, ಒಪ್ಪಂದವು ಅಮೆರಿಕದ ಕೃಷಿ ಕ್ಷೇತ್ರಕ್ಕೆ ನಮ್ಮ ಮಾರುಕಟ್ಟೆಯನ್ನು ಮುಕ್ತ ಮಾಡಿದೆ. ಅಮೆರಿಕದ ಒತ್ತಡಕ್ಕೆ ಸರ್ಕಾರ ಶರಣಾಗಿದೆ. ಹೀಗಾಗಿ ಫೆ.12ರಂದು ನಡೆವ ಪ್ರತಿಭಟನೆಗೆ ಬೆಂಬಲ ನೀಡಲಿದ್ದೇವೆ. ಜೊತೆಗೆ ಪ್ರತ್ಯೇಕ ಪ್ರತಿಭಟನೆಗೂ ದಿನಾಂಕ ನಿಗದಿಪಡಿಸಲಿದ್ದೇವೆ’ ಎಂದು ಮೋರ್ಚಾ ಹೇಳಿದೆ.

==

ಅಜಿತ್‌ ಪವಾರ್ ಸಾವಿನ ಹಿಂದೆ ಅನುಮಾನ, ತನಿಖೆ ಆಗಲಿ: ಕುಟುಂಬ ಆಗ್ರಹ

ಕೋರ್ಟ್‌ ನಿಗಾದಲ್ಲಿ ತನಿಖೆ ಮಾಡಿ: ಸಂಜಯ್‌ ರಾವುತ್‌

ಮುಂಬೈ: ಜ.28ರಂದು ವಿಮಾನ ಅಪಘಾತದಲ್ಲಿ ಮೃತಪಟ್ಟ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಸಾವಿನ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಳಿಕ ಇದೀಗ ಪವಾರ್‌ ಕುಟುಂಬವೇ ದುಷ್ಕೃತ್ಯದ ಅನುಮಾನ ವ್ಯಕ್ತಪಡಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಪವಾರ್‌ ಸೋದರಳಿಯ, ಎನ್‌ಸಿಪಿ (ಶರದ್‌ ಬಣ) ಶಾಸಕ ರೋಹಿತ್‌ ಪವಾರ್‌, ‘ಅಪಘಾತದ ಬಗ್ಗೆ ಜನರ ಮನಸ್ಸಿನಲ್ಲಿ ಹಲವಾರು ಅನುಮಾನಗಳಿವೆ. ನಮಗೂ ಅನುಮಾನಗಳಿವೆ. ಅವುಗಳಿಗೆ ಉತ್ತರ ಬೇಕು. ಫೆ.10ರಂದು ನಮ್ಮ ಕುಟುಂಬದ ಅನುಮಾನಗಳನ್ನು ತಿಳಿಸಲಿದ್ದೇನೆ. ಅದಕ್ಕೆ ಉತ್ತರಗಳು ಸಿಗುತ್ತವೆ ಎಂದು ಭಾವಿಸುತ್ತೇನೆ’ ಎಂದಿದ್ದಾರೆ.ಅಜಿತ್‌ ಪವಾರ್‌ ಸಾವಿನ ದಿನವೇ ಪ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದುಷ್ಕೃತ್ಯ ಶಂಕೆ ವ್ಯಕ್ತಪಡಿಸಿದ್ದರು.ಕೋರ್ಟ್‌ ನಿಗಾದಲ್ಲಿ ತನಿಖೆಯಾಗಲಿ: ರಾವುತ್‌

ಶಿವಸೇನೆ (ಯುಬಿಟಿ) ಶಾಸಕ ಸಂಜಯ್‌ ರಾವುತ್‌ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆಗೆ ಆಗ್ರಹಿಸಿದ್ದು, ‘ಅಜಿತ್ ಪವಾರ್ ಬಿಜೆಪಿಗೆ ಸಂಬಂಧಿಸಿದ ಯಾವುದೇ ಪ್ರಮುಖ ದಾಖಲೆಗಳನ್ನು ಹೊತ್ತೊಯ್ಯುತ್ತಿದ್ದರೆ? ಅವರ ಸಾವಿನ ತನಿಖೆಯನ್ನು ಕೋರ್ಟ್‌ ಮೇಲ್ವಿಚಾರಣೆ ಮಾಡಬೇಕು. ಅಪಘಾತದಲ್ಲಿ ಯಾವುದೇ ಅಕ್ರಮವಿದೆಯೇ ಎಂಬುದು ಹೊರಬರಬೇಕು’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸಾವರ್ಕರ್‌ಗೆ ಭಾರತ ರತ್ನ ಕೊಟ್ರೆ ಪ್ರಶಸ್ತಿ ಘನತೆ ಹೆಚ್ಚಳ: ಭಾಗವತ್
ಭಯೋತ್ಪಾದನೆ ವಿಷಯದಲ್ಲಿ ರಾಜಿ ಇಲ್ಲ: ಮೋದಿ