ಬಾಂಗ್ಲಾ ಹಿಂದೂಗಳ ಸುರಕ್ಷತೆ ಬಗ್ಗೆ ಕಾಂಗ್ರೆಸ್‌ ನಿರ್ಲಕ್ಷ? ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮತ್ತೊಂದು ವಿವಾದ

KannadaprabhaNewsNetwork |  
Published : Aug 10, 2024, 01:43 AM ISTUpdated : Aug 10, 2024, 04:53 AM IST
ಬಾಂಗ್ಲಾ | Kannada Prabha

ಸಾರಾಂಶ

ಹಿಂದೂ ವಿರೋಧಿ ಎಂದು ಆಡಳಿತಾರೂಢ ಬಿಜೆಪಿಯಿಂದ ಸದಾ ಟೀಕೆಗೆ ಒಳಗಾಗುವ ಕಾಂಗ್ರೆಸ್‌ ನಾಯಕ, ಲೋಕಸಭೆಯಲ್ಲಿನ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಇದೀಗ ಮತ್ತೊಂದು ವಿವಾದದ ಕೇಂದ್ರಬಿಂದುವಾಗಿ ಹೊರಹೊಮ್ಮಿದ್ದಾರೆ.

ನವದೆಹಲಿ: ಹಿಂದೂ ವಿರೋಧಿ ಎಂದು ಆಡಳಿತಾರೂಢ ಬಿಜೆಪಿಯಿಂದ ಸದಾ ಟೀಕೆಗೆ ಒಳಗಾಗುವ ಕಾಂಗ್ರೆಸ್‌ ನಾಯಕ, ಲೋಕಸಭೆಯಲ್ಲಿನ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಇದೀಗ ಮತ್ತೊಂದು ವಿವಾದದ ಕೇಂದ್ರಬಿಂದುವಾಗಿ ಹೊರಹೊಮ್ಮಿದ್ದಾರೆ.

 ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ಮುಹಮ್ಮದ್‌ ಯೂನಸ್‌ ನೇಮಕಗೊಂಡ ಬೆನ್ನಲ್ಲೇ ಅವರಿಗೆ ಅಭಿನಂದನೆ ಸಲ್ಲಿಸಿ ರಾಹುಲ್‌ ರವಾನಿಸಿದ ಸಂದೇಶದಲ್ಲಿ, ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ಹಿಂಸಾಚಾರದ ಕುರಿತು ಯಾವುದೇ ಪ್ರಸ್ತಾಪ ಮಾಡದೇ ಇರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.

ಮುಹಮ್ಮದ್‌ ಯೂನಸ್‌ ಆಯ್ಕೆಯಾಗುತ್ತಲೇ ಅವರಿಗೆ ಅಭಿನಂದನಾ ಸಂದೇಶ ರವಾನಿಸಿದ್ದ ಪ್ರಧಾನಿ ಮೋದಿ, ಇದೇ ಸಂದೇಶದಲ್ಲಿ ಬಾಂಗ್ಲಾದೇಶದಲ್ಲಿ ಆದಷ್ಟು ಬೇಗ ಶಾಂತಿ ಪುನರ್‌ಸ್ಥಾಪನೆಯ ಭರವಸೆ ವ್ಯಕ್ತಪಡಿಸುತ್ತಲೇ, ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರ ಮೇಲಿನ ದಾಳಿ ತಡೆಗೆ ಕೋರಿದ್ದರು. ಆದರೆ ರಾಹುಲ್‌ ಗಾಂಧಿ ಟ್ವೀಟರ್‌ನಲ್ಲಿ ರವಾನಿಸಿದ ಸಂದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯ ಕುರಿತು ಒಂದೇ ಒಂದೇ ಪದವನ್ನೂ ಬಳಸಿಲ್ಲ ಎಂದು ಜಾಲತಾಣದಲ್ಲಿ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಬಿಜೆಪಿ ನಾಯಕ ಶೆಹಜಾದ್‌ ಪೂನಾವಾಲಾ ಕೂಡಾ ಈ ಕುರಿತು ಟ್ವೀಟ್‌ ಮಾಡಿದ್ದು ಪ್ರಧಾನಿ ಮೋದಿ ರಿಯಲ್‌ ಹಿಂದೂ, ರಾಹುಲ್‌ ಗಾಂಧಿ ರೀಲ್‌ ಹಿಂದೂ ಎಂದು ಬಣ್ಣಿಸಿದ್ದಾರೆ.

ಈ ಹಿಂದೆ ಪ್ಯಾಲೆಸ್ತೀನ್‌ ಮೇಲೆ ಇಸ್ರೇಲ್‌ ದಾಳಿ ನಡೆಸಿದ್ದ ಸಂದರ್ಭದಲ್ಲಿ ಸುದೀರ್ಘವಾಗಿ ಟ್ವೀಟ್‌ ಮಾಡಿದ್ದ ರಾಹುಲ್‌ ಗಾಂಧಿ ‘ಗಾಜಾದಲ್ಲಿನ ಮಕ್ಕಳ ಮೇಲಿನ ದಾಳಿ ಸೇರಿದಂತೆ ಸಾವಿರಾರು ಅಮಾಯಕ ನಾಗರಿಕರ ಹತ್ಯೆ ಹಾಗೂ ಜನರಿಗೆ ಆಹಾರ, ನೀರು, ವಿದ್ಯುತ್‌ ಕಡಿತ ಮಾಡುವುದು ಮಾನವೀಯತೆ ಮೇಲಿನ ದಾಳಿ’ ಎಂದು ಖಂಡಿಸಿದ್ದರು. ಜೊತೆಗೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಕೂಡಾ ಗಾಜಾದ ಮೇಲೆ ದಾಳಿಯ ವೇಳೆ ಸುದೀರ್ಘ ಟ್ವೀಟ್ ಮಾಡಿ ಅವರ ಬೆಂಬಲಕ್ಕೆ ನಿಂತಿದ್ದರು.

ಆದರೆ ಇದೀಗ ರಾಹುಲ್‌ ನೆರೆಹೊರೆಯಲ್ಲೇ ಹಿಂದೂಗಳ ಮೇಲೆ ದಾಳಿ ನಡೆದರೂ ಮೌನಕ್ಕೆಕ್ಕೆ ಶರಣಾಗಿದ್ದಾರೆ. ಇನ್ನೊಂದೆಡೆ ಪ್ರಿಯಾಂಕಾ ವಾದ್ರಾ ಈ ಹಿಂಸಾಚಾರದ ಬಗ್ಗೆ ಮಾತನಾಡುವುದರಿಂದಲೇ ದೂರ ಉಳಿದಿದ್ದಾರೆ. ಇದು ಹಿಂದೂಗಳ ಕುರಿತಾದ ಅವರ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಬಿಜೆಪಿ ನಾಯಕರು ಮತ್ತು ನೆಟ್ಟಿಗರು ಕಿಡಿಕಾರಿದ್ದಾರೆ. 

‘ಬಾಂಗ್ಲಾ ಸರ್ಕಾರದ ಮುಖ್ಯಸ್ಥನಾಗಿ ಅಧಿಕಾರ ಸ್ವೀಕರಿಸಿದ ಪ್ರೊ. ಮುಹಮ್ಮದ್ ಯೂನುಸ್‌ಗೆ ಅಭಿನಂದನೆ. ಬಾಂಗ್ಲಾದಲ್ಲಿನ ಪರಿಸ್ಥಿತಿ ಆದಷ್ಟು ಬೇಗ ಸಾಮಾನ್ಯ ಸ್ಥಿತಿಗೆ ಮರಳಿ ಹಿಂದೂಗಳು ಸೇರಿದಂತೆ ಎಲ್ಲಾ ಅಲ್ಪಸಂಖ್ಯಾತರಿಗೆ ರಕ್ಷಣೆ ಒದಗಿಸಲಾಗುತ್ತದೆ ಎಂದು ಆಶಿಸುತ್ತೇನೆ. ಮುಂದಿನ ದಿನಗಳಲ್ಲಿ ಬಾಂಗ್ಲಾದೊಂದಿಗೆ ಸೇರಿ ಕೆಲಸ ಮಾಡಲು ಭಾರತ ಬದ್ಧವಾಗಿದೆ’ ಎಂದು ಪ್ರಧಾನಿ ಮೋಟಿ ಟ್ವೀಟ್‌ ಮಾಡಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇಸ್ರೋ ಹೊಸ ಮೈಲುಗಲ್ಲು-6100 ಕೆಜಿ ತೂಕದ ಉಪಗ್ರಹ 15 ನಿಮಿಷದಲ್ಲಿ ಕಕ್ಷೆಗೆ
ಶತ್ರು- ಮಿತ್ರರಿಗೆ ಮಹಾ ಸಹೋದರರ ಸವಾಲ್‌!