ಧಾರ್(ಮ.ಪ್ರ.): ವಿವಾದಿತ ಭೋಜಶಾಲಾ ದೇಗುಲ ಮತ್ತು ಮಸೀದಿಯ ಸಮೀಕ್ಷೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮುಂದುವರೆಸಿದ್ದು, 7ನೇ ದಿನವಾದ ಗುರುವಾರ ಕಂದಕಗಳನ್ನು ತೋಡಿ ಪರಿಶೀಲನೆ ನಡೆಸಿದೆ.
ಈ ವೇಳೆ ಹಿಂದೂಗಳ ಪರವಾಗಿ ಸರಸ್ವತಿ ದೇಗುಲದ ಆಶಿಶ್ ಗೋಯಲ್ ಹಾಗೂ ಗೋಪಾಲ್ ಶರ್ಮಾ ಉಪಸ್ಥಿತರಿದ್ದರೆ, ಕಮಲ ಮೌಲಾ ಮಸೀದಿಯ ಪರವಾಗಿ ಅಬ್ದುಲ್ ಸಮದ್ ಹಾಜರಿದ್ದರು.
ಈ ವೇಳೆ ಮಾತನಾಡಿದ ಸಮದ್, ‘ಎಎಸ್ಐ ತನ್ನ ಸಮೀಕ್ಷಾ ಕಾರ್ಯವನ್ನು ಮಾಡುತ್ತಿದ್ದು, ಗುರುವಾರ ಪ್ರಾಂಗಣದ ಹಿಂಬದಿಯಲ್ಲಿ 6 ಅಡಿ ಆಳದ ಮೂರು ಕಂದಕಗಳನ್ನು ತೋಡಿ ಪರಿಶೀಲನೆ ಕೈಗೊಂಡಿದೆ.
ಆದರೆ ನಾವು 2003ರ ಬಳಿಕ ಪ್ರತಿಷ್ಠಾಪಿಸಲಾದ ವಸ್ತುಗಳನ್ನು ಸಮೀಕ್ಷೆಯ ಭಾಗವಾಗಿ ಬಳಸಬೇಡಿ ಎಂದು ಕೋರುತ್ತೇವೆ’ ಎಂದು ತಿಳಿಸಿದರು.
ವಾಗ್ದೇವಿ ವಿಗ್ರಹ ಒಯ್ದಿದ್ದ ಬ್ರಿಟಿಷರು: ಭೋಜಶಾಲಾ ದೇಗುಲದಲ್ಲಿ ಇತಿಹಾಸದ ಪ್ರಕಾರ ರಾಜ ಭೋಜ ಎಂಬ ದೊರೆ ವಾಗ್ದೇವಿಯ ವಿಗ್ರಹವನ್ನು ಕ್ರಿ.ಶ.1034ರಲ್ಲಿ ಪ್ರತಿಷ್ಠಾಪನೆ ಮಾಡಿದ್ದ. ಅದನ್ನು ಬ್ರಿಟಿಷರು 1875ರಲ್ಲಿ ಲಂಡನ್ಗೆ ಕೊಂಡೊಯ್ದಿರುವುದಾಗಿ ಹಿಂದೂ ಪರ ಅರ್ಜಿದಾರರು ತಿಳಿಸಿದ್ದಾರೆ.