ನವದೆಹಲಿ: ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ನ ರೋಹಿಂಗ್ಯಾ ಅಕ್ರಮ ವಲಸಿಗರ ಹಾವಳಿ ಬಗ್ಗೆ ಭಾರೀ ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ದೆಹಲಿ ಪೊಲೀಸರು ಇಂಥ ಅಕ್ರಮ ವಲಸಿಗರ ಪತ್ತೆಗೆ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.
ಇಂಥ ದಾಖಲೆ ಪರಿಶೀಲನೆ ವೇಳೆ ತಮ್ಮ ಗುರುತಿನ ಕುರಿತು ಸರಿಯಾದ ದಾಖಲೆ ಹೊಂದದವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಅವರು ಅಕ್ರಮ ವಲಸಿಗರೆಂಬುದು ಕಂಡುಬಂದಲ್ಲಿ ವಿದೇಶಿಯರ ಕಾಯ್ದೆಯಡಿ ಅವರನ್ನು ಗಡಿಪಾರು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
==ಅಕ್ರಮ ವಲಸಿಗರ ಮಕ್ಕಳನ್ನು ದೆಹಲಿ ಶಾಲೆಗಳಲ್ಲಿ ದಾಖಲಿಸಿಕೊಳ್ಳುವಂತಿಲ್ಲ
ದೆಹಲಿ ಶಾಲೆಗಳಿಗೆ ಬಾಂಗ್ಲಾದೇಶದ ಅಕ್ರಮ ವಲಸಿಗರ ಮಕ್ಕಳನ್ನು ದಾಖಲಿಸಿಕೊಳ್ಳದಂತೆ ಸರ್ಕಾರ ನಿರ್ದೇಶನ ನೀಡಿದ್ದು, ಯಾವುದೇ ವಿದ್ಯಾರ್ಥಿಯ ನಾಗರಿಕತ್ವದ ಬಗ್ಗೆ ಸಂದೇಹ ಉದ್ಭವವಾದಲ್ಲಿ ಪೊಲೀಸರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುವಂತೆ ಸೂಚಿಸಲಾಗಿದೆ. ಜತೆಗೆ, ದಾಖಲಾತಿಯ ಸಮಯದಲ್ಲಿ ಕಡತಗಳ ಕೂಲಂಕಶ ಪರಿಶೀಲನೆಯನ್ನು ಕಡ್ಡಾಯಗೊಳಿಸಲಾಗಿದೆ.