ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯಾಗಿರುವುದು ಭಾರತದ ಪುರಾತನ ನಾಗರಿಕತೆಯ ಪುನರುತ್ಥಾನದ ಸಂಕೇತ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಿಳಿಸಿದರು. 75ನೇ ಗಣರಾಜ್ಯೋತ್ಸವದ ಮುನ್ನಾದಿನ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು ‘ರಾಮಮಂದಿರದ ವಾಸ್ತುಶಿಲ್ಪ ಅದ್ಬುತವಾಗಿದ್ದು, ಇತಿಹಾಸಕಾರರು ಇದನ್ನು ಒಂದು ಮೈಲಿಗಲ್ಲು ಎಂದು ಭವಿಷ್ಯದಲ್ಲೂ ಪರಿಗಣಿಸುತ್ತಾರೆ’ ಎಂದು ತಿಳಿಸಿದರು.
ಹಾಗೆಯೇ ಚಂದ್ರಯಾನ-3 ಮತ್ತು ಆದಿತ್ಯಯಾನದಲ್ಲಿ ಭಾರತ ಯಶಸ್ವಿಯಾಗಿದ್ದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಜೊತೆಗೆ ಹೊಸ ಶಿಕ್ಷಣ ನೀತಿಯಿಂದಾಗಿ ಎಲ್ಲ ಶಾಲೆಗಳಲ್ಲೂ ಶಿಕ್ಷಣ ಹಕ್ಕು 12ನೇ ತರಗತಿಯವರೆಗೂ ವಿಸ್ತರಣೆಯಾಗಿದೆ ಎಂದು ತಿಳಿಸಿದರು. ಅಲ್ಲದೆ ನಾರಿಶಕ್ತಿ ಅಧಿನಿಯಮದಿಂದ ಮಹಿಳೆಯರು ಶಾಸನಸಭೆಗಳಲ್ಲಿ ಪಾಲ್ಗೊಂಡು ಸಮಾಜಕ್ಕೆ ಒಳಿತು ಮಾಡಲು ಪುರುಷರಿಗೆ ಸಮಾನವಾದ ಅವಕಾಶ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.