ಕಾನೂನು ಆಯೋಗದಮುಖ್ಯಸ್ಥರಾಗಿ ಕರ್ನಾಟಕಹೈ ಮಾಜಿ ಸಿಜೆ ದಿನೇಶ್‌

KannadaprabhaNewsNetwork |  
Published : Apr 16, 2025, 12:44 AM IST
ಮಹೇಶ್ವರಿ | Kannada Prabha

ಸಾರಾಂಶ

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಧೀಶ, ಕರ್ನಾಟಕ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಅವರು 23ನೇ ಕಾನೂನು ಆಯೋಗದ ಮುಖ್ಯಸ್ಥರಾಗಿ ನೇಮಕರಾಗಿದ್ದಾರೆ.

ನವದೆಹಲಿ: ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಧೀಶ, ಕರ್ನಾಟಕ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಅವರು 23ನೇ ಕಾನೂನು ಆಯೋಗದ ಮುಖ್ಯಸ್ಥರಾಗಿ ನೇಮಕರಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ನ್ಯಾ ಮಹೇಶ್ವರಿ ಅವರನ್ನು 23ನೇ ಕಾನೂನು ಆಯೋಗದ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ. ಇವರ ಜೊತೆಗೆ ವಕೀಲ ಹಿತೇಶ್‌ ಜೈನ್‌ ಮತ್ತು ಪ್ರೊ.ಡಿ.ಪಿ. ವರ್ಮಾ ಅವರು ಸಹ ಆಯೋಗದಲ್ಲಿದ್ದಾರೆ. ನ್ಯಾ.ಮಹೇಶ್ವರಿ ಅವರು 2016ರಲ್ಲಿ ಮೇಘಾಲಯ ಹೈಕೋರ್ಟ್‌, 2018ರಲ್ಲಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿದ್ದರು. 2019ರಲ್ಲಿ ಸುಪ್ರೀಂ ಕೋರ್ಟ್‌ ಜಡ್ಜ್‌ ಆಗಿ ಪ್ರಮಾಣ ಸ್ವೀಕರಿಸಿ, 2023ರ ಮೇನಲ್ಲಿ ನಿವೃತ್ತರಾದರು. ಕಾನೂನು ಆಯೋಗವು ಸರ್ಕಾರಕ್ಕೆ ಕಾನೂನಿನ ಸಲಹೆಗಳನ್ನು ನೀಡುತ್ತದೆ.

ಜಿಪಿಎಸ್‌ ಆಧರಿತ ಟೋಲ್‌

15 ದಿನದಲ್ಲಿ ಜಾರಿ: ಗಡ್ಕರಿ

ನವದೆಹಲಿ: ‘ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆರಹಿತ ಸಂಚಾರಕ್ಕಾಗಿ ಜಿಪಿಎಸ್‌ ಆಧರಿತ ಟೋಲ್‌ ಸಂಗ್ರಹ ವ್ಯವಸ್ಥೆಯು ಇನ್ನು 15 ದಿನಗಳಲ್ಲಿ ಜಾರಿಗೆ ಬರಲಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಡ್ಕರಿ, ಭಾರತದ ರಸ್ತೆ ಮೂಲಸೌಕರ್ಯವನ್ನು ಆಧುನೀಕರಿಸುವ ಸರ್ಕಾರದ ಹೊಸ ಯೋಜನೆ ಇದಾಗಿದ್ದು, ಟೋಲ್‌ ಬೂತ್‌ನಲ್ಲಿ ಉದ್ದನೆ ಸಾಲು, ನಿಲ್ಲುವುದನ್ನು ತಪ್ಪಿಸಲು ಯೋಜನೆ ಜಾರಿಗೆ ತರಲಾಗುತ್ತಿದೆ. ವಾಹನಗಳು ಎಷ್ಟು ದೂರ ಸಂಚರಿಸಿದೆಯೋ ಅಧರ ಆಧಾರದ ಮೇಲೆ ಟೋಲ್‌ ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದರು.

ಈ ಯೋಜನೆ ಅಡಿಯಲ್ಲಿ ಟೋಲ್‌ ಪ್ಲಾಜಾದಲ್ಲಿ ವಾಹನಗಳು ನಿಲ್ಲುವ ಅಗತ್ಯವಿರುವುದಿಲ್ಲ. ಬದಲಿಗೆ ಸ್ಯಾಟಲೈಟ್‌ ಟ್ರ್ಯಾಕಿಂಗ್‌ನಿಂದ ಬ್ಯಾಂಕ್‌ ಖಾತೆಯಿಂದಲೇ ನೇರವಾಗಿ ಹಣ ಕಟ್‌ ಆಗುತ್ತದೆ.

ಉಷ್ಣಮಾರುತ ಸ್ಥಳೀಯ

ವಿಪತ್ತೆಂದು ತೆಲಂಗಾಣ

ಸರ್ಕಾರ ಘೋಷಣೆ

ನವದೆಹಲಿ: ತೆಲಂಗಾಣ ಸರ್ಕಾರವು ಉಷ್ಣಮಾರುತವನ್ನು ರಾಜ್ಯ ವಿಪತ್ತು ಎಂದು ಅಧಿಕೃತವಾಗಿ ಘೋಷಿಸಿದೆ. ಹೀಗಾಗಿ ಉಷ್ಣಮಾರುತದಿಂದ ಸಾವನ್ನಪ್ಪುವವರ ಕುಟುಂಬಗಳಿಗೆ ಇನ್ನು 4 ಲಕ್ಷ ರು. ಪರಿಹಾರ ಸಿಗಲಿದೆ. ಇದುವರೆಗೂ ಇಂಥ ಘಟನೆಯಲ್ಲಿ ಮೃತರ ಕುಟುಂಬಕ್ಕೆ 50000 ರು. ಮಾತ್ರ ಪರಿಹಾರ ಲಭ್ಯವಾಗುತ್ತಿತ್ತು. ಆದರೆ ಇದೀಗ ರಾಜ್ಯ ವಿಪತ್ತು ಎಂದು ಘೋಷಿಸಿರುವ ಕಾರಣ ಬಿಸಿಲಿನ ಹೊಡೆತಕ್ಕೆ ಸಿಕ್ಕಿ ಸಾವನ್ನಪ್ಪುವವರ ಅದರಲ್ಲೂ ವಿಶೇಷವಾಗಿ ಕೂಲಿ ಕಾರ್ಮಿಕರ ಕುಟುಂಬಕ್ಕೆ ಹೆಚ್ಚಿನ ಆರ್ಥಿಕ ನೆರವು ನೀಡಲು ಸಾಧ್ಯವಾಗಲಿದೆ.

ಸಲ್ಲುಗೆ ದಾಳಿ ಬೆದರಿಕೆ

ಹಾಕಿದ್ದು ಗುಜರಾತ್‌ನ

ಮಾನಸಿಕ ಅಸ್ವಸ್ಥ

ವಡೋದರಾ/ಮುಂಬೈ: ನಟ ಸಲ್ಮಾನ್ ಖಾನ್ ಅವರ ಕಾರು ಸ್ಫೋಟಿಸುವುದಾಗಿ ಹಾಗೂ ಅವರ ಮನೆಗೆ ನುಗ್ಗಿ ಥಳಿಸು ವುದಾಗಿ ಬೆದರಿಕೆ ಹಾಕಿದ ಅಪರಿಚಿತ ವ್ಯಕ್ತಿಯನ್ನು ಗುಜರಾತ್‌ ಮೂಲದ ಮಯಾಂಕ್‌ ಪಾಂಡ್ಯ ಎಂದು ಮುಂಬೈ ಪೊಲೀಸರು ಪತ್ತೆ ಹಚ್ಚಿದ್ದಾರೆ. ಮುಂಬೈ ಸಂಚಾರಿ ಪೊಲೀಸರ ಸಹಾಯವಾಣಿ ಕೇಂದ್ರಕ್ಕೆ ಕಳುಹಿಸಿದ ಬೆದರಿಕೆ ಸಂದೇಶದ ಮೂಲ ಪತ್ತೆ ಮಾಡಿದಾಗ ಅದನ್ನು ಪಾಂಡ್ಯ ಕಳುಹಿಸಿದ್ದು ಕಂಡುಬಂದಿದೆ. ಈ ಹಿನ್ನೆಯಲ್ಲಿ ಪೊಲೀಸರು ಯುವಕನ ಮನೆಗೆ ಭೇಟಿ ನೀಡಿ, ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದಾರೆ. ಈ ಸಂದರ್ಭದಲ್ಲಿ ಆತ ಮಾನಸಿಕ ಅಸ್ವಸ್ಥ, ಆತ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂಬುದು ಕಂಡುಬಂದಿದೆ.

ವಕ್ಫ್‌ ತಿದ್ದುಪಡಿ ಕಾಯ್ದೆ

ವಿರುದ್ಧದ ಅರ್ಜಿ ಇಂದು

ಸುಪ್ರೀಂನಲ್ಲಿ ವಿಚಾರಣೆ

ನವದೆಹಲಿ: ವಕ್ಫ್‌ ತಿದ್ದುಪಡಿ ಕಾಯ್ದೆ 2025 ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಬುಧವಾರ ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಲಿದೆ. ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿಗಳನ್ನು ವಿಚಾರಣೆ ನಡೆಸಲಿದೆ. ಎಂಐಎಂ ಸಂಸದ ಅಸಾದುದ್ದೀನ್‌ ಓವೈಸಿ ಅವರು ಸಲ್ಲಿಸಿರುವ ಅರ್ಜಿ ಸೇರಿ 10 ಮನವಿಗಳನ್ನು ಪಟ್ಟಿ ಮಾಡಲಾಗಿದೆ. ಹೊಸದಾಗಿ ಸಲ್ಲಿಕೆಯಾಗಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಸಮಾಜವಾದಿ ಪಕ್ಷದ ಸಂಸದ ಜಿಯಾ ಉರ್‌ ರಹಮಾನ್‌ ಬರ್ಕ್‌, ವೈಎಸ್‌ಆರ್‌ಕಾಂಗ್ರೆಸ್‌, ಸಿಪಿಐ, ನಟ ವಿಜಯ್‌ ಅವರ ತಮಿಳಗ ವೇಟ್ರಿ ಕಳಗಂ ಪಕ್ಷದ ಅರ್ಜಿಗಳು ವಿಚಾರಣೆಗೆ ಪಟ್ಟಿಯಾಗಿಲ್ಲ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಆಸ್ಟ್ರೇಲಿಯಾದಲ್ಲಿ 426 ಕೆಜಿಯ ಗಾಂಧಿ ಕಂಚಿನ ಪ್ರತಿಮೆ ಧ್ವಂಸ, ಕಳವು
6 ಕ್ಷೇತ್ರದ ಚುನಾವಣಾ ಉಸ್ತುವಾರಿ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ