ಐಸ್‌ಕ್ರೀಂನಲ್ಲಿ ಸಿಕ್ಕ ಬೆರಳು ಕಾರ್ಮಿಕನದ್ದು

KannadaprabhaNewsNetwork |  
Published : Jun 20, 2024, 01:12 AM ISTUpdated : Jun 20, 2024, 04:15 AM IST
ಐಸ್‌ಕ್ರೀಂನಲ್ಲಿ ಬೆರಳು | Kannada Prabha

ಸಾರಾಂಶ

ಕೆಲಸ ಮಾಡುವಾಗ ಬೆರಳು ಕತ್ತರಿಸಿತ್ತು. ಅದೇ ತುಂಡು ಐಸ್‌ಕ್ರೀಂ ಸೇರಿಕೊಂಡಿತ್ತು ಎಂಬುದಾಗಿ ಮುಂಬಯ ಪೊಲೀಸರು ತನಿಖೆಯ ವೇಳೆ ಪತ್ತೆಹಚ್ಚಿದ್ದಾರೆ.

ಮುಂಬೈ: ಕೆಲವು ದಿನಗಳ ಹಿಂದೆ ಮುಂಬೈನ ಗ್ರಾಹಕರೊಬ್ಬರಿಗೆ ಐಸ್‌ಕ್ರೀಂ ತಿನ್ನುವಾಗ ಬೆರಳು ಪತ್ತೆಯಾದ ಪ್ರಕರಣದ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಈ ಬೆರಳಿನ ತುಂಡು ಐಸ್‌ಕ್ರೀಂ ಕಾರ್ಖಾನೆಯ ಕಾರ್ಮಿಕನದ್ದು ಎಂದು ಪೊಲೀಸರು ಹೇಳಿದ್ದಾರೆ.

ಇಂದಾಪುರ ಐಸ್‌ಕ್ರೀಂ ಘಟಕದಲ್ಲಿ ಕೆಲಸ ಮಾಡುವ ಓಂಕಾರ್‌ ಪೋಟೆ ಎಂಬ ಕಾರ್ಮಿಕನ ಬೆರಳು ಮೇ 11ರಂದು ಕೆಲಸ ಮಾಡುವಾಗ ಕತ್ತರಿಸಿಹೋಗಿತ್ತು. ಬಳಿಕ ಅದು ಕೋನ್‌ ಒಳಗೆ ಸೇರಿ ಪ್ಯಾಕ್‌ ಆಗಿ ಮಾರಾಟವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಜೂ.12ರಂದು ವೈದ್ಯರೊಬ್ಬರು ಈ ಐಸ್‌ಕ್ರೀಂ ಖರೀದಿಸಿದ್ದರು. ಅದನ್ನು ಅವರು ತಿನ್ನುವಾಗ ಬೆರಳು ಸಿಕ್ಕಿತ್ತು. ಅವರು ಕೂಡಲೇ ಮಲಾಡ್‌ ಪೊಲೀಸ್‌ ಠಾಣೆಗೆ ಈ ಬಗ್ಗೆ ದೂರು ನೀಡಿದ್ದರು, ಬಳಿಕ ತನಿಖೆ ವೇಳೆ ಐಸ್‌ಕ್ರೀಂ ಕಾರ್ಖಾನೆ ಕಾರ್ಮಿಕನ ಬೆರಳು ತುಂಡಾಗಿದ್ದ ಮಾಹಿತಿ ಸಿಕ್ಕಿತ್ತು. ಅವನ ಡಿಎನ್‌ಯ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಐಸ್‌ಕ್ರೀಂನಲ್ಲಿ ಪತ್ತೆಯಾದ ಬೆರಳು ಆತನದ್ದೇ ಎಂದು ಖಚಿತಪಡಿಸಿಕೊಳ್ಳಲಾಗಿದೆ.

ಹರ್ಷೀಸ್‌ ಚಾಕಲೇಟ್ ಸಿರಪ್‌ನಲ್ಲಿ ಸತ್ತ ಇಲಿ ಪ್ರತ್ಯಕ್ಷ!

ಐಸ್‌ಕ್ರೀಂ ಕೋನ್‌ನಲ್ಲಿ ಮಾನವನ ಬೆರಳು ಪತ್ತೆಯಾದ ಬೆನ್ನಲ್ಲೇ ಹರ್ಷೀಸ್‌ ಕಂಪನಿಯ ಚಾಕಲೇಟ್‌ ಸಿರಪ್‌ನಲ್ಲಿ ಇಲಿಯ ಕಳೇಬರ ಪತ್ತೆಯಾಗಿರುವುದಾಗಿ ಅದನ್ನು ಆರ್ಡರ್‌ ಮಾಡಿ ಸೇವಿಸಿರುವ ಕುಟುಂಬ ಹೇಳಿಕೊಂಡಿದೆ.

ಆಹಾರವನ್ನು ಆರ್ಡರ್‌ ಮಾಡಿದ್ದ ಮುಂಬೈ ಮೂಲದ ಪ್ರಾಮಿ ಶ್ರೀಧರ್‌ ಎಂಬುವವರು ಈ ವಿಷಯವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಬ್ರೌನಿ ಕೇಕ್‌ ಜೊತೆಗೆ ಚಾಕಲೇಟ್‌ ಸಿರಪ್‌ ಸೇವಿಸುವ ಸಲುವಾಗಿ ಕಳೆದ ತಿಂಗಳು ಹರ್ಷೀಸ್‌ ಚಾಕಲೇಟ್‌ ಸಿರಪ್‌ ಆರ್ಡರ್‌ ಮಾಡಿದ್ದೆವು. ಅದನ್ನು ಸೇವಿಸಿದ ಬಳಿಕ ಅನುಮಾನಗೊಂಡು ಹೊರಕ್ಕೆ ಚೆಲ್ಲಿದಾಗ ಸಿರಪ್‌ ಜೊತೆಗೆ ಸತ್ತ ಇಲಿ ಪತ್ತೆಯಾಯಿತು. ಇದನ್ನು ಸೇವಿಸಿದ ನಮ್ಮ ಮಗು ವೈದ್ಯಕೀಯ ಚಿಕಿತ್ಸೆಗೆ ಒಳಗಾಗಿದೆ’ ಎಂದು ವಿಡಿಯೋ ಸಮೇತ ಪೋಸ್ಟ್‌ ಮಾಡಿದ್ದಾರೆ.

ಚಿಪ್ಸ್‌ ಪ್ಯಾಕೆಟ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಸತ್ತ ಕಪ್ಪೆ ಪತ್ತೆ

ಪ್ಯಾಕ್ಡ್‌ ಆಹಾರ ಮತ್ತು ಸರಕು ಪದಾರ್ಥಗಳಲ್ಲಿ ಪ್ರಾಣಿಗಳು ಮತ್ತು ಮಾನವರ ಮಾಂಸಗಳು ಪತ್ತೆಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ಜಾಮ್‌ನಗರದಲ್ಲಿ ವೇಫರ್ಸ್‌ ಕಂಪನಿಯ ಕ್ರಂಚೆಕ್ಸ್‌ ಚಿಪ್ಸ್‌ ಪ್ಯಾಕೆಟ್‌ನಲ್ಲಿ ಸತ್ತ ಕಪ್ಪೆ ಇರುವುದು ಪತ್ತೆಯಾಗಿದೆ.

ಮಂಗಳವಾರ ಸಂಜೆ ಜಾಸ್ಮಿನ್‌ ಪಟೇಲ್‌ ಎಂಬುವವರ 9 ತಿಂಗಳ ಮಗು ತನ್ನ ಸೋದರಿಯ ಜೊತೆ ತಿನ್ನುತ್ತಿದ್ದ ಚಿಪ್ಸ್‌ ಪ್ಯಾಕೆಟ್‌ನಲ್ಲಿ ಸತ್ತ ಕಪ್ಪೆಯ ಕಳೇಬರ ಪತ್ತೆಯಾಗಿದೆ. ಬಳಿಕ ವೇಪರ್ಸ್‌ ಕಂಪನಿಗೆ ವಿಚಾರಿಸಿದಾಗ ಸಮರ್ಪಕ ಉತ್ತರ ಸಿಗದ ಕಾರಣ ಆಹಾರ ಭದ್ರತಾ ಮತ್ತು ಸುರಕ್ಷತಾ ಸಂಸ್ಥೆಗೆ ದೂರು ನೀಡಿದ್ದು ತನಿಖೆ ಆರಂಭಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಐಎಎಸ್‌, ಐಎಫ್ಎಸ್‌ಗಳಿಗೆ ಯುಪಿಎಸ್ಸಿ 2ನೇ ಚಾನ್ಸ್‌ ಇಲ್ಲ- ಯುಪಿಎಸ್ಸಿ ನಿಯಮ ಬದಲು
ಶ್ರೀಶೈಲ ದೇಗುಲ ಪ್ರಸಾದಕ್ಕೂ ತಿರುಪತಿ ರೀತಿ ಕಲಬೆರಕೆ ತುಪ್ಪ!