ನವದೆಹಲಿ: ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ವಯನಾಡು ಮತ್ತು ಇತರ ಪ್ರದೇಶದ ಜನರಿಗೆ ಅವರ ಪಾಲಿನ ವಿಮಾ ಮೊತ್ತವನ್ನು ತ್ವರಿತವಾಗಿ ವಿತರಿಸುವಂತೆ ಎಲ್ಐಸಿ ಸೇರಿದಂತೆ ಸಾರ್ವಜನಿಕ ವಲಯದ ವಿಮಾ ಕಂಪನಿಗಳಿಗೆ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಸೂಚಿಸಿದ್ದಾರೆ.
ಈ ಪ್ರಕ್ರಿಯೆಗಳನ್ನು ತ್ವರಿತಗೊಳಿಸುವ ಸಲುವಾಗಿ ಅಗತ್ಯವಿರುವ ದಾಖಲೆಗಳಲ್ಲಿ ಸಡಿಲಿಕೆ ಮಾಡಲಾಗಿದೆ.
ಶನಿವಾರ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‘ವಿಮೆಯ ಮೊತ್ತವನ್ನು ತ್ವರಿತವಾಗಿ ಪಡೆಯಲು ಸುಲಭವಾಗುವಂತೆ ಸಂತ್ರಸ್ತರಿಗೆ ನೆರವು ನೀಡಲು ಎಲ್ಐಸಿ, ರಾಷ್ಟ್ರೀಯ ವಿಮಾ ನಿಗಮ, ನ್ಯೂ ಇಂಡಿಯಾ ಅಶ್ಯೂರೆನ್ಸ್, ಓರಿಯಂಟಲ್ ವಿಮೆ, ಯುನೈಟೆಡ್ ಇಂಡಿಯಾ ವಿಮೆ ಸೇರಿದಂತೆ ಎಲ್ಲಾ ಸಾರ್ವಜನಿಕ ವಲಯದ ವಿಮಾ ಕಂಪನಿಗಳಿಗೆ ಸೂಚಿಸಲಾಗಿದೆ.
ಈಗಾಗಲೇ ಅವುಗಳು ಪತ್ರಿಕೆ, ಸಾಮಾಜಿಕ ಜಾಲತಾಣ, ವೆಬ್ಸೈಟ್ಗಳ ಮೂಲಕ ತಮ್ಮ ಪಾಲಿಸಿದಾರರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದು, ವಯನಾಡು, ಪಾಲಕ್ಕಾಡ್, ಕಲ್ಲಿಕೋಟೆ, ಮಲಪ್ಪುರಂ ಹಾಗೂ ತ್ರಿಶೂರ್ಗಳಲ್ಲಿ ಹೆಚ್ಚು ಜನ ಈಗಾಗಲೇ ವಿಮೆ ಪಡೆದಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
ರಕ್ಷಣಾ ಕಾರ್ಯಾಚರಣೆಗೆ ಧ್ವನಿಯಾದ ಹ್ಯಾಮ್ ರೇಡಿಯೋ
ವಯನಾಡು: ವಯನಾಡಿನಲ್ಲಿ ಭೂಕುಸಿತದಿಂದಾಗಿ ಸಂಪರ್ಕ ಮತ್ತು ಸಂವಹನ ಬಹುತೇಕ ಸ್ಥಗಿತಗೊಂಡ ಹೊತ್ತಿನಲ್ಲಿ ಹವ್ಯಾಸಿ ಹ್ಯಾಮ್ ರೇಡಿಯೋ ಕಾರ್ಯಕರ್ತರು ರಕ್ಷಣಾ ಕಾರ್ಯಾಚರಣೆಗೆ ಧ್ವನಿಯಾಗಿದ್ದಾರೆ.ಭೂಕುಸಿತಕ್ಕೆ ಒಳಗಾದ ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕ ಸೀಮಿತ ವ್ಯಾಪ್ತಿಗೆ ಮಾತ್ರ ಲಭ್ಯವಿದ್ದ ಕಾರಣ, ಸಂಕಷ್ಟಕ್ಕೆ ಸಿಕ್ಕಿಬಿದ್ದ ಪ್ರದೇಶಗಳು ಮತ್ತು ಇತರೆ ಪ್ರದೇಶಗಳ ನಡುವೆ ಸಂಪರ್ಕ ಕಡಿತಗೊಂಡಿತ್ತು.
ಈ ಹಂತದಲ್ಲಿ ಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ ಅವರ ಕೋರಿಕೆ ಮೇರೆಗೆ ಹವ್ಯಾಸಿ ಹ್ಯಾಮ್ ರೇಡಿಯೋ ತಂಡವೊಂದು ಕಲ್ಪೆಟ್ಟಾದಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲೇ ತುರ್ತು ನಿರ್ವಹಣಾ ಘಟಕ ಸ್ಥಾಪಿಸಿ ಸಂಕಷ್ಟಕ್ಕೆ ಒಳಗಾಗಿದ್ದ ಪ್ರದೇಶಗಳಲ್ಲಿನ ಜನರು, ರಕ್ಷಣಾ ಸಿಬ್ಬಂದಿ ಮತ್ತು ಅಧಿಕಾರಿಗಳ ನಡುವೆ ಸಂವಹನದಲ್ಲಿ ಪ್ರಮುಖ ಪಾತ್ರವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ರಿಸೀವರ್ಗಳು, ಆಂಪ್ಲಿಫೈಯರ್ಗಳು, ಲಾಗಿಂಗ್ ಮತ್ತು ಡಿಜಿಟಲ್ ಮಾಡ್ಯುಲೇಶನ್ಗಾಗಿ ಕಂಪ್ಯೂಟರ್ಗಳು ಮತ್ತು ಇತರ ಉಪಕರಣಗಳನ್ನು ರೇಡಿಯೋ ಸ್ಟೇಷನ್ ನಿರ್ವಹಿಸಲು ಬಳಸಲಾಗುತ್ತದೆ. ಹ್ಯಾಮ್ ರೇಡಿಯೊ ಆಪರೇಟರ್ಗಳು ಹ್ಯಾಮ್ ರೇಡಿಯೊ ಟ್ರಾನ್ಸ್ಮಿಟರ್ಗಳ ಮೂಲಕ ದುರಂತದ ಪ್ರದೇಶದಿಂದ ಸ್ಟೇಷನ್ಗೆ ಮಾಹಿತಿಯನ್ನು ರವಾನಿಸುತ್ತಾರೆ. ಇದರಿಂದ ಜಿಲ್ಲಾಡಳಿತಕ್ಕೆ ಭೂಕುಸಿತ ಸ್ಥಳಗಳ ಮಾಹಿತ ಲಭಿಸುತ್ತಿದೆ