ಪ್ರಶ್ನಿಸುವ ಕಾಲ ಬಂದಿದೆ, ನಿಯಮಕ್ಕೆ ಬದ್ಧತೆ ಅಗತ್ಯ ನಿಯಮ ಪಾಲನೆ ನೀಡದಿದ್ದರೆ ಕಠಿಣ ಕ್ರಮ: ಸಚಿವ ಎಚ್ಚರಿಕೆ ನವದೆಹಲಿ: ‘ಸಾಮಾಜಿಕ ಜಾಲತಾಣಗಳಿಗೆ ನೀಡಲಾಗಿದ್ದ ಫ್ರೀಪಾಸ್ ಅವಧಿ ಮುಕ್ತಾಯವಾಗಿದೆ. ನಿಯಮಕ್ಕೆ ಅನುಸಾರವಾಗಿ ಅವು ನಡೆಯಬೇಕು. ಇಲ್ಲದಿದ್ದರೆ ಇಡೀ ವಿಶ್ವ ಇದೀಗ ಅವುಗಳ ಬಗ್ಗೆ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ’ ಎಂದು ಕೇಂದ್ರ ಐಟಿ ಸಚಿವ ರಾಜೀವ್ ಚಂದ್ರಶೇಖರ್ ಬುಧವಾರ ಹೇಳಿದ್ದಾರೆ. ಫೇಸ್ಬುಕ್ ಮಕ್ಕಳ ಮಾನಸಿಕತೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಅಮೆರಿಕದಲ್ಲಿ ಸಲ್ಲಿಸಲಾಗಿದ್ದ ದೂರಿಗೆ ಸಂಬಂಧಿಸಿದಂತೆ ಎನ್ಡಿಟೀವಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಇಷ್ಟು ದಿನಗಳ ಕಾಲ ಇಡೀ ವಿಶ್ವ ಸಾಮಾಜಿಕ ಜಾಲತಾಣಗಳ ಒಳ್ಳೆಯ ಅಂಶಗಳತ್ತ ಮಾತ್ರ ಗಮನ ಹರಿಸಿತ್ತು. ಇನ್ನು ಮುಂದೆ ಇವುಗಳ ನಕಾರಾತ್ಮಕ ಮಖವನ್ನು ಸಹ ನೋಡಬೇಕು’ ಎಂದು ಹೇಳಿದರು. ‘ಇಡೀ ವಿಶ್ವ ಜಾಲತಾಣಗಳಿಗೆ ಅನಿರ್ಬಂಧಿತ ಅವಕಾಶಗಳನ್ನು ನೀಡಿತ್ತು. ಮುಖ್ಯವಾಗಿ ಅಮೆರಿಕ ಮೆಟಾಗೆ ಹೆಚ್ಚಿನ ಅವಕಾಶವನ್ನು ನೀಡಿತ್ತು. ಇದೀಗ ಅದನ್ನು ಮರುಪರಿಶೀಲಿಸುವ ಕಾಲ ಬಂದಿದೆ. ಇನ್ನು ಮುಂದೆ ಜಾಲತಾಣಗಳು ಹೆಚ್ಚು ಜವಾಬ್ದಾರವಾಗಿರಬೇಕು. ಇಲ್ಲಿಯವರೆಗೆ ನೀಡಿದ ಮುಕ್ತ ಅವಕಾಶದ ಅವಧಿ ಮುಕ್ತಾಯವಾಗಿದೆ. ಅಲ್ಲದೇ ಇದು ನಮ್ಮ ಸರ್ಕಾರದ ಅಭಿಪ್ರಾಯವೂ ಸಹ ಆಗಿದೆ. ನಮ್ಮ ಸುತ್ತಾ ಹೆಚ್ಚಾಗಿರುವ ಅಪರಾಧ ಮತ್ತು ಹಿಂಸೆಯ ಕುರಿತಾಗಿ ನಾವು ಗಮನ ಹರಿಸಬೇಕಿದೆ’ ಎಂದರು. ಸರ್ಕಾರ ಹೇಗೆ ಮಾಧ್ಯಮಗಳನ್ನು ನಿಯಂತ್ರಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಎಲ್ಲಾ ಮಾಧ್ಯಮಗಳು ಸರ್ಕಾರಗಳು ಸೂಚಿಸುವ ನಿಯಮಗಳನ್ನು ಪಾಲನೆ ಮಾಡಬೇಕು. ಒಂದು ವೇಳೆ ಅವರು ಪ್ರತಿಕ್ರಿಯೆ ತೋರದಿದ್ದರೆ ಕಾನೂನಿನ ಅನ್ವಯ ಕ್ರಮ ಜರುಗಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ ಎಂದು ಅವರು ಹೇಳಿದರು.