ಕಾಲೇಜಲ್ಲಿ ಹಿಜಾಬ್‌, ಬುರ್ಖಾ ನಿಷೇಧ ಪ್ರಶ್ನಿಸಿದ್ದ ಅರ್ಜಿ ವಜಾ

KannadaprabhaNewsNetwork |  
Published : Jun 27, 2024, 01:02 AM ISTUpdated : Jun 27, 2024, 04:54 AM IST
ಹಿಜಾಬ್‌ | Kannada Prabha

ಸಾರಾಂಶ

ಶೈಕ್ಷಣಿಕ ಸಂಸ್ಥೆಗಳು ಜಾರಿಗೊಳಿಸುವ ವಸ್ತ್ರ ಸಂಹಿತೆಯು, ವಿದ್ಯಾರ್ಥಿಗಳ ಮೂಲಭೂತ ಹಕ್ಕಿನ ಉಲ್ಲಂಘನೆ ಮಾಡುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಮುಂಬೈ: ಶೈಕ್ಷಣಿಕ ಸಂಸ್ಥೆಗಳು ಜಾರಿಗೊಳಿಸುವ ವಸ್ತ್ರ ಸಂಹಿತೆಯು, ವಿದ್ಯಾರ್ಥಿಗಳ ಮೂಲಭೂತ ಹಕ್ಕಿನ ಉಲ್ಲಂಘನೆ ಮಾಡುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಜೊತೆಗೆ ಮುಂಬೈನ ಎನ್‌.ಜಿ. ಆಚಾರ್ಯ ಹಾಗೂ ಡಿ.ಕೆ. ಮರಾಠೆ ಕಾಲೇಜು ಆವರಣದಲ್ಲಿ ಹಿಜಾಬ್, ಬುರ್ಖಾ ಮತ್ತು ನಖಾಬ್ ಅನ್ನು ನಿಷೇಧಿಸುವ ಕಾಲೇಜು ಆಡಳಿತ ಮಂಡಳಿ ನಿರ್ಧಾರದಲ್ಲಿ ತಾನು ಮಧ್ಯಪ್ರವೇಶಿಸಲು ನಿರಾಕರಿಸಿದೆ. ಅಲ್ಲದೆ ನಿಷೇಧ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದೆ.

‘ಕ್ಯಾಂಪಸ್‌ನಲ್ಲಿ ಹಿಜಾಬ್, ನಖಾಬ್, ಬುರ್ಕಾ, ಸ್ಟೋಲ್ಸ್, ಕ್ಯಾಪ್ ಮತ್ತು ಬ್ಯಾಡ್ಜ್‌ ಧಾರಣೆ ನಿಷೇಧಿಸುವ ವಸ್ತ್ರಸಂಹಿತೆಯನ್ನು ಕಾಲೇಜು ಜಾರಿಗೆ ತಂದಿದೆ. ಈ ನಿರ್ದೇಶನವು ಅವರವರ ಧರ್ಮ ಆಚರಣೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ, ಜತೆಗೆ ಖಾಸಗಿತನ ಮತ್ತು ವೈಯಕ್ತಿಕ ಆಯ್ಕೆಯ ಹಕ್ಕುಗಳನ್ನು ಉಲ್ಲಂಘಿಸುತ್ತದೆ’ ಎಂದು ಕಾಲೇಜಿನ ಕೆಲವು ವಿದ್ಯಾರ್ಥಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಆದರೆ ಈ ಅರ್ಜಿ ವಜಾ ಮಾಡಿದ ನ್ಯಾ। ಎ.ಎಸ್. ಚಂದೂರ್ಕರ್ ಮತ್ತು ರಾಜೇಶ್ ಪಾಟೀಲ್ ಅವರ ಪೀಠ, ‘ಶೈಕ್ಷಣಿಕ ಸಂಸ್ಥೆಗಳು ಜಾರಿಗೊಳಿಸುವ ವಸ್ತ್ರ ಸಂಹಿತೆಯು, ವಿದ್ಯಾರ್ಥಿಗಳ ಮೂಲಭೂತ ಹಕ್ಕಿನ ಉಲ್ಲಂಘನೆ ಮಾಡುವುದಿಲ್ಲ. ವಾಸ್ತವವಾಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಸ್ತು ಕಾಪಾಡಲು ಆಡಳಿತ ಮಂಡಳಿಗಳು ಜಾರಿಗೊಳಿಸುವ ವಸ್ತ್ರ ಸಂಹಿತೆಯು ಅವರ ಮೂಲಭೂತ ಹಕ್ಕಾಗಿರುತ್ತದೆ. 

ಅದು ಎಲ್ಲಾ ಜಾತಿ, ಧರ್ಮಕ್ಕೂ ಅನ್ವಯವಾಗುತ್ತದೆ. ಹೀಗಾಗಿ ಕಾಲೇಜು ತೆಗೆದುಕೊಂಡಿರುವ ನಿರ್ಧಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದಿದೆ.ಈ ಹಿಂದೆ ಕರ್ನಾಟಕ ಹೈಕೋರ್ಟ್‌ ಕೂಡಾ ಶೈಕ್ಷಣಿಕ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಿಜಾಬ್‌ ನಿಷೇಧವನ್ನು ಎತ್ತಿಹಿಡಿದಿತ್ತು. ಬಳಿಕ ಪ್ರಕರಣ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದು, ಸದ್ಯ ಅದು ಅಲ್ಲಿ ವಿಚಾರಣೆ ಹಂತದಲ್ಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಾಣಾಗೆ ಏಮ್ಸ್‌ನಲ್ಲಿ ದಯಾಮರಣ ಪ್ರಕ್ರಿಯೆ ಆರಂಭ
‘ಒನ್‌ ಬ್ಯಾಟಲ್‌ ಆಫ್ಟರ್‌ ಅನದರ್‌’ಗೆ ‘ಅತ್ಯುತ್ತಮ ಚಿತ್ರ’ ಆಸ್ಕರ್‌ ಗೌರವ