ವಾರಾಣಸಿ: ಗ್ಯಾನವಾಪಿ ಮಸೀದಿಯ ತಳಮಹಡಿಯಲ್ಲಿರುವ ಶೃಂಗಾರ ಗೌರಿ ದೇಗುಲದಲ್ಲಿ ಪೂಜಿಸಲು ಅನುಮತಿ ಸಿಕ್ಕ ಬೆನ್ನಲ್ಲೆ, ಪ್ರಾಂಗಣದ ಇತರ ನಿಷೇಧಿತ ನೆಲಮಾಳಿಗೆಯಲ್ಲೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸಮೀಕ್ಷೆ ನಡೆಸುವಂತೆ ಹಿಂದೂ ಪರ ವಾದಿಗಳು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ ಏನಿದೆ?
ವಾರಾಣಸಿ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಅರ್ಜಿಯಲ್ಲಿ, ‘ಜ್ಞಾನವಾಪಿ ಮಸೀದಿಯ ಕೆಲವು ನೆಲ ಮಾಳಿಗೆಗಳನ್ನು ಇಟ್ಟಿಗೆ, ಕಲ್ಲಿನಿಂದ ಮುಚ್ಚಿ ಪ್ರವೇಶ ನಿರ್ಬಂಧಿಸಿರುವ ಕಾರಣ ಎಎಸ್ಐ ಆ ಸ್ಥಳಗಳ ಸಮೀಕ್ಷೆ ನಡೆಸಿರಲಿಲ್ಲ.
ಸ್ಥಳದ ಧಾರ್ಮಿಕ ಐತಿಹ್ಯವನ್ನು ತಿಳಿಯಲು ಈ ನಿಷೇಧಿತ ಸ್ಥಳಗಳನ್ನೂ ಸರ್ವೇಕ್ಷಣೆ ಮಾಡಲು ಎಎಸ್ಐಗೆ ನ್ಯಾಯಾಲಯ ಸೂಚಿಸಬೇಕು.
ಈ ಪ್ರಕ್ರಿಯೆಯಲ್ಲಿ ಸರ್ವೇಕ್ಷಣಾ ಸಂಸ್ಥೆಯು ಕಟ್ಟಡದ ಮೂಲ ರಚನೆಗೆ ಯಾವುದೇ ಧಕ್ಕೆಯಾಗದ ರೀತಿಯಲ್ಲಿ ನಿರ್ಬಂಧಿತ ಮಾರ್ಗವನ್ನು ತೆರವುಗೊಳಿಸಲಾಗಿದೆ ಎಂದು ವರದಿ ನೀಡುವಂತೆ ಎಎಸ್ಐಗೆ ಸೂಚಿಸಬೇಕು’ ಎಂದು ಹಿಂದೂ ಪರ ಅರ್ಜಿದಾರರು ಮನವಿ ಸಲ್ಲಿಸಿದ್ದಾರೆ.