ಅಪರೂಪದ ಖನಿಜಕ್ಕಾಗಿ ಭಾರತ - ಬ್ರೆಜಿಲ್‌ ಡೀಲ್‌

KannadaprabhaNewsNetwork |  
Published : Feb 22, 2026, 01:45 AM ISTUpdated : Feb 22, 2026, 06:14 AM IST
Brazil

ಸಾರಾಂಶ

ಮುಂದಿನ ಐದು ವರ್ಷಗಳಲ್ಲಿ ಭಾರತ ಮತ್ತು ಬ್ರೆಜಿಲ್‌ ದೇಶಗಳು 1.81 ಲಕ್ಷ ಕೋಟಿ ರು.ನಷ್ಟು ದ್ವಿಪಕ್ಷೀಯ ವ್ಯಾಪಾರದ ಗುರಿ ಹಾಕಿಕೊಂಡಿವೆ ಹಾಗೂ ಚಿಪ್‌ ಸೇರಿ ವಿವಿಧ ವಸ್ತುಗಳ ತಯಾರಿಕೆಗೆ ಬೇಕಾದ ಅಪರೂಪದ ಖನಿಜಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿವೆ.

 ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ಭಾರತ ಮತ್ತು ಬ್ರೆಜಿಲ್‌ ದೇಶಗಳು 1.81 ಲಕ್ಷ ಕೋಟಿ ರು.ನಷ್ಟು ದ್ವಿಪಕ್ಷೀಯ ವ್ಯಾಪಾರದ ಗುರಿ ಹಾಕಿಕೊಂಡಿವೆ ಹಾಗೂ ಚಿಪ್‌ ಸೇರಿ ವಿವಿಧ ವಸ್ತುಗಳ ತಯಾರಿಕೆಗೆ ಬೇಕಾದ ಅಪರೂಪದ ಖನಿಜಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿವೆ.

ಭಾರತ ಪ್ರವಾಸದಲ್ಲಿರುವ ಬ್ರೆಜಿಲ್‌ ಪ್ರಧಾನಿ ಲೂಯಿಜ್‌ ಇನಾಸಿಯೋ ಲುಲಾ ಡ ಸಿಲ್ವ ಜತೆಗಿನ ಮಾತುಕತೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಈ ವಿಚಾರ ತಿಳಿಸಿದರು. ಮಾತುಕತೆ ವೇಳೆ ಭಾರತ ಹಾಗೂ ಬ್ರೆಜಿಲ್‌, ಭವಿಷ್ಯಕ್ಕಾಗಿ ಡಿಜಿಟಲ್ ಸಹಭಾಗಿತ್ವ, ಅಪರೂಪದ ಭೂಮಿ ಮತ್ತು ನಿರ್ಣಾಯಕ ಖನಿಜಗಳಲ್ಲಿ ಸಹಕಾರ ಹಾಗೂ ಣಿಗಾರಿಕೆ ಮತ್ತು ಉಕ್ಕು ಪೂರೈಕೆ ಸರಪಳಿಗಳಲ್ಲಿ ಸಹಕಾರಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿದವು.

ಜಾಗತಿಕ ವ್ಯಾಪಾರ ಬಿಕ್ಕಟ್ಟಿನ ನಡುವೆ ಈ ನಿರ್ಣಾಯಕ ಖನಿಜ ಒಪ್ಪಂದ

ಬಳಿಕ ಮಾತನಾಡಿದ ಮೋದಿ, ‘ಜಾಗತಿಕ ವ್ಯಾಪಾರ ಬಿಕ್ಕಟ್ಟಿನ ನಡುವೆ ಈ ನಿರ್ಣಾಯಕ ಖನಿಜ ಒಪ್ಪಂದ ಮಹತ್ವದ್ದಾಗಿದೆ. ಈ ಒಪ್ಪಂದವು ಈ ಅಮೂಲ್ಯ ವಸ್ತುಗಳ ಪೂರೈಕೆಯನ್ನು ಸರಳಗೊಳಿಸುತ್ತವೆ’ ಎಂದರು.

‘ಲುಲಾ ಅವರ ದೂರದೃಷ್ಟಿ ಹಾಗೂ ಪ್ರೇರಣಾದಾಯಕ ನಾಯಕತ್ವದಿಂದಾಗಿ ಎರಡೂ ದೇಶಗಳಿಗೆ ಭಾರೀ ಅನುಕೂಲವಾಗಿದೆ. ಲ್ಯಾಟಿನ್‌ ಅಮೆರಿಕನ್‌ ದೇಶಗಳಲ್ಲಿ ಭಾರತದ ಅತಿದೊಡ್ಡ ವ್ಯಾಪಾರ ಸಹಯೋಗಿ ಬ್ರೆಜಿಲ್‌ ಆಗಿದೆ. ನಾವು ಮುಂದಿನ 5 ವರ್ಷಗಳಲ್ಲಿ ಭಾರತ ಮತ್ತು ಬ್ರೆಜಿಲ್‌ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು 1.81 ಲಕ್ಷ ಕೋಟಿಗೇರಿಸಲು ಬದ್ಧವಾಗಿದ್ದೇವೆ’ ಎಂದರು.

ಭಾರತ ಮತ್ತು ಬ್ರೆಜಿಲ್‌ ಜತೆಯಾಗಿ ಕೆಲಸ ಮಾಡಿದಾಗ ಗ್ಲೋಬಲ್‌ ಸೌಥ್‌ ಅಥವಾ ಅಭಿವೃದ್ಧಿಶೀಲ ದೇಶಗಳ ಧ್ವನಿ ಗಟ್ಟಿಯಾಗುತ್ತದೆ. ಎರಡೂ ದೇಶಗಳು ಭಯೋತ್ಪಾದನೆ ಮತ್ತು ಅದನ್ನು ಬೆಂಬಲಿಸುವವರು ಮಾನವತ್ವದ ಶತ್ರುಗಳು ಎಂದು ಒಪ್ಪಿಕೊಂಡಿದ್ದಾಗಿ ಇದೇ ವೇಳೆ ಮೋದಿ ನುಡಿದರು.

ಸ್ವಾವಲಂಬಿ ಭಾರತಕ್ಕೆ ‘ಮೇಡ್ ಇನ್‌ ಇಂಡಿಯಾ ಚಿಪ್’ ಮುಖ್ಯ: ಮೋದಿ

ಪಿಟಿಐ ಗ್ರೇಟರ್ ನೋಯ್ಡಾ‘ಅಭಿವೃದ್ಧಿ ಹೊಂದಿದ ಭಾರತದ ಅಡಿಪಾಯವನ್ನು ಸ್ವಾವಲಂಬನೆಯ ಆಧಾರದ ಮೇಲೆ ಹಾಕಲಾಗುವುದು. ಇದಕ್ಕಾಗಿ ಭಾರತದಲ್ಲಿ ಚಿಪ್‌ ತಯಾರಿಸುವುದು ಬಹಳ ಮುಖ್ಯ’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.ಇಂಡಿಯಾ ಚಿಪ್ ಪ್ರೈವೇಟ್ ಲಿ., ಎಚ್‌ಸಿಎಲ್ ಗ್ರೂಪ್ ಮತ್ತು ಫಾಕ್ಸ್‌ಕಾನ್ ಜೆವಿಗೆ ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ಭಾರತ ಸ್ವಾವಲಂಬಿಯಾದಾಗ ಮಾತ್ರ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ, ಮೇಡ್ ಇನ್ ಇಂಡಿಯಾ ಚಿಪ್ ಬಹಳ ಮುಖ್ಯ. ಈ ದಶಕದಲ್ಲಿ ಭಾರತ ತಂತ್ರಜ್ಞಾನ ಕ್ಷೇತ್ರದಲ್ಲಿ ಏನೇ ಮಾಡಿದರೂ, ಅದು 21ನೇ ಶತಮಾನದಲ್ಲಿ ನಮ್ಮ ಸಾಮರ್ಥ್ಯದ ಅಡಿಪಾಯವಾಗುತ್ತದೆ’ ಎಂದರು.

ಉತ್ತರ ಪ್ರದೇಶದ ಜೇವರ್‌ನಲ್ಲಿ ಇಂಡಿಯಾ ಚಿಪ್‌ ಪ್ರೈವೇಟ್‌ ಲಿ. ಸೇರಿದಂತೆ 3 ಕಂಪನಿಗಳನ್ನು ಆರಂಭಿಸಲಾಗುತ್ತಿದೆ. ಇವು ಹೊರಗುತ್ತಿಗೆ ಮೂಲಕ ಸೆಮಿಕಂಡಕ್ಟರ್ ಜೋಡಣೆ ಮತ್ತು ಪರೀಕ್ಷೆಯ ಕೆಲಸ ನಡೆಸಲಿವೆ. 2028ಕ್ಕೆ ಕಾರ್ಯಾಚರಣೆ ಆರಂಭಿಸಲಿದ್ದು, 3,500 ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.

ಎಲ್ಲರ ಒಳಿತಿಗೆ, ಸುಖಕ್ಕೆ ಎಐ ಬಳಕೆ: ದಿಲ್ಲಿ ಎಐ ಶೃಂಗ ಗೊತ್ತುವಳಿ

ನವದೆಹಲಿ: ಎಐ ಪ್ರಭಾವದ ಕುರಿತು ದೆಹಲಿಯಲ್ಲಿ ನಡೆದ ಶೃಂಗಸಭೆಯಲ್ಲಿ ಭಾರತ ಕೈಗೊಂಡ ಘೋಷಣೆಯನ್ನು 88 ದೇಶಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಅಂಗೀಕರಿಸಿವೆ. ಸಾಮಾಜಿಕ ಒಳಿತಿಗಾಗಿ ಎಐ ಬಳಕೆ ಸೇರಿ 7 ಅಂಶಗಳಿಗೆ ಒಪ್ಪಿಗೆ ನೀಡಿವೆ.ಫೆ.16ರಿಂದ 21ರವರೆಗೆ ದೆಹಲಿಯಲ್ಲಿ ನಡೆದ ಎಐ ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ ‘ಸರ್ವಜನ ಹಿತಾಯ, ಸರ್ವಜನ ಸುಖಾಯ’ ಎಂದರೆ ‘ಎಲ್ಲರ ಒಳಿತಿಗಾಗಿ, ಎಲ್ಲರ ಸುಖಕ್ಕಾಗಿ’ ಎಂಬ ಘೋಷಣೆಯನ್ನು ಕೈಗೊಳ್ಳಲಾಗಿದೆ ಎಂದು ಎಂದು ವಿದೇಶಾಂಗ ಸಚಿವಾಲಯ ಶನಿವಾರ ಮಾಹಿತಿ ನೀಡಿದೆ.

ಈ ಕುರಿತು ಮಾಹಿತಿ ನೀಡಿದ ಸಚಿವಾಲಯ, ‘ಭಾರತದ ಈ ಘೋಷಣೆಯನ್ನು 88 ದೇಶಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಅಂಗೀಕರಿಸಿವೆ. ರಾಷ್ಟ್ರೀಯ ಸಾರ್ವಭೌಮತ್ವವನ್ನು ಗೌರವಿಸುತ್ತಾ, ಅಂತಾರಾಷ್ಟ್ರೀಯ ಉಪಕ್ರಮಗಳಿಗೆ ಪೂರಕವಾಗಿ ಎಐ ಮೂಲಕ ಮಾನವತೆಗೆ ಸೇವೆ ಸಲ್ಲಿಸಲು ಕೆಲಸ ಮಾಡುತ್ತೇವೆ’ ಎಂದು ತಿಳಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಹೂಚೆಂಡು ಎಸೆದ ಅಭಿಮಾನಿ: ಬಾಂಬ್‌ ಎಂದು ಓಡಿದ ವಿಜಯ್‌
ಈ ವರ್ಷ ಮುಂಗಾರು ಮಳೆ ಪ್ರಮಾಣ ಇಳಿಕೆ : ಐಎಂಡಿ