ಮಹಾ ಐಟಿ ಕಂಪನಿಯಲ್ಲಿ ಕಾರ್ಪೊರೆಟ್‌ ಜಿಹಾದ್‌ ಸದ್ದು!

KannadaprabhaNewsNetwork |  
Published : Apr 13, 2026, 03:45 AM ISTUpdated : Apr 13, 2026, 04:19 AM IST
Love Jihad

ಸಾರಾಂಶ

ಲವ್‌ ಜಿಹಾದ್‌ ಪ್ರಕರಣ, ಇದೀಗ ಕಾರ್ಪೊರೇಟ್‌ ವಲಯಕ್ಕೂ ಕಾಲಿಟ್ಟಿರುವ ಆಘಾತ ಪ್ರಕರಣ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ನಾಸಿಕ್‌ನಲ್ಲಿ ಪ್ರತಿಷ್ಠಿತ ಐಟಿ ಕಂಪನಿಯೊಂದರ ಬಿಪಿಒ ವಿಭಾಗದಲ್ಲಿ ಉದ್ಯೋಗ ಖಾತರಿ ಮತ್ತು ಬಡ್ತಿಗಾಗಿ ಹಿಂದೂ ಹೆಣ್ಣುಮಕ್ಕಳ ಮೇಲೆ ಲೈಂಗಿಕ ಕಿರುಕುಳ

 ನಾಸಿಕ್‌: ದೇಶದ ನಾನಾ ಕಡೆಗಳಲ್ಲಿ ತೀವ್ರ ಸಂಚಲನ ಸೃಷ್ಟಿಸುತ್ತಿರುವ ಲವ್‌ ಜಿಹಾದ್‌ ಪ್ರಕರಣ, ಇದೀಗ ಕಾರ್ಪೊರೇಟ್‌ ವಲಯಕ್ಕೂ ಕಾಲಿಟ್ಟಿರುವ ಆಘಾತ ಪ್ರಕರಣ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ನಾಸಿಕ್‌ನಲ್ಲಿ ಪ್ರತಿಷ್ಠಿತ ಐಟಿ ಕಂಪನಿಯೊಂದರ ಬಿಪಿಒ ವಿಭಾಗದಲ್ಲಿ ಉದ್ಯೋಗ ಖಾತರಿ ಮತ್ತು ಬಡ್ತಿಗಾಗಿ ಹಿಂದೂ ಹೆಣ್ಣುಮಕ್ಕಳ ಮೇಲೆ ಲೈಂಗಿಕ ಕಿರುಕುಳ, ಮತಾಂತರಕ್ಕೆ ಬಲವಂತ ಮತ್ತು ಗೋಮಾಂಸ ಸೇವಿಸಲು ಒತ್ತಡ ಹೇರಿದ ಆರೋಪ ಕೇಳಿಬಂದಿದೆ.

ಈ ಘಟನೆಯನ್ನು ಬಿಜೆಪಿ ನಾಯಕರು ‘ಕಾರ್ಪೋರೇಟ್‌ ಜಿಹಾದ್‌’ ಎಂದು ಕರೆದಿದ್ದು, ಪ್ರಕರಣದ ಸಂಬಂಧ 7 ಆರೋಪಿಗಳನ್ನು ಬಂಧಿಸಲಾಗಿದೆ. ಈ ಕೃತ್ಯದಲ್ಲಿ ಓರ್ವ ಮಹಿಳೆ ಕೂಡಾ ಜೋಡಿಸಿರುವುದು ಕಂಡುಬಂದಿದೆ.

ಏನಿದು ಪ್ರಕರಣ?:

ನಾಸಿಕ್‌ನ ಸಾತ್ಪುರದಲ್ಲಿ ಐಟಿ ಕಂಪನಿಗೆ ಸೇರಿದ ಬಿಪಿಒ ಕಚೇರಿಯೊಂದರಲ್ಲಿ ಮುಸ್ಲಿಂ ಮ್ಯಾನೇಜರ್‌ಗಳ ಅಡಿಯಲ್ಲಿ ಹಿಂದೂ ಹುಡುಗಿಯರನ್ನು ನೇಮಿಸಿಕೊಳ್ಳಲಾಗುತ್ತಿತ್ತು. ಸಂಬಳ ಹೆಚ್ಚಳ ಮತ್ತು ಉದ್ಯೋಗ ಭದ್ರತೆಯ ಆಮಿಷವೊಡ್ಡಿ ಹಿಂದೂ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿತ್ತು. ನಮಾಜ್‌ ಮಾಡುವಂತೆ ಮತ್ತು ಗೋಮಾಂಸ ತಿನ್ನುವಂತೆಯೂ ಬಲವಂತ ಮಾಡಲಾಗುತ್ತಿತ್ತು.

ಜೊತೆಗೆ ಹಿಂದೂ ಯುವತಿಯರ ಬಳಿ ಈಶ್ವರ ಲಿಂಗವನ್ನು ಜನನಾಂಗಕ್ಕೆ ಹೋಲಿಸಿ, ಕೃಷ್ಣನನ್ನು ಸ್ತ್ರೀಲೋಲ, ದ್ರೌಪದಿ ವೇಶ್ಯೆ ಎಂದೆಲ್ಲಾ ಹೀಯಾಳಿಸಲಾಗುತ್ತಿತ್ತು ಎನ್ನಲಾಗಿದೆ. 2022ರಿಂದ 2026ರವರೆಗೆ ನಿರಂತರವಾಗಿ ಈ ಕೃತ್ಯಗಳು ನಡೆದಿವೆ ಎಂದು ಮಾ.25ರಂದು ಯುವತಿಯೊಬ್ಬಳು ದೂರು ನೀಡಿದ್ದಳು. ನಂತರ ಪೊಲೀಸರು ಧೈರ್ಯವಾಗಿ ಮುಂದೆ ಬಂದು ದೂರು ನೀಡುವಂತೆ ಮನವಿ ಮಾಡಿದ ಬಳಿಕ ಮತ್ತೆ 7 ಹುಡುಗಿಯರು ದೂರು ಸಲ್ಲಿಸಿದ್ದಾರೆ.

ಈ ಸಂಬಂಧ 9 ಎಫ್‌ಐಆರ್‌ಗಳು ದಾಖಲಾಗಿವೆ. ಆಸಿಫ್ ಅನ್ಸಾರಿ, ಶಫಿ ಶೇಖ್, ಶಾಹ್‌ರುಖ್ ಖುರೇಶಿ, ರಜಾ ಮೆಮನ್, ತೌಸೀಫ್ ಅಟ್ಟಾರ್, ದಾನಿಶ್ ಶೇಖ್ ಮತ್ತು ಒಬ್ಬ ಮಹಿಳಾ ಎಚ್‌ಆರ್ ಮ್ಯಾನೇಜರ್ ಅನ್ನು ಬಂಧಿಸಲಾಗಿದೆ. ಬಂಧಿತರ ಪೈಕಿ ಬಹುತೇಕರು ವಿವಾಹಿತರು ಎನ್ನಲಾಗಿದೆ.

ಗುಪ್ತ ಕಾರ್ಯಾಚರಣೆ:

ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿತ್ತು. ಸಂತ್ರಸ್ತ ಯುವತಿಯರ ವಿಶ್ವಾಸ ಗಳಿಸಲು ಎಸ್‌ಐಟಿ ಗುಪ್ತ ತಂಡವನ್ನು ರಚಿಸಿತ್ತು. ಅದರಲ್ಲಿ 6 ಮಹಿಳಾ ಪೊಲೀಸ್‌ ಅಧಿಕಾರಿಗಳೂ ಇದ್ದರು. ಅವರು ಸಂತ್ರಸ್ತ ಯುವತಿಯರ ಸಂಪರ್ಕ ಬೆಳೆಸಿ, ಅವರ ವಿಶ್ವಾಸ ಗಳಿಸಿದರು. ಮೀಟಿಂಗ್‌ ಮತ್ತು ಇತರ ವೇಳೆಯಲ್ಲಿ ನಡೆಯುತ್ತಿದ್ದ ದೌರ್ಜನ್ಯದ ಬಗ್ಗೆ ಮಾಹಿತಿ ಕಲೆಹಾಕಿದರು. ಇದು ಆರೋಪಿಗಳನ್ನು ಬಂಧಿಸಲು ನೆರವಾಯಿತು ಎನ್ನಲಾಗಿದೆ.

ಕಾರ್ಪೋರೇಟ್‌ ಜಿಹಾದ್‌:

ಬಿಜೆಪಿ ನಾಯಕರು ಈ ಘಟನೆಯನ್ನು ‘ಕಾರ್ಪೋರೇಟ್‌ ಜಿಹಾದ್‌’ ಎಂದು ಕರೆದಿದ್ದು, ಕಾರ್ಪೊರೇಟ್ ಕ್ಷೇತ್ರದಲ್ಲಿ ಹಿಂದೂ ಹುಡುಗಿಯರನ್ನು ಗುರಿಯಾಗಿಸಿ ನಡೆಯುತ್ತಿರುವ ವ್ಯವಸ್ಥಿತ ಸಂಚು ಎಂದು ಆರೋಪಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. 

ಆಗಿದ್ದೇನು?

ಖ್ಯಾತನಾಮ ಐಟಿ ಕಂಪನಿಯಲ್ಲಿ ಹಿಂದೂ ಹುಡುಗಿಯರಿಗೆ ಲೈಂಗಿಕ ಕಿರುಕುಳ

ಬಡ್ತಿ ಬೇಕಿದ್ದರೆ ಕಚೇರಿಯಲ್ಲೇ ನಮಾಜ್‌, ಗೋಮಾಂಸ ಸೇವನೆಗೆ ಒತ್ತಾಯ

ಮುಸ್ಲಿಂ ಮೇಲಧಿಕಾರಿಗಳಿಂದ ದುಷ್ಕೃತ್ಯ ಎಂದು 9 ಎಫ್‌ಐಆರ್ ದಾಖಲು

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಹಾಡು ನಿಲ್ಲಿಸಿದ ಕ್ವೀನ್‌ ಆಫ್‌ ಇಂಡಿಪಾಪ್‌
ಇರಾನ್‌ ಫಿನಿಶ್‌ ಮಾಡ್ತೇವೆ: ಟ್ರಂಪ್‌