ದುಸ್ಥಿತಿಯ ಸಾಲ ಎಂದೇ ಹೆಳಲಾಗುವ ಚಿನ್ನದ ಅಡಮಾನ ಸಾಲದ ಪ್ರಮಾಣವು ದಾಖಲೆಯ 1.72 ಲಕ್ಷ ಕೋಟಿ ರು.ಗೆ ತಲುಪಿದ್ದು, ಇದು ಭಾರತದ ಆರ್ಥಿಕತೆ ಪ್ರಧಾನಿ ನರೇಂದ್ರ ಮೋದಿ ಸೃಷ್ಟಿಸಿದ ಸಂಕಷ್ಟದಲ್ಲಿದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ನವದೆಹಲಿ: ದುಸ್ಥಿತಿಯ ಸಾಲ ಎಂದೇ ಹೆಳಲಾಗುವ ಚಿನ್ನದ ಅಡಮಾನ ಸಾಲದ ಪ್ರಮಾಣವು ದಾಖಲೆಯ 1.72 ಲಕ್ಷ ಕೋಟಿ ರು.ಗೆ ತಲುಪಿದ್ದು, ಇದು ಭಾರತದ ಆರ್ಥಿಕತೆ ಪ್ರಧಾನಿ ನರೇಂದ್ರ ಮೋದಿ ಸೃಷ್ಟಿಸಿದ ಸಂಕಷ್ಟದಲ್ಲಿದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಆರ್ಬಿಐ ಇತ್ತೀಚೆಗೆ ಬಿಡುಗಡೆ ಮಾಡಿದ 2024ರ ಡಿಸೆಂಬರ್ ಅಂತ್ಯದ ಅಂಕಿ ಅಂಶಗಳನ್ನು ಉಲ್ಲೇಖಿಸಿದ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಮನೆ, ವಾಹನ, ಕ್ರೆಡಿಟ್ಕಾರ್ಡ್ ಸೇರಿ ಇತರೆ ವೈಯಕ್ತಿಕ ಸಾಲದ ಪ್ರಮಾಣ ಇಳಿಕೆಯಾಗಿದ್ದರೆ, ಚಿನ್ನದ ಮೇಲಿನ ಸಾಲ ಏರುಗತಿಯಲ್ಲಿ ಸಾಗಿದೆ. 2023ರ ಡಿಸೆಂಬರ್ಗೆ ಹೋಲಿಸಿದರೆ 2024ರ ಡಿಸೆಂಬರ್ನಲ್ಲಿ ಚಿನ್ನದ ಮೇಲಿನ ಸಾಲವು ಶೇ.71.3ರಷ್ಟು ದಾಖಲೆ ಏರಿಕೆ ಕಂಡಿದೆ. 2023ರ ಡಿಸೆಂಬರ್ನಲ್ಲಿ ಚಿನ್ನದ ಮೇಲಿನ ಸಾಲವು 1.2 ಲಕ್ಷ ಕೋಟಿ ರು. ಇದ್ದರೆ, 2024ರ ಡಿಸೆಂಬರ್ ವೇಳೆಗೆ ಅದು 1.72 ಲಕ್ಷ ಕೋಟಿ ರು. ತಲುಪಿದೆ. ಜೊತೆಗೆ ಕೇವಲ 5 ವರ್ಷಗಳಲ್ಲಿ ಜನತೆ ಚಿನ್ನವನ್ನು ಅಡವಿಟ್ಟು ಪಡೆಯುವ ಸಾಲದ ಪ್ರಮಾಣ ಸಾಲ ಶೇ.300ರಷ್ಟು ಹೆಚ್ಚಾಗಿದೆ’ ಎಂದು ಕಿಡಿಕಾರಿದರು.
ಈ ಬೆಳವಣಿಗೆಗೆ ಮೋದಿ ನೃತೃತ್ವದ ಸರ್ಕಾರವೇ ಕಾರಣ ಎಂದಿರುವ ರಮೇಶ್, ‘ಮಹಿಳೆಯರು ಪಡೆವ ಸಾಲದಲ್ಲಿ ಚಿನ್ನದ ಸಾಲದ ಶೇ.40ರಷ್ಟಿದೆ. 5 ವರ್ಷಗಳಲ್ಲಿ, ಸ್ತ್ರೀಯರು ತಮ್ಮ ಆಭರಣಗಳನ್ನು ಅಡವಿಡುವ ಪ್ರಮಾಣವೂ ಶೇ.22ರಷ್ಟು ಅಧಿಕವಾಗಿದೆ. ಈ ಮೂಲಕ ಮೋದಿ ಸರ್ಕಾರ ಆರ್ಥಿಕತೆಯನ್ನು ನಿಭಾಯಿಸುವಲ್ಲಿ ತನ್ನ ವೈಫಲ್ಯವನ್ನು ತೋರಿಸಿದ್ದು, ಅದರ ಪರಿಣಾಮವನ್ನು ಮಹಿಳೆಯರು ಅನುಭವಿಸುತ್ತಿದ್ದಾರೆ’ ಎಂದು ಕಿಡಿ ಕಾರಿದ್ದಾರೆ.
ಬ್ಯಾಂಕ್ಗಳು ಚಿನ್ನದ ಮೇಲೆ ನೀಡುವ ಸಾಲ, ವರ್ಷದಿಂದ ವರ್ಷಕ್ಕೆ ಶೇ.71.3ರಷ್ಟು ಏರಿಕೆಯಾಗಿ, ಡಿಸೆಂಬರ್ನಲ್ಲಿ 1.72 ಲಕ್ಷ ಕೋಟಿ ರು. ಆಗಿದೆ ಎಂದು ಜೈರಾಂ ರಮೇಶ್ ಉಲ್ಲೇಖಿಸಿದ್ದಾರೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.