ತಿರುಪತಿ ಲಡ್ಡು ವಿವಾದ : ಜಗನ್‌ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಹೇಳಲಿ - ಪವನ್ ಕಲ್ಯಾಣ್

KannadaprabhaNewsNetwork | Updated : Sep 24 2024, 06:50 AM IST

ಸಾರಾಂಶ

ತಿರುಪತಿ ಲಡ್ಡಿನಲ್ಲಿ ಕಲಬೆರಕೆ ತುಪ್ಪ ಬಳಕೆ ವಿವಾದದಲ್ಲಿ ಮಾಜಿ ಸಿಎಂ ಜಗನ್ಮೋಹನ್ ರೆಡ್ಡಿ ತಮ್ಮನ್ನು ಸಮರ್ಥಿಸಿಕೊಳ್ಳುವ ಬದಲು ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಕಾನೂನಿಗೆ ಅವಕಾಶ ನೀಡಬೇಕೆಂದು ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಹೇಳಿದ್ದಾರೆ.  

ಅಮರಾವತಿ: ತಿರುಪತಿ ಲಡ್ಡಿನಲ್ಲಿ ಕಲಬೆರಕೆ ತುಪ್ಪ ಬಳಸಿದ ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ವೈ.ಎಸ್‌. ಜಗನ್ಮೋಹನ್‌ ರೆಡ್ಡಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವುದನ್ನು ನಿಲ್ಲಿಸಿ, ತಪ್ಪಿತಸ್ಥರನ್ನು ಶಿಕ್ಷಿಸುವಲ್ಲಿ ಕಾನೂನು ತನ್ನ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಸೋಮವಾರ ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಹೇಳಿದ್ದಾರೆ.

ಈ ಕಲಬೆರಕೆಯಲ್ಲಿ ಭಾಗಿಯಾದವರಿಗೆ ಅಥವಾ ಅಪರಾಧಿಗಳಿಗೆ ಶಿಕ್ಷೆಯಾಗಲಿ ಎಂದು ಹೇಳಬಹುದಿತ್ತು. ಆದರೆ ಜಗನ್‌ ಇದ್ಯಾವುದನ್ನು ಹೇಳಲಿಲ್ಲ. ಬದಲಿಗೆ ಸಿಎಂ ಚಂದ್ರಬಾಬು ನಾಯ್ಡು ಅವರು ರಾಜಕೀಯ ಲಾಭಕ್ಕಾಗಿ ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸುತ್ತಿದ್ದಾರೆ ಎಂದರು.

==

ದೇಶಾದ್ಯಂತ ತುಪ್ಪ ಗುಣಮಟ್ಟದ ಮೇಲೆ ನಿಗಾ: ಕೇಂದ್ರ ಸುಳಿವು

ನವದೆಹಲಿ: ತಿರುಪತಿ ಲಡ್ಡುವಿನಲ್ಲಿ ಗೋವು, ಹಂದಿಯ ಕೊಬ್ಬು ಪತ್ತೆಯಾದ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗ್ರಾಹಕ ಸಚಿವಾಲಯ, ದೇಶಾದ್ಯಂತ ತುಪ್ಪದ ಉತ್ಪನ್ನಗಳ ಗುಣಮಟ್ಟದ ಮೇಲೆ ನಿಗಾ ಇಡುವ ಇಂಗಿತ ವ್ಯಕ್ತಪಡಿಸಿದೆ.ಸುದ್ದಿಗಾರ ಜತೆ ಮಾತನಾಡಿದ ಸಚಿವಾಲಯದ ಕಾರ್ಯದರ್ಶಿ ನಿಧಿ ಖರೆ, ಆಹಾರ ಪದಾರ್ಥಗಳ ಕುರಿತು ಎಫ್‌ಎಸ್‌ಎಸ್‌ಎಐ (ಆಹಾರ ಸುರಕ್ಷತಾ ಪ್ರಾಧಿಕಾರ) ತನಿಖೆ ನಡೆಸುವ ಸಂಸ್ಥೆ ಆಗಿರುವ ಕಾರಣ ನಾವು ಅದರ ವರದಿಗೆ ಕಾಯುತ್ತಿದ್ದೇವೆ. ನಮಗೆ ಬರುವ ಆಹಾರ ಪದಾರ್ಥಗಳ ಬಗೆಗಿನ ದೂರುಗಳನ್ನು ನಾವು ಎಫ್‌ಎಸ್‌ಎಸ್‌ಎಐಗೆ ವರ್ಗಾಯಿಸುತ್ತೇವೆ. ವರದಿಯ ಪ್ರಕಾರ ದೋಷ ಪತ್ತೆಯಾದರೆ, ನಾವು ಮುಂದಿನ ಕ್ರಮವನ್ನು ತೆಗೆದುಕೊಳ್ಳುತ್ತೇವೆ’ ಎಂದರು.

==

ತಿರುಪತಿಯಲ್ಲಿ ಹೈಡ್ರಾಮ: ಮಾಜಿ ಸಿಇಒಗೆ ಪ್ರವೇಶ ನಕಾರ

ತಿರುಮಲ: ಲಡ್ಡು ವಿವಾದದ ನಡುವೆಯೇ ಟಿಟಿಡಿ ಮಾಜಿ ಮುಖ್ಯಸ್ಥ ಭೂಮನ ಕರುಣಾಕರ ರೆಡ್ಡಿ ಅವರಿಗೆ ವೆಂಕಟೇಶ್ವರ ದೇಗುಲವನ್ನು ಪ್ರವೇಶಿಸದಂತೆ ತಡೆದ ಪ್ರಸಂಗ ಸೋಮವಾರ ನಡೆದಿದೆ. ರೆಡ್ಡಿ ಅವರು ದೇಗುಲ ಪ್ರವೇಶಿಸಲು ಆಗಮಿಸಿದರು. ಈ ವೇಳೆ ಇವರು ಲಡ್ಡು ಕಲಬೆರಿಕೆಯಲ್ಲಿ ತೊಡಗಿದ್ದಾರೆ ಎಂಬ ಆರೋಪದ ಮೇಲೆ ಸಿಬ್ಬಂದಿ ಮತ್ತು ಅಲ್ಲಿನ ಜನರು ರೆಡ್ಡಿ ದೇಗುಲ ಪ್ರವೇಶಕ್ಕೆ ನಿರಾಕರಿಸಿದರು. ಇದರಿಂದಾಗಿ ವಾಗ್ವಾದ ನಡೆಯಿತು. ಬಳಿಕ ರೆಡ್ಡಿ ಅವರಿಗೆ ದೇಗುಲವನ್ನು ಪ್ರವೇಶಿಸಲು ಅವಕಾಶ ಮಾಡಿಕೊಡಲಾಯಿತು.

==

ಲಖನೌ ದೇಗುಲದಲ್ಲಿ ಬಾಹ್ಯ ಪ್ರಸಾದಕ್ಕೆ ಬ್ರೇಕ್‌

ಲಖನೌ: ಲಡ್ಡು ವಿವಾದದ ಬೆನ್ನಲ್ಲೇ ಲಖನೌನಲ್ಲಿನ ಮನಕಾಮೇಶ್ವರ ದೇಗುಲದ ಆಡಳಿತವು ಹೊರಗಿನಿಂದ ಪ್ರಸಾದಗಳನ್ನು ತರಬಾರದು. ಕೇವಲ ಮನೆಯಲ್ಲಿಯೇ ತಯಾರಿಸಿದ ಪ್ರಸಾದವನ್ನು ತನ್ನಿ ಎಂದು ಮನವಿ ಮಾಡಿದೆ. ದೇಗುಲದ ಮಹಾಂತ ದೇವ್ಯಾ ಗಿರಿ ಮಾತನಾಡಿ, ‘ಮನಕಾಮೇಶ್ವರ ದೇಗುಲಕ್ಕೆ ಬರುವ ಭಕ್ತರು ಅಂಗಡಿ, ಮತ್ತಿತರ ಕಡೆಗಳಿಂದ ಮಾಡಿರುವ ಪ್ರಸಾದವನ್ನು ತರಬೇಡಿ. ನಿಮ್ಮ ಮನೆಯಲ್ಲಿಯೇ ಶುದ್ಧವಾಗಿ ತಯಾರಿಸಿದ ಪ್ರಸಾದ, ಹಣ್ಣುಗಳನ್ನು ತನ್ನಿ. ಕಲಬೆರಿಕೆ, ಮಾಂಸಾಹಾರವನ್ನು ದೇಗುಲಕ್ಕೆ ತರಬೇಡಿ ಎಂದು ಮನವಿ ಮಾಡಿದ್ದಾರೆ. ಜೊತೆಗೆ ತಿರುಪತಿಯಲ್ಲಿ ಆಗಿರುವುದು ಘನಘೋರ ಘಟನೆ. ತಪ್ಪಿತಸ್ಥರನ್ನು ಶಿಕ್ಷಿಸಬೇಕು ಎಂದರು.

‘ಮಥುರಾದಲ್ಲಿ ಕಲಬೆರಿಕೆ ಖೋವಾ ಮಾರಾಟ’:ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್‌ ಯಾದಬ್‌, ಮಥುರಾದಲ್ಲಿ ಕಲಬೆರಿಕೆಯ ಕೋವಾ ಮಾರಾಟವಾಗುತ್ತಿದೆ. ಇದರಿಂದ ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಆದರೆ ಆಹಾರ ಅಧಿಕಾರಿಗಳು ಮಾತ್ರ ಸುಮ್ಮನಿದ್ದಾರೆ. ಇದರ ವಿರುದ್ಧ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಜೊತೆಗೆ ತಿರುಪತಿ ವಿಚಾರದ ಬಗ್ಗೆ ಮಾತನಾಡಿದ ಅವರು, ಇದು ಗಂಭೀರವಾದ ತಪ್ಪು ಎಂದರು.

Share this article