ನವದೆಹಲಿ: ಪಾಕಿಸ್ತಾನದ ಪರವಾಗಿ ಭಾರತದಲ್ಲಿ ಗೂಢಚಾರಿಕೆ ನಡೆಸುತ್ತಿರುವ ಆರೋಪದ ಮೇಲೆ ಬಂಧಿತಳಾಗಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಗೆ ಪಾಕಿಸ್ತಾನದ ಜತೆ ನಂಟಿರುವುದಕ್ಕೆ ಬಲ ತುಂಬುವಂತಹ ಮತ್ತೊಂದು ಸಾಕ್ಷಿ ಲಭಿಸಿದೆ.
ಕಾಶ್ಮೀರದ ಪಹಲ್ಗಾಂನಲ್ಲಿ ಏ.22ರಂದು ನಡೆದ 26 ಅಮಾಯಕರ ನರಮೇಧ ನಡೆದ ಸಂದರ್ಭದಲ್ಲಿ ಭಾರತದಲ್ಲಿರುವ ಪಾಕಿಸ್ತಾನದ ದೂತಾವಾಸಕ್ಕೆ ವ್ಯಕ್ತಿಯೊಬ್ಬ ಕೇಕ್ ಒಯ್ಯುತ್ತಿದ್ದ ವಿಡಿಯೋ ಭಾರಿ ವೈರಲ್ ಆಗಿತ್ತು. ಅದನ್ನು ಹತ್ಯಾಕಾಂಡವನ್ನು ಸಂಭ್ರಮಿಸಲು ಒಯ್ಯಲಾಗುತ್ತಿತ್ತು ಎನ್ನಲಾಗಿತ್ತು.
ಅದೇ ವ್ಯಕ್ತಿ, ಈ ಮೊದಲು ಜ್ಯೋತಿಯ ಯೂಟ್ಯೂಬ್ ಚಾನೆಲ್ಗೆ ಹಾಕಲಾದ ವಿಡಿಯೋವೊಂದರಲ್ಲಿ ಕಾಣಿಸಿಕೊಂಡಿದ್ದ ಎಂದು ತಿಳಿದುಬಂದಿದೆ. ಈಗಾಗಲೇ ಹಲವು ಬಾರಿ ಪಾಕಿಸ್ತಾನಕ್ಕೆ ಹೋಗಿಬಂದಿರುವ ಜ್ಯೋತಿಗೆ, ಪಾಕ್ ಅಧಿಕಾರಿಗಳು ಮತ್ತು ಭಾರತದ ಪಾಕ್ ರಾಯಭಾರ ಕಚೇರಿಯ ಅಧಿಕಾರಿಗಳ ಪರಿಚಯವಿರುವುದು ದೃಢಪಟ್ಟಿದೆ.
ಪಹಲ್ಗಾಂ ಘಟನೆಗೆ ಪ್ರವಾಸಿಗರೂ ಹೊಣೆ ಎಂದಿದ್ದ ಜ್ಯೋತಿ!
ಚಂಡೀಗಢ: ಬೇಹುಗಾರಿಕೆ ಆರೋಪದ ಮೇಲೆ ಬಂಧಿಸಲ್ಪಟ್ಟ ಹರ್ಯಾಣದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ, ಪಹಲ್ಗಾಂ ದಾಳಿಗೆ ಪ್ರವಾಸಿಗರು ಮತ್ತು ಸರ್ಕಾರವನ್ನೇ ದೂಷಿಸಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಳು ಎಂದು ಗೊತ್ತಾಗಿದೆ.
‘ಭದ್ರತಾ ವೈಫಲ್ಯ ಪಹಲ್ಗಾಂ ದಾಳಿಗೆ ಕಾರಣ. ಕಾಶ್ಮೀರ ಸೂಕ್ಷ್ಮ ರಾಜ್ಯ ಆಗಿರುವ ಕಾರಣ ಪ್ರವಾಸಿಗರು ಕೂಡ ಮುಂಜಾಗ್ರತೆ ವಹಿಸಬೇಕಿತ್ತು. ಅವರೂ ಘಟನೆಗೆ ಹೊಣೆಗಾರರು’ ಎಂಬ ವಿಡಿಯೋವನ್ನು ಮಲ್ಹೋತ್ರಾ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಳು. ಆ ಖಾತೆಯನ್ನು ಈಗ ಅದನ್ನು ಸ್ಥಗಿತಗೊಳಿಸಲಾಗಿದೆ.
ಇದೇ ವೇಳೆ, ಭಾರತ-ಪಾಕ್ ನಡುವೆ ಮೇ 7ರಿಂದ 10ರವೆರೆಗೆ ನಡೆದ ಸಂಘರ್ಷದ ಸಮಯದಲ್ಲಿ ದೆಹಲಿಯ ಪಾಕಿಸ್ತಾನ ಹೈಕಮಿಷನ್ನಲ್ಲಿ ನಿಯೋಜಿಸಲಾದ ಪಾಲ್ ಅಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದಳು ಎಂದು ಗೊತ್ತಾಗಿದೆ.‘ಆಕೆ ಪಾಕಿಸ್ತಾನದ ಗುಪ್ತಚರ ಸಿಬ್ಬಂದಿಯು ಆಸ್ತಿಯಾಗಿ ಬೆಳೆಸುತ್ತಿದ್ದರು. ಇದೂ ಒಂದು ಮಾದರಿಯ ಯುದ್ಧತಂತ್ರ ಎಂದು ಹರ್ಯಾಣದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ಹೇಳಿದ್ದಾರೆ.