ಚಂಡೀಗಢ: ನಟಿ ಮತ್ತು ಮಂಡಿ ಲೋಕಸಭಾ ಕ್ಷೇತ್ರ ಸಂಸದೆ ಕಂಗನಾ ರಾಣಾವತ್ ಮೇಲೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಡೆದ ಹಲ್ಲೆ ಪ್ರಕರಣ ಸಂಬಂಧ, ಹಲ್ಲೆ ನಡೆಸಿದ ಸಿಐಎಸ್ಎಫ್ ಮಹಿಳಾ ಪೇದೆ ಬೆಂಬಲಿಸಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜದ್ದೂರ್ ಮೋರ್ಚಾ ಸೇರಿದಂತೆ ಹಲವು ರೈತಪರ ಸಂಘಟನೆಗಳು ಭಾನುವಾರ ಮೊಹಾಲಿಯಲ್ಲಿ ಬೃಹತ್ ಮೆರವಣಿಗೆ ನಡೆಸಿದರು.
ಮಹಿಳಾ ಪೇದೆ ಕುಲ್ವಿಂದರ್ ಕೌರ್ಗೆ ಅನ್ಯಾಯವಾಗಬಾರದು, ನ್ಯಾಯಯುತ ತನಿಖೆ ನಡೆಸಬೇಕು ಎಂದು ರೈತ ಮುಖಂಡರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
ಮೊಹಾಲಿಯ ಗುರುದ್ವಾರ ಅಂಬ್ ಸಾಹಿಬ್ನಿಂದ ಭಾರೀ ಭದ್ರತೆಯಲ್ಲಿ ರೈತರ ಮೆರವಣಿಗೆ ಸಾಗಿತು. ಪ್ರತಿಭಟನೆ ವೇಳೆ ಕಂಗನಾ ವಿರುದ್ಧ ಕಿಡಿ ಕಾರಿದ ರೈತ ಮುಖಂಡರು,ನಟಿ ಪಂಜಾಬ್ ಜನರ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.