;Resize=(412,232))
ಪ್ರಯಾಗ್ರಾಜ್ : ‘ರಾಮಮಂದಿರ ಕಾಣಿಕೆಯಲ್ಲಿ ಅಕ್ರಮ ನಡೆದಿದೆ’ ಎಂದು ಮೊದಲು ಆರೋಪಿಸಿದವರಲ್ಲಿ ಒಬ್ಬರಾಗಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ‘ಆಡಳಿತಾರೂಢ ಬಿಜೆಪಿಯು ದೇಶಕ್ಕಿಂತ ದೇಣಿಗೆಗೆ ಆದ್ಯತೆ ನೀಡುತ್ತಿದೆ ಮತ್ತು ಸಾರ್ವಜನಿಕ ನಂಬಿಕೆಗೆ ದ್ರೋಹ ಬಗೆದಿದೆ. ರಾಮಮಂದಿರ ದೇಣಿಗೆ ಕಳ್ಳತನದ ನಂಟು ಕರ್ನಾಟಕದವರೆಗೂ ವಿಸ್ತರಿಸಿದೆ ಎಂದು ಅಯೋಧ್ಯೆಯ ಜನ ಮಾತನಾಡಿಕೊಳ್ಳುತ್ತಿದ್ದಾರೆ’ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಸೋಮವಾರ ಪ್ರಯಾಗ್ರಾಜ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಅಯೋಧ್ಯೆಯ ಜನರು ಕಳ್ಳತನದ ನಂಟು ಕರ್ನಾಟಕಕ್ಕೂ ವಿಸ್ತರಿಸಿದೆ ಎಂದು ಹೇಳುತ್ತಿದ್ದಾರೆ. ಕರ್ನಾಟಕದ ‘ಭೂಗತ’ (ಅಂಡರ್ಗ್ರೌಂಡ್) ಮತ್ತು ‘ನೋಂದಾಯಿಸಲ್ಪಡದ’ (ಅನ್ರಿಜಿಸ್ಟರ್ಡ್) ಜನರು ಚುನಾವಣೆಗೆ ಸಂಬಂಧಿಸಿದ ಪಿತೂರಿಗಳಲ್ಲಿ ಭಾಗಿಯಾಗಿದ್ದಾರೆ. ಅವರ ಚಟುವಟಿಕೆಗಳು ಈಗ ಬಹಿರಂಗಗೊಂಡಿವೆ’ ಎಂದರು. ಆದರೆ ಕರ್ನಾಟಕದ ಆ ‘ನೋಂದಾಯಿತವಲ್ಲದ ವ್ಯಕ್ತಿಗಳು ಯಾರು’ ಎಂಬುದನ್ನು ಅವರು ಹೇಳಲಿಲ್ಲ.
‘ಆದರೆ ಆಡಳಿತಾರೂಢ ಬಿಜೆಪಿ ದೇಶಕ್ಕಿಂತ ದೇಣಿಗೆಗೆ ಹೆಚ್ಚು ಆದ್ಯತೆ ನೀಡುತ್ತಿದೆ. ಸಾರ್ವಜನಿಕದ ನಂಬಿಕೆಗೆ ದ್ರೋಹ ಮಾಡಿದೆ’ ಎಂದು ಆರೋಪಿಸಿದರು.
‘ಚೋರ್-ಚೋರ್ ಸೌತೆಲೇ ಭಾಯಿ, ಜಿನ್ಹೋನೆ ಚುರಾಯಿ ಭಗವಾನ್ ರಾಮ್ ಕಿ ಪೈ’ (ಕಳ್ಳರು ಭಗವಾನ್ ರಾಮನ ಕಾಣಿಕೆಗಳನ್ನು ಸಹ ಕದ್ದ ಮಲಸಹೋದರರಂತೆ) ಎಂದು ಹೇಳಿದ ಯಾದವ್, ‘ದೊಡ್ಡ ಮೀನುಗಳನ್ನು’ ರಕ್ಷಿಸಲಾಗುತ್ತಿರುವಾಗ ‘ಸಣ್ಣ ಮೀನುಗಳನ್ನು’ ಮಾತ್ರ ಪ್ರಕರಣದಲ್ಲಿ ಬಂಧಿಸಲಾಗುತ್ತಿದೆ’ ಎಂದು ಆರೋಪಿಸಿದರು.
‘ಬಿಜೆಪಿಯ ಗಮನ ರಾಷ್ಟ್ರದ ಮೇಲಲ್ಲ, ದೇಣಿಗೆಗಳ ಮೇಲಿದೆ. ಅವರ ಸರ್ಕಾರದ ಅಡಿಯಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಲೂಟಿ ನಡೆಯುತ್ತಿದೆ. ನಿಜವಾದ ಸನಾತನಿಗಳು ಬಿಜೆಪಿಗೆ ಮತ ಹಾಕಬಾರದು ಅಥವಾ ಪಕ್ಷದಿಂದ ಚುನಾವಣಾ ಟಿಕೆಟ್ ಪಡೆಯಬಾರದು. ಏಕೆಂದರೆ ಬಿಜೆಪಿ ಭಗವಾನ್ ರಾಮನಿಗೆ ದ್ರೋಹ ಮಾಡಿದೆ’ ಎಂದು ಆರೋಪಿಸಿದರು.
‘ಬಿಜೆಪಿ ಸಿಸಿಟಿವಿ ಬಗ್ಗೆ ಹೆದರುತ್ತಿದೆ. ಏಕೆಂದರೆ ಜನರಿಗೆ ಈಗ ‘ಸಿಸಿ’ ಎಂದರೆ ಚಂದಾ ಚೋರಿ (ದೇಣಿಗೆ ಕಳ್ಳತನ) ಎಂಬುದು ಖಚಿತವಾಗಿದೆ’ ಎಂದು ಅವರು ಹೇಳಿದರು.
- ದೇಣಿಗೆ ಕಳ್ಳತನ ಕರ್ನಾಟಕದವರೆಗೂ ಚಾಚಿದೆ ಅಂತ ಜನರೇ ಹೇಳುತ್ತಿದ್ದಾರೆ
- ಅಯೋಧ್ಯೆ ರಾಮಮಂದಿರದ ಹುಂಡಿ ಹಾಗೂ ದೇಣಿಗೆಯಲ್ಲಿ ಭಾರಿ ಅಕ್ರಮವಾಗಿದೆ, ಹಣ ವ್ಯಾಪಕ ದುರ್ಬಳಕೆ ಆಗಿದೆ ಎಂಬ ದೂರು
- ಈ ಕುರಿತು ಆರೋಪ ಮಾಡಿದ ಮೊದಲಿಗರಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ, ಉ.ಪ್ರ. ಮಾಜಿ ಸಿಎಂ ಅಖಿಲೇಶ್ ಕೂಡ ಒಬ್ಬರು
- ದೇಣಿಗೆ ಕಳ್ಳತನಕ್ಕೂ ಕರ್ನಾಟಕಕ್ಕೂ ನಂಟು ಕಲ್ಪಿಸಿದ ಮುಲಾಯಂ ಪುತ್ರ. ಕೃತ್ಯದ ನಂಟು ಕರ್ನಾಟಕಕ್ಕೆ ವಿಸ್ತರಿಸಿದೆ ಎಂದು ಆರೋಪ
- ಕರ್ನಾಟಕದ, ಚುನಾವಣೆ ಪಿತೂರಿಗಳಲ್ಲಿ ಭಾಗಿಯಾದ, ಅಂಡರ್ಗ್ರೌಂಡ್, ಅನ್ರಿಜಿಸ್ಟರ್ಡ್ ಜನರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ
- ಅವರ ಚಟುವಟಿಕೆ ಈಗ ಬಹಿರಂಗವಾಗಿದೆ. ಈ ಕುರಿತು ಅಯೋಧ್ಯೆಯ ಜನರೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಸ್ಫೋಟಕ ಆರೋಪ
- ಆದರೆ ಯಾರ ಹೆಸರನ್ನೂ ನೇರವಾಗಿ ಉಲ್ಲೇಖಿಸದ ಅಖಿಲೇಶ್. ಅವರು ಆರೋಪ ಮಾಡುತ್ತಿರುವುದು ಯಾರ ಬಗ್ಗೆ ಎಂಬುದು ಕುತೂಹಲ