ಶ್ರೀನಗರ: 26 ಮಂದಿಯನ್ನು ಬಲಿಪಡೆದ ಪಹಲ್ಗಾಮ್ ಉಗ್ರ ದಾಳಿ ಕುರಿತ ಸುದ್ದಿಯನ್ನು ಕಾಶ್ಮೀರದ ಅನೇಕ ಪ್ರಮುಖ ಪತ್ರಿಕೆಗಳು ಬುಧವಾರ ತಮ್ಮ ಮುಖಪುಟವನ್ನು ಕಪ್ಪುಬಣ್ಣದಲ್ಲಿ ಪ್ರಕಟಿಸುವ ಮೂಲಕ ತೀವ್ರ ಖಂಡನೆ ವ್ಯಕ್ತಪಡಿಸಿವೆ.
ಗ್ರೇಟರ್ ಕಾಶ್ಮೀರ್, ಕಾಶ್ಮೀರ್ ಉಜ್ಮಾ, ಅಫ್ತಾಬ್ ಮತ್ತು ತೈಮೀಲ್ ಇರ್ಶದ್ ಹೀಗೆ ಇಂಗ್ಲಿಷ್, ಹಿಂದಿ, ಉರ್ದು ಪತ್ರಿಕೆಗಳು 26 ಮಂದಿಯನ್ನು ಬಲಿಪಡೆದ ಅಮಾನುಷ ಕೃತ್ಯಕ್ಕೆ ಕಪ್ಪುಮುಖಪುಟದಲ್ಲಿ ಕೆಂಪು ಅಥವಾ ಬಿಳಿ ಬಣ್ಣದಲ್ಲಿ ಹೆಡ್ಲೈನ್ ಪ್ರಕಟಿಸುವ ಮೂಲಕ ತಮ್ಮದೇ ಆದ ರೀತಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿವೆ. ಕಾಶ್ಮೀರವನ್ನು ದಶಕಗಳ ಕಾಲ ಕಾಡಿದ ಹಿಂಸಾಚಾರವನ್ನು ಸ್ಮರಿಸುವ ಹೆಡ್ಲೈನ್ ನೀಡಿವೆ.
ಕಾಶ್ಮೀರದ ಪ್ರಮುಖ ಇಂಗ್ಲಿಷ್ ಪತ್ರಿಕೆಯಾದ ಗ್ರೇಟರ್ ಕಾಶ್ಮೀರ್, ‘ಭಯಾನಕ: ಕಾಶ್ಮೀರ ನಾಶವಾಯಿತು, ಕಾಶ್ಮೀರಿಗರು ಶೋಕದಲ್ಲಿದ್ದಾರೆ'''''''' ಎಂಬ ಹೆಡ್ಲೈನ್ ಪ್ರಕಟಿಸಿದೆ. ಜತೆಗೆ, ಮುಖಪುಟದಲ್ಲೇ ''''''''ಹುಲ್ಲಿನ ಮೈದಾನದಲ್ಲಿ ನರಸಂಹಾರ-ಕಾಶ್ಮೀರದ ಆತ್ಮವನ್ನು ರಕ್ಷಿಸಿ’ ಎಂಬ ತಲೆಬರಹದಡಿ ಸಂಪಾದಕೀಯವನ್ನೂ ಬರೆದಿದೆ. ಉಗ್ರರ ಕೃತ್ಯವನ್ನು ಕಟುಪದಗಳಲ್ಲಿ ಟೀಕಿಸಿರುವ ಪತ್ರಿಕೆಯು, ಭವಿಷ್ಯದಲ್ಲಿ ಈ ರೀತಿಯ ದಾಳಿ ತಡೆಯಬೇಕಾದ ಕ್ರಮಗಳ ಕುರಿತೂ ಎಚ್ಚರಿಸಿದೆ.
ಉಗ್ರ ದಾಳಿ ಬೆನ್ನಲ್ಲೇ ಮುರ್ಮು, ಮೋದಿ, ನಿರ್ಮಲಾ ಪ್ರವಾಸ ರದ್ದು
ವಾಷಿಂಗ್ಟನ್: ಪಹಲ್ಗಾಂ ಉಗ್ರ ದಾಳಿಯ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮುಂದಿನ ಪ್ರವಾಸಗಳುರದ್ದಾಗಿವೆ.
ಸೌದಿ ಅರೇಬಿಯಾ ಪ್ರವಾಸ ಮೊಟಕುಗೊಳಿಸಿ ಭಾರತಕ್ಕೆ ಮರಳಿರುವ ಪ್ರಧಾನಿ ನರೇಂದ್ರ ಮೋದಿ, ಗುರುವಾರ ಕಾನ್ಪುರದಲ್ಲಿ 20,000 ಕೋಟಿ ರು. ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮಡಬೇಕಿತ್ತು. ಅದು ರದ್ದಾಗಿದೆ.ಅತ್ತ ಶುಕ್ರವಾರ ಗುವಾಹಟಿ ವಿವಿಯ 32ನೇ ಘಟಿಕೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅಸ್ಸಾಂಗೆ ತೆರಳಬೇಕಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರವಾಸ ರದ್ದಾಗಿದೆ.
ಪ್ರಸ್ತುತ 6 ದಿನಗಳ ಅಮೆರಿಕದಲ್ಲಿರುವ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಆದಷ್ಟು ಬೇಗ ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಭಾರತಕ್ಕೆ ಮರಳಲಿದ್ದಾರೆ. ಜೊತೆಗೆ, 5 ದಿನಗಳ ಪೆರು ಪ್ರವಾಸವನ್ನೂ ರದ್ದುಗೊಳಿಸಿದ್ದಾರೆ.
ಸರ್ಕಾರದ ಹಿಂದುತ್ವ ಬೆಂಬಲದಿಂದಲೇ ಈ ದಾಳಿ: ವಾದ್ರಾ ವಿವಾದ
ನವದೆಹಲಿ: ‘ಪಹಲ್ಗಾಂ ಉಗ್ರದಾಳಿ ಹಾಗೂ ಸರ್ಕಾರದ ಹಿಂದುತ್ವವಾದಕ್ಕೆ ನೇರ ಸಂಬಂಧವಿದೆ’ ಎನ್ನುವ ಮೂಲಕ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ವಿವಾದ ಸೃಷ್ಟಿಸಿದ್ದಾರೆ.‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಿಂದುತ್ವವನ್ನು ಬೆಂಬಲಿಸುತ್ತಿರುವ ಕಾರಣದಿಂದ ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರಿಗೆ ತಾವು ದುರ್ಬಲರಾದಂತೆ ಭಾಸವಾಗುತ್ತಿದೆ. ಹಿಂದೂ-ಮುಸ್ಲಿಮರ ನಡುವೆ ಒಡಕು ಸೃಷ್ಟಿಯಾಗಿದೆ. ಆದ್ದಂರಿಂದಲೇ ಪ್ರವಾಸಿಗರ ಗುರುತು ನೋಡಿ ಉಗ್ರರು ದಾಳಿ ನಡೆಸಿದರು. ಇದು ಪ್ರಧಾನಿ ಮೋದಿಗೆ ಅವರು ನೀಡಿರುವ ಸಂದೇಶ’ ಎಂದು ವಾದ್ರಾ ಹೇಳಿದ್ದಾರೆ.ಇದಕ್ಕೆ ಬಿಜೆಪಿ ಕಡೆಯಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. ‘ಸೋನಿಯಾ ಗಾಂಧಿಯವರ ಅಳಿಯ ಉಗ್ರದಾಳಿಯನ್ನು ಖಂಡಿಸುವ ಬದಲು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೆ, ಪಾಕಿಸ್ತಾನದ ಉಗ್ರರು ನಡೆಸಿದ ದಾಳಿಯ ಹೊಣೆಯನ್ನು ಭಾರತದ ತಲೆಗೆ ಕಟ್ಟುತ್ತಿದ್ದಾರೆ’ ಎಂದು ಬಿಜೆಪಿ ನಾಯಕ ಅಮಿತ್ ಮಾಳವೀಯ ತಿರುಗೇಟು ನೀಡಿದ್ದಾರೆ.
35 ವರ್ಷಗಳಲ್ಲಿ ಮೊದಲ ಬಾರಿ ಕಾಶ್ಮೀರ ಬಂದ್
ಶ್ರೀನಗರ: ಜಮ್ಮು ಕಾಶ್ಮೀರದ ಪಹಲ್ಗಾಂ ಜಿಲ್ಲೆಯಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ಅಟ್ಟಹಾಸವನ್ನು ಖಂಡಿಸಿ ಜಮ್ಮು ಕಾಶ್ಮೀರದಲ್ಲಿ ಬುಧವಾರ ಬಂದ್ಗೆ ಕರೆ ನೀಡಲಾಗಿತ್ತು. ಬರೋಬ್ಬರಿ 35 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕಣಿವೆ ರಾಜ್ಯ ಸ್ತಬ್ಧಗೊಂಡಿತು.ಶ್ರೀನಗರದಲ್ಲಿ ಹೆಚ್ಚಿನ ಅಂಗಡಿಗಳು, ವ್ಯಾಪಾರ ಮಳಿಗೆಗಳು ಬಂದ್ಗೆ ಬೆಂಬಲ ಘೋಷಿಸಿ ಮುಚ್ಚಲ್ಪಟ್ಟಿದ್ದವು. ನಗರದಾ ದ್ಯಂತ ಅಗತ್ಯ ವಸ್ತುಗಳು ಅಂಗಡಿಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಿತ್ತು. ಇನ್ನು ಸಾರ್ವಜನಿಕ ಸಾರಿಗೆ ಸಂಚಾರವೂ ವಿರಳವಾಗಿತ್ತು. ಉಗ್ರರ ಅಟ್ಟಹಾಸ ಖಂಡಿಸಿ ಖಾಸಗಿ ಶಾಲೆಗಳಿಗೆ ಕೂಡ ರಜೆಯನ್ನು ಘೋಷಿಸಲಾಗಿತ್ತು. ಶ್ರೀನಗರ ಮಾತ್ರವಲ್ಲದೇ ಇತರ ಜಿಲ್ಲಾ ಕೇಂದ್ರಗಳಲ್ಲಿಯೂ ಬಂದ್ ಬಿಸಿ ತಟ್ಟಿತ್ತು.ಇನ್ನು ಘಟನೆಯನ್ನು ಖಂಡಿಸಿ ಹಲವೆಡೆ ಶಾಂತಿಯುತ ಪ್ರತಿಭಟನೆಗಳು ನಡೆದವು. ಬಂದ್ಗೆ ಎನ್ಸಿ, ಪಿಡಿಪಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಕೂಡ ಬೆಂಬಲ ನೀಡಿದ್ದವು. ಘನಘೋರ ದುರಂತದ ಬಳಿಕ ಜಮ್ಮು ಕಾಶ್ಮೀರದ ಪ್ರವಾಸಿ ತಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.ಕ್ಷಮೆ ಕೇಳಿದ ಮೆಹಬೂಬಾ:
‘ಈ ದಾಳಿ ಇಡೀ ಕಾಶ್ಮೀರಿಯತೆ ಮೇಲಿನ ದಾಳಿ. ಅಮಾಯಕರು ಬಲಿಯಾಗಿದ್ದಾರೆ. ಕಾಶ್ಮೀರ ನೆಲದಲ್ಲಿ ಇಂಥ ಘಟನೆ ನಡೆದಿದ್ದಕ್ಕೆ ದೇಶದ ಜನರಲ್ಲಿ ಕ್ಷಮೆ ಯಾಚಿಸುತ್ತೇನೆ. ಆದರೆ ಧರ್ಮದ ದೃಷ್ಟಿಯಿಂದ ಈ ಘಟನೆಯನ್ನು ನೋಡಬಾರದು’ ಎಂದು ಹೇಳಿದ್ದಾರೆ.