ವಯನಾಡ್ (ಕೇರಳ): ಕೇರಳದ ವಯನಾಡಿನಲ್ಲಿ ಫೆ.18ರಂದು ಪಶುವೈದ್ಯಕೀಯ ಕಾಲೇಜು ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಈ ವಿದ್ಯಾರ್ಥಿಗೆ ತನ್ನ ಹಿರಿಯ ವಿದ್ಯಾರ್ಥಿಗಳ ಗುಂಪೊಂದು ಸತತ 29 ಗಂಟೆಗಳ ಕಾಲ ರ್ಯಾಗಿಂಗ್ ಮಾಡಿದ ಪರಿಣಾಮ ಆತ ತನ್ನ ಹಾಸ್ಟೆಲ್ನ ಬಾತ್ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಎಂದು ತನಿಖೆಯಿಂದ ತಿಳಿದುಬಂದಿದೆ.
ಮೃತ ವಿದ್ಯಾರ್ಥಿಯನ್ನು ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಿದ್ಧಾರ್ಥನ್ (20) ಎಂದು ಗುರುತಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮೊದಲಿಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತಾದರೂ ಬಳಿಕ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತೊಮ್ಮೆ ಪ್ರಥಮ ವರ್ತಮಾನ ವರದಿ(ಎಫ್ಐಆರ್) ದಾಖಲಿಸಿ ಹಿಂಸೆ ಕೊಟ್ಟಿದ್ದ 20 ವಿದ್ಯಾರ್ಥಿಗಳನ್ನು ಬಂಧಿಸಿದೆ.
ಏನಿದು ಪ್ರಕರಣ?
ಸಿದ್ಧಾರ್ಥನ್ ಇದ್ದ ಹಾಸ್ಟೆಲ್ ಕೊಠಡಿಗೆ ಹಿರಿಯ ವಿದ್ಯಾರ್ಥಿಗಳ ಗುಂಪೊಂದು ಫೆ.16ರ ಮುಂಜಾನೆ ಅತಿಕ್ರಮವಾಗಿ ಪ್ರವೇಶಿಸಿ ರ್ಯಾಗಿಂಗ್ ಶುರು ಮಾಡಿಕೊಂಡಿದೆ. ಬಳಿಕ ಹಿಂಸೆ ತೀವ್ರವಾಗಿ ಮಾನಸಿಕ ಮತ್ತು ದೈಹಿಕ ಶೋಷಣೆಗೆ ತಿರುಗಿದೆ. ಈ ರೀತಿ ವಿದ್ಯಾರ್ಥಿಯನ್ನು ಮರುದಿನ ಅಂದರೆ ಫೆ.17ರ ಮಧ್ಯಾಹ್ನ 2 ಗಂಟೆಯವರೆಗೆ ನಿರಂತರವಾಗಿ 29 ಗಂಟೆಗಳ ಕಾಲ ಶೋಷಣೆ ಮಾಡಿ ಕ್ರೌರ್ಯ ಮೆರೆದಿದೆ. ಇದರಿಂದ ಮಾನಸಿಕವಾಗಿ ಜರ್ಜರಿತನಾದ ವಿದ್ಯಾರ್ಥಿ ಮರುದಿನ ಅಂದರೆ ಫೆ.18ರ ಮಧ್ಯಾಹ್ನ 1 ಗಂಟೆ ಸುಮಾರಿಗೆ ತನ್ನ ಬಾತ್ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಿಬಿಐ ಎಫ್ಐಆರ್ ತಿಳಿಸಿದೆ.
ಮೊದಲಿಗೆ ಸ್ಥಳೀಯ ಪೊಲೀಸ್ ಠಾಣೆ ಸಲ್ಲಿಸಿದ್ದ ವರದಿಯಲ್ಲಿ ಪ್ರಕರಣವನ್ನು ಅಸ್ವಾಭಾವಿಕ ಸಾವು ಎಂದು ಉಲ್ಲೇಖಿಸಲಾಗಿದ್ದರೂ, ಕಾಲೇಜಿನ ಆ್ಯಂಟಿ ರ್ಯಾಗಿಂಗ್ ಸಮಿತಿ, ಕಾಲೇಜಿನ ಇತರ ಪ್ರಮುಖರು, ಮರಣೋತ್ತರ ವರದಿ ಮುಂತಾದವುಗಳನ್ನು ಪರಿಗಣಿಸಿ ಸಿಬಿಐ ಪ್ರಕರಣವನ್ನು ಆತ್ಮಹತ್ಯೆಗೆ ಪ್ರಚೋದನೆ, ಕೊಲೆ ಯತ್ನ, ಕೇರಳದ ರ್ಯಾಗಿಂಗ್ ವಿರೋಧಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದೆ.