ಜೆರುಸಲೇಂ: ಇಸ್ರೇಲ್ ಮೇಲೆ ಪ್ಯಾಲೆಸ್ತೀನಿ ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ ಕೇರಳ ಮೂಲದ ನರ್ಸ್ ಶೀಜಾ ಆನಂದ್ (41) ಗಂಭೀರವಾಗಿ ಗಾಯಗೊಂಡಿದ್ದಾರೆ. ಪತಿಗೆ ವಿಡಿಯೋ ಕಾಲ್ ಮಾಡುವಾಗಲೇ ಈಕೆಗೆ ಹಮಾಸ್ ಉಗ್ರರು ಸಿಡಿಸಿದ ಬಾಂಬ್ ತಾಗಿದ್ದು, ಅಲ್ಲಿನ ಸ್ಥಿತಿಯ ಭೀಕರತೆಗೆ ಸಾಕ್ಷಿಯಾಗಿದೆ. ಕೇರಳದಲ್ಲಿರುವ ಶೀಜಾ ಕುಟುಂಬಕ್ಕೆ ಕರೆ ಮಾಡಿದ ಶೀಜಾ ಅವರ ಕೇರಳ ಮೂಲದ ಸಹೋದ್ಯೋಗಿಗಳು, ‘ದಾಳಿಯಲ್ಲಿ ಶೀಜಾ ಗಾಯಗೊಂಡಿದ್ದು, ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅಲ್ಲದೇ ಮತ್ತೊಂದು ಶಸ್ತ್ರಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ’ ಎಂದು ತಿಳಿಸಿದ್ದಾರೆ. ಪತಿಯೊಂದಿಗೆ ವಿಡಿಯೋ ಕಾಲ್ ವೇಳೆ ಶೀಜಾಗೆ ಗಾಯ: ದಾಳಿಯ ವೇಳೆ ಕುಟುಂಬಸ್ಥರಿಗೆ ಕರೆ ಮಾಡಿದ್ದ ಶೀಜಾ, ತಾನು ಸುರಕ್ಷಿತವಾಗಿದ್ದೇನೆ ಎಂದೇ ಹೇಳಿದ್ದಳು. ಇದಾದ ಬಳಿಕ ಆಕೆ ಪುಣೆಯಲ್ಲಿರುವ ತನ್ನ ಪತಿಗೆ ವಿಡಿಯೋ ಕಾಲ್ ಮಾಡಿದ್ದ ವೇಳೆಯೇ ಗಾಯಗೊಂಡಿದ್ದಾರೆ. ವಿಡಿಯೋ ಕಾಲ್ನಲ್ಲಿ ಶೀಜಾ ಮಾತನಾಡುತ್ತಿದ್ದಂತೆಯೇ ಅಲ್ಲಿ ಭಾರೀ ಪ್ರಮಾಣದ ಸ್ಫೋಟದ ಸದ್ದು ಕೇಳಿ ಬಂದಿದ್ದು, ಈ ವೇಳೆ ಕರೆ ಸಂಪರ್ಕ ಕಡಿತಗೊಂಡಿದೆ. ನಂತರವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿರುವ ಬಗ್ಗೆ ಇತರ ಕೇರಳಿಗರು ಕುಟುಂಬಕ್ಕೆ ತಿಳಿಸಿದ್ದಾರೆ. ಕಳೆದ 7 ವರ್ಷಗಳಿಂದ ಶೀಜಾ ಇಸ್ರೇಲ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇಸ್ರೇಲ್ನಲ್ಲಿರುವ 18,000 ಭಾರತೀಯರ ಪೈಕಿ ಸುಮಾರು 6,000 ಜನರು ಕೇರಳಿಗರೇ ಆಗಿದ್ದು, ಅವರಲ್ಲಿ ದಾದಿಯರೇ ಹೆಚ್ಚಿನವರಿದ್ದಾರೆ. --- ಸಿಲುಕಿರುವ 200 ಕೇರಳಿಗರು: ಈ ನಡುವೆ ಬೆತ್ಲೆಹ್ಯಾಂನಲ್ಲಿರುವ ಹೋಟೆಲ್ವೊಂದರಲ್ಲಿ ಸುಮಾರು 200ಕ್ಕೂ ಹೆಚ್ಚು ಜನ ಕೇರಳಿಗರು ಸಿಲುಕೊಂಡಿದ್ದಾರೆ. ಅದಾಗ್ಯೂ ಸದ್ಯಕ್ಕೆ ಅವರೆಲ್ಲ ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಪ್ಯಾಲಿಸ್ತಿನ್ ಹೋಟೆಲ್ನಲ್ಲಿ ಸಿಲುಕಿಕೊಂಡಿರುವ 45ಜನ ಕೊಚ್ಚಿ ಮೂಲದವರು ಸುರಕ್ಷಿತವಾಗಿದ್ದು, ಗಡಿ ದಾಟಲು ಅವರಿಗೆ ಅನುಮತಿ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.