ಮಹಿಳಾ ಮಂಡಲ ಮುತ್ತಿಗೆಯಿಂದ ಪ್ರಧಾನಿ ಮೋದಿ ಮಾತಿಗೆ ಬ್ರೇಕ್‌

KannadaprabhaNewsNetwork |  
Published : Feb 05, 2026, 04:30 AM IST
Parliament

ಸಾರಾಂಶ

ವಿಪಕ್ಷದ ಮಹಿಳಾ ಸಂಸದರು, ಲೋಕಸಭೆಯಲ್ಲಿ ಪ್ರಧಾನಿ ಕುಳಿತುಕೊಳ್ಳುವ ಸ್ಥಳಕ್ಕೆ ಮುತ್ತಿಗೆ ಹಾಕಿದ ಪರಿಣಾಮ ನರೇಂದ್ರ ಮೋದಿ ಅವರ ಭಾಷಣವನ್ನೇ ರದ್ದುಪಡಿಸಿದ ಅಪರೂಪದ ಬೆಳವಣಿಗೆಯೊಂದು ಬುಧವಾರ ನಡೆದಿದೆ.

ನವದೆಹಲಿ: ವಿಪಕ್ಷದ ಮಹಿಳಾ ಸಂಸದರು, ಲೋಕಸಭೆಯಲ್ಲಿ ಪ್ರಧಾನಿ ಕುಳಿತುಕೊಳ್ಳುವ ಸ್ಥಳಕ್ಕೆ ಮುತ್ತಿಗೆ ಹಾಕಿದ ಪರಿಣಾಮ ನರೇಂದ್ರ ಮೋದಿ ಅವರ ಭಾಷಣವನ್ನೇ ರದ್ದುಪಡಿಸಿದ ಅಪರೂಪದ ಬೆಳವಣಿಗೆಯೊಂದು ಬುಧವಾರ ನಡೆದಿದೆ. ಆದರೆ ಘಟನೆ ನಡೆದಾಗ ಮೋದಿ ಸ್ಥಳದಲ್ಲಿ ಹಾಜರಿರದ ಕಾರಣ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಲಾಪವನ್ನೇ ಗುರುವಾರಕ್ಕೆ ಮುಂದೂಡಲಾಯಿತು.

ಏನಾಯ್ತು?:

ರಾಹುಲ್‌ ಗಾಂಧಿ ಭಾಷಣಕ್ಕೆ ಅಡ್ಡಿ, ಅಮೆರಿಕ- ಭಾರತ ವ್ಯಾಪಾರ ಒಪ್ಪಂದ ಮತ್ತು ಬಿಜೆಪಿ ನಾಯಕ ನಿಶಿಕಾಂತ್‌ ದುಬೆ ಹೇಳಿಕೆಯಿಂದಾಗಿ ಬುಧವಾರ ಬೆಳಗ್ಗೆಯಿಂದಲೇ ಲೋಕಸಭೆಯಲ್ಲಿ ಭಾರೀ ಗದ್ದಲ ಉಂಟಾಗಿ ಹಲವು ಬಾರಿ ಕಲಾಪಕ್ಕೆ ಅಡ್ಡಿಯಾಗಿತ್ತು. ಅಂತಿಮವಾಗಿ ಸಂಜೆ 5ಕ್ಕೆ ಕಲಾಪ ಮುಂದೂಡಲಾಗಿತ್ತು. 5 ಗಂಟೆಗೆ ಪ್ರಧಾನಿ ಮೋದಿ, ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಮಾತನಾಡಬೇಕಿತ್ತು.

ಆದರೆ ಸಂಜೆ ಕಲಾಪ ಆರಂಭವಾಗುತ್ತಲೇ ವಿಪಕ್ಷದ ಮಹಿಳಾ ಸಂಸದರು, ನೆಹರೂ ಕುರಿತ ಹೇಳಿಕೆ ಖಂಡಿಸಿ, ಪ್ರಧಾನಿ ಮೋದಿ ಅವರ ಹಿಂಭಾಗದಲ್ಲಿ ಕುಳಿತಿದ್ದ ನಿಶಿಕಾಂತ್‌ ದುಬೆ ಅವರಿಗೆ ಮುತ್ತಿಗೆ ಹಾಕಲು ಮುಂದಾದರು. ಈ ಹಂತದಲ್ಲಿ ಮಧ್ಯಪ್ರವೇಶ ಮಾಡಿದ ಸ್ಪೀಕರ್‌, ಈ ವಿಷಯದಲ್ಲಿ ಈಗಾಗಲೇ ರೂಲಿಂಗ್‌ ನೀಡಿರುವ ಕಾರಣ ಯಾರೂ ಆ ವಿಷಯ ಮಾತನಾಡದಂತೆ ಸೂಚಿಸಿದರು. ಆದರೂ ಸಂಸದೆಯರು ದುಬೆ ಅವರತ್ತ ಮತ್ತು ಸದನದ ಬಾವಿಯತ್ತ ಧಾವಿಸಿದರು. ಈ ಪೈಕಿ ಕೆಲ ಮಹಿಳಾ ಸಂಸದೆಯರು ಮೋದಿ ಅವರು ಕೂರುವ ಜಾಗದ ಹಿಂಬದಿಗೂ ಹೋಗಿ ನಿಂತರು. ಈ ವೇಳೆ ಬಿಜೆಪಿಯ ಮಹಿಳಾ ಸದಸ್ಯರು ಕೂಡಾ ದುಬೆ ಅವರ ರಕ್ಷಣೆಗೆ ಧಾವಿಸಿದಾಗ ಸ್ಥಳದಲ್ಲಿ ಕಾವೇರಿದ ವಾತಾವರಣ ನಿರ್ಮಾಣವಾಯಿತು. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಸ್ಪೀಕರ್‌, ಕಲಾಪವನ್ನೇ ಗುರುವಾರಕ್ಕೆ ಮುಂದೂಡಿದರು.

ಮೋದಿಗೆ ಹೆದರಿಕೆ:

ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ‘ಪ್ರಧಾನಿ ಮೋದಿ ಹೆದರಿಕೊಂಡಿದ್ದಾರೆ. ಅದಕ್ಕೇ ಅವರು ಉತ್ತರ ನೀಡಲು ಸದನಕ್ಕೆ ಆಗಮಿಸಲಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ. ಈ ನಡುವೆ ಬಿಜೆಪಿ ನಾಯಕ ಮನೋಜ್‌ ತಿವಾರಿ ಮಾತನಾಡಿ, ‘ವಿಪಕ್ಷದ ಸದಸ್ಯರ ವರ್ತನೆಯ ಕಾರಣ ಪ್ರಧಾನಿ ಮೋದಿ ಲೋಕಸಭೆಯನ್ನು ಪ್ರವೇಶ ಮಾಡಲು ಆಗಲಿಲ್ಲ’ ಎಂದು ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸುಪ್ರೀಂನಲ್ಲಿ ವಕೀಲೆ ಆದ ಬಂಗಾಳದ ಮುಖ್ಯಮಂತ್ರಿ ದೀದಿ!
7 ಲಕ್ಷ ಸೇಬು ಮರ ಉಳಿಸಲು ಚಿಪ್ಕೋ ಚಳವಳಿ : 3 ಕಾಶ್ಮೀರ ರೈಲ್ವೆಗಳ ರದ್ದು