ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಮಹಾಕುಂಭ ಮೇಳದ ಕುರಿತು ಪ್ರಧಾನಿ ನರೇಂದ್ರ ಅವರ ಮೆಚ್ಚುಗೆ ಮಾತು ಮತ್ತು ಬಳಿಕ ವಿಪಕ್ಷಗಳ ನಾಯಕರಿಗೆ ಮೋದಿ ಭಾಷಣದ ಮೇಲೆ ಮಾತನಾಡಲು ಅವಕಾಶ ನೀಡಲಿಲ್ಲ ಎಂಬ ವಿಷಯ ಮಂಗಳವಾರ ಲೋಕಸಭೆಯಲ್ಲಿ ಭಾರೀ ಗದ್ದಲಕ್ಕೆ ಕಾರಣವಾಗಿ, ಕಲಾಪವನ್ನೇ ಬಲಿ ಪಡೆದಿದೆ.
ಕಲಾಪ ಮುಂದೂಡಿಕೆ: ಇದರ ಬೆನ್ನಲ್ಲೇ ಕುಂಭಮೇಳದ ಕುರಿತು ಕೆಲ ಪ್ರಶ್ನೆಗಳನ್ನು ಕೇಳುವ ಸಲುವಾಗಿ ಹಾಗೂ ಮೌನಿ ಅಮಾವಾಸ್ಯೆಯಂದು ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ನಿಖರ ಸಂಖ್ಯೆಯನ್ನು ಬಹಿರಂಗಪಡಿಸುವಂತೆ ಆಗ್ರಹಿಸಿ ವಿಪಕ್ಷ ನಾಯಕರು ಕೋಲಾಹಲ ಎಬ್ಬಿಸಿದರು. ಹೀಗಾಗಿ ಕಲಾಪ ಮುಂದೂಡಲಾಯಿತು.
ರಾಗಾ ಕಿಡಿ:ಕಲಾಪ ಮುಂದೂಡಿಕೆಯ ಬಳಿಕ ಸಂಸತ್ತಿ ಹೊರಗೆ ಪತ್ರಕರ್ತರೊಂದಿಗೆ ಮಾತನಾಡಿದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ‘ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಕಾರ ವಿಪಕ್ಷ ನಾಯಕರಿಗೆ ಮಾತನಾಡಲು ಅವಕಾಶ ಸಿಗಬೇಕು. ಆದರೆ ನವಭಾರತದಲ್ಲಿ ಅದಕ್ಕೆ ಅನುವು ಮಾಡಿಕೊಡಲಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂತೆಯೇ, ‘ಕುಂಭವು ನಮ್ಮ ಸಂಪ್ರದಾಯ, ಇತಿಹಾಸ ಮತ್ತು ಸಂಸ್ಕೃತಿ ಎಂಬ ಪ್ರಧಾನಿಯವರ ಮಾತನ್ನು ನಾನೂ ಬೆಂಬಲಿಸುವವನಿದ್ದೆ. ಜೊತೆಗೆ, ಕಾಲ್ತುಳಿತಕ್ಕೆ ಬಲಿಯಾದವರಿಗೆ ಮೋದಿ ಶ್ರದ್ಧಾಂಜಲಿಯನ್ನೂ ಸಲ್ಲಿಸದ ಕುರಿತು ಆಕ್ಷೇಪಿಸಬಯಸಿದ್ದೆ. ಕುಂಭಮೇಳಕ್ಕೆ ಹೋದ ಯುವಕರಿಗೆ ಉದ್ಯೋಗದ ಅವಶ್ಯಕತೆಯೂ ಇದ್ದು, ಪ್ರಧಾನಿಯವರು ಆ ಬಗ್ಗೆ ಮಾತಾಡುವಂತೆ ಆಗ್ರಹಿಸಲು ಮುಂದಾಗಿದ್ದೆ. ಆದರೆ ಅದಕ್ಕೆ ಅವಕಾಶವನ್ನೇ ಕೊಡಲಿಲ್ಲ’ ಎಂದು ರಾಹುಲ್ ಆರೋಪಿಸಿದರು. ಇದನ್ನು ಅವರ ಸಹೋದರಿ, ಸಂಸದೆ ಪ್ರಿಯಾಂಕಾ ಗಾಂಧಿ ಕೂಡ ಬೆಂಬಲಿಸಿದರು.