ಪ್ರಾಣಪ್ರತಿಷ್ಠೆಗೆ ವ್ರತ: ಮೋದಿಯಿಂದ ನಿತ್ಯ ಅನ್ನ- ವಸ್ತ್ರದಾನ, ಗೋಪೂಜೆ, ದೇಗುಲ ಭೇಟಿ

KannadaprabhaNewsNetwork |  
Published : Jan 20, 2024, 02:02 AM ISTUpdated : Jan 20, 2024, 08:10 AM IST
PM Narendra Modi

ಸಾರಾಂಶ

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಸಮಾರಂಭದ ‘ಯಜಮಾನತ್ವ’ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ 11 ದಿನಗಳ ಕಾಲ ಕಠಿಣ ‘ಯಮ ನಿಯಮ’ ವ್ರತಾಚಾರಣೆ ಮಾಡುತ್ತಿರುವ ಮೋದಿಯಿಂದ ನಿತ್ಯ ಅನ್ನ- ವಸ್ತ್ರದಾನ, ಗೋಪೂಜೆ, ದೇಗುಲ ಭೇಟಿ

ನವದೆಹಲಿ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಸಮಾರಂಭದ ‘ಯಜಮಾನತ್ವ’ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ 11 ದಿನಗಳ ಕಾಲ ಕಠಿಣ ‘ಯಮ ನಿಯಮ’ ವ್ರತಾಚಾರಣೆ ಮಾಡುತ್ತಿರುವ ಮೋದಿ ನಿತ್ಯ ಗೋವಿನ ಪೂಜೆ, ಅನ್ನದಾನ ಸೇರಿ ಅನೇಕ ಆಚರಣೆಗಳನ್ನು ಮಾಡುತ್ತಿದ್ದಾರೆ ಎಂಬ ಮತ್ತಷ್ಟು ಕುತೂಹಲಕರ ಸಂಗತಿ ತಿಳಿದು ಬಂದಿದೆ.

ಪ್ರಧಾನಿ ಮೋದಿ ಆಚರಿಸುತ್ತಿದ್ದಾರೆ ಎನ್ನಲಾದ 11 ದಿನಗಳ ‘ಯಮ ನಿಯಮ’ ವ್ರತದ ಮತ್ತಷ್ಟು ಕುತೂಹಲಕರ ಅಂಶಗಳು ಬೆಳಕಿಗೆ ಬಂದಿವೆ. 

ಅವುಗಳಲ್ಲಿ ಪ್ರಧಾನಿ ಹಲವು ದಾನ ಮಾಡುವ ಜೊತೆಗೆ ಗೋಪೂಜೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಪ್ರಧಾನಿ ಭೇಟಿ ನೀಡುತ್ತಿರುವ ಎಲ್ಲಾ ದೇಗುಲಗಳಿಗೂ ಶ್ರೀರಾಮಚಂದ್ರನ ನಂಟು ಇರುವುದೂ ಸಹ ವ್ರತದ ಭಾಗವಾಗಿದೆ ಎನ್ನಲಾಗಿದೆ.

ವ್ರತಾಚರಣೆ ಮಾಡುತ್ತಿರುವ ಮೋದಿ, ನೆಲದ ಮೇಲೆ ಮಲಗುತ್ತಿದ್ದಾರೆ ಹಾಗೂ ಕೇವಲ ಎಳನೀರು ಮಾತ್ರ ಸೇವಿಸುತ್ತ ಕಠಿಣ ಉಪವಾಸ ಮಾಡುತ್ತಿದ್ದಾರೆ ಎಂಬುದು ತಿಳಿದಿತ್ತು.

 ಆದರೆ ಇದರೊಂದಿಗೆ ಮೋದಿ, ಶಾಸ್ತ್ರಗಳ ಪ್ರಕಾರ ಗೋ ಪೂಜೆ, ಗೋವಿಗೆ ಆಹಾರ ನೀಡುವುದು, ಅನ್ನದಾನ ಮತ್ತು ವಸ್ತ್ರದಾನ ಸೇರಿದಂತೆ ಇತರ ಅನೇಕ ಆಚರಣೆ ಮಾಡುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 

ರಾಮನ ನಂಟು: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ದೇಶದ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಹೀಗೆ ಅವರು ಹೋಗುತ್ತಿರುವ ಎಲ್ಲ ದೇವಸ್ಥಾನಗಳು ರಾಮಾಯಣ ಅಥವಾ ಶ್ರೀರಾಮನಿಗೆ ಸಂಬಂಧಿಸಿದ ಸ್ಥಳಗಳೆಂಬ ಇತಿಹಾಸವನ್ನು ಹೊಂದಿರುವ ದೇವಸ್ಥಾನಗಳೇ ಆಗಿವೆ. 

ಹೀಗೆ ಮೋದಿ ಭೇಟಿ ನೀಡಿದ ದೇವಸ್ಥಾನಗಳೆಂದರೆ, ರಾಮಕುಂಡ, ನಾಸಿಕ್‌ನ ಕಾಳರಾಮ ದೇವಸ್ಥಾನ, ಲೇಪಾಕ್ಷಿಯ ವೀರ ಭದ್ರೇಶ್ವರ ಮಂದಿರ, ಕೇರಳದ ಗುರುವಾಯೂರು ಹಾಗೂ ಶ್ರೀ ರಾಮಸ್ವಾಮಿ ಮಂದಿರ. ಅಲ್ಲದೇ, ರಾಮನ ನಂಟಿನ ತಮಿಳುನಾಡಿನ ದೇವಸ್ಥಾನಗಳಿಗೂ ಮೋದಿ ಶನಿವಾರ ಭೇಟಿ ನೀಡಲಿದ್ದಾರೆ.

ಅಯೋಧ್ಯೆ ತಾತ್ಕಾಲಿಕ ರಾಮಮಂದಿರವೂ 4 ದಿನ ಬಂದ್‌
ರಾಮಲಲ್ಲಾ ವಿರಾಜ್‌ಮಾನ್‌ ಮೂಲ ಪುಟ್ಟ ವಿಗ್ರಹ ಇರಿಸಲಾಗಿರುವ ಅಯೋಧ್ಯೆಯ ತಾತ್ಕಾಲಿಕ ರಾಮಮಂದಿರವನ್ನೂ ಶುಕ್ರವಾರದಿಂದ ಜ.22ರ ಸೋಮವಾರದವರೆಗೆ ಭಕ್ತರ ದರ್ಶನಕ್ಕೆ ಮುಚ್ಚಲಾಗಿದೆ. 

ಇಲ್ಲಿರುವ ವಿಗ್ರಹಗಳನ್ನು ಜ.22ರಂದು ಅಯೋಧ್ಯೆಯ ನೂತನ ರಾಮಮಂದಿರದ ಗರ್ಭಗುಡಿಯಲ್ಲಿ ನೂತನ ರಾಮಲಲ್ಲಾನನ್ನು ಪ್ರತಿಷ್ಠಾಪಿಸುವ ಪೀಠದ ಮುಂದೆಯೇ ಇರಿಸಲಾಗುವುದು.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ಕೇರಳದ 2 ರು. ಡಾಕ್ಟರ್ ನಿಧನ