ಎಲ್ಲರಿಗೂ ಸೌಲಭ್ಯ ನೀಡುವುದೇ ನನ್ನ ಗ್ಯಾರಂಟಿ: ನರೇಂದ್ರ ಮೋದಿ

KannadaprabhaNewsNetwork | Updated : Jan 16 2024, 12:12 PM IST

ಸಾರಾಂಶ

ಪಿಎಂ ಜನಮನ ಯೋಜನೆಯಡಿಯಲ್ಲಿ ಆದಿವಾಸಿಗಳ ಮನೆ ನಿರ್ಮಾಣಕ್ಕೆ540 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಇದರಲ್ಲಿ 1 ಲಕ್ಷ ಫಲಾನುಭವಿಗಳಿಗೆ ಮೊದಲ ಕಂತು ಬಿಡುಗಡೆಯಾಗಿದೆ. 

ನವದೆಹಲಿ: ಆದಿವಾಸಿಗಳ ಅಭಿವೃದ್ಧಿಯ ಧ್ಯೇಯ ಹೊಂದಿರುವ ‘ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ’ (ಪಿಎಂ-ಜನಮನ) ಯೋಜನೆಯಡಿ, ಗ್ರಾಮೀಣ ವಸತಿ ಯೋಜನೆಯ 1 ಲಕ್ಷ ಫಲಾನುಭವಿಗಳಿಗೆ 540 ಕೋಟಿ ರು.ಗಳ ಮೊದಲ ಕಂತನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಬಿಡುಗಡೆ ಮಾಡಿದರು. 

ಈ ಹಣದಲ್ಲಿ ಫಲಾನುಭವಿಗಳು ಪಕ್ಕಾ ಮನೆ ನಿರ್ಮಿಸಿಕೊಳ್ಳಲಿದ್ದಾರೆ. ಈ ವೇಳೆ ಮಾತನಾಡಿದ ಮೋದಿ, ‘ವಿವಿಧ ಕಲ್ಯಾಣ ಯೋಜನೆಗಳ ಪ್ರಯೋಜನಗಳು ಎಲ್ಲರಿಗೂ ತಲುಪಿದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. 

ದೇಶದ ಪ್ರತಿಯೊಬ್ಬರಿಗೂ, ದೂರದ ಪ್ರದೇಶದವರಿಗೂ, ಕುಗ್ರಾಮಗಳಿಗೂ ಸರ್ಕಾರದ ಪ್ರಯೋಜನ ಲಭ್ಯವಾಗಬೇಕು. ಇದೇ ನನ್ನ ಗ್ಯಾರಂಟಿ. ನನ್ ಸರ್ಕಾರದ 10 ವರ್ಷಗಳನ್ನು ಬಡವರಿಗಾಗಿ ಮೀಸಲಿಟ್ಟಿದ್ದೆ. 

ಕಲ್ಯಾಣ ಯೋಜನೆಗಳಿಂದ ಯಾರೂ ಹೊರಗುಳಿಯಬಾರದು ಎಂಬುದು ನನ್ನ ಗುರಿ’ ಎಂದು ಪ್ರತಿಪಾದಿಸಿದರು.‘ಜ.22ರಂದು ರಾಮಮಂದಿರ ಉದ್ಘಾಟನೆ ಆಗಲಿದೆ. ಅಂದು ಎಲ್ಲರೂ ತಮ್ಮ ಮನೆಯಲ್ಲಿ ದೀಪ ಬೆಳಗಲಿದ್ದಾರೆ. 

ಆದಿವಾಸಿಗಳ ಮನೆಗಳಲ್ಲೂ ದೀಪ ಬೆಳಗಲಿದೆ’ ಎಂದು ಹರ್ಷಿಸಿದರು.ಪರಿಶಿಷ್ಟ ಪಂಗಡಗಳ ಅನೇಕ ಕಲ್ಯಾಣ ಯೋಜನೆಗಳ ಬಜೆಟ್‌ನಲ್ಲಿ 5 ಪಟ್ಟು ಏರಿಕೆಯಾಗಿದೆ ಮತ್ತು ಕಳೆದ 10 ವರ್ಷಗಳಲ್ಲಿ ಬುಡಕಟ್ಟು ವಿದ್ಯಾರ್ಥಿಗಳ ವಿದ್ಯಾರ್ಥಿವೇತನವು 2.45 ಪಟ್ಟು ಹೆಚ್ಚಾಗಿದೆ. 

ಅವರಿಗಾಗಿ 500 ಕ್ಕೂ ಹೆಚ್ಚು ಏಕಲವ್ಯ ಮಾದರಿ ಶಾಲೆಗಳ ನಿರ್ಮಿಸುವ ಕೆಲಸ ನಡೆಯುತ್ತಿದೆ. ಆದರೆ ಈ ಮೊದಲು 90 ಮಾತ್ರ ಮೊದಲು ಅಸ್ತಿತ್ವದಲ್ಲಿದ್ದವು ಎಂದರು.

ಕಾರ್ಯಕ್ರಮದ ಸಂದರ್ಭದಲ್ಲಿ, ಮೋದಿ ಅವರು ಪಿಎಂ-ಜನಮನ ಯೋಜನೆಯ ಕೆಲವು ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. 

ಅಡುಗೆ ಅನಿಲ ಸಂಪರ್ಕ, ವಿದ್ಯುತ್, ಕೊಳವೆ ನೀರು ಮತ್ತು ವಸತಿಗೆ ಪ್ರವೇಶ ಪಡೆಯಲು ಸರ್ಕಾರದ ಯೋಜನೆಗಳನ್ನು ಪಡೆದ ನಂತರ ಅವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗಿವೆ ಎಂದರು.

Share this article