ಬೆಂಗಳೂರು : ತಾಯ್ತನದ ಹಿರಿಮೆ ದೊಡ್ಡದು. ಇದಕ್ಕೆ ಮೇಘನಾ ಸುಧೀಂದ್ರ ಅವರು ಸೊಗಸಾಗಿ ಅಕ್ಷರರೂಪ ನೀಡಿದ್ದಾರೆ ಎಂದು ‘ಕನ್ನಡಪ್ರಭ’ ಪುರವಣಿ ಸಂಪಾದಕ ಗಿರೀಶ್ರಾವ್ ಹತ್ವಾರ್ (ಜೋಗಿ) ಅಭಿಪ್ರಾಯಪಟ್ಟರು.
‘ಹರಿವು ಬುಕ್ಸ್’ನಿಂದ ಬಸವನಗುಡಿಯ ವಾಡಿಯಾ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಓದುಗೆ ಸುಗ್ಗಿ’ ಮೂರು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೇಘನ ಸುಧೀಂದ್ರ ಅವರ ತಾಯ್ತನದ ಅನುಭವಗಳನ್ನು ಆಧರಿಸಿದ ‘ಮಿಲೇನಿಯಲ್ ಅಮ್ಮ’ ಕೃತಿಯ ಕುರಿತು ಮಾತನಾಡಿದ ಅವರು, ಈ ಕೃತಿಯನ್ನು ಓದಿದರೆ ತಾಯ್ತನ ಎಷ್ಟು ಸವಾಲಿನದು, ತಾಯ್ತನದ ಹಿರಿಮೆ, ನೋವು-ಸಂಕಟ ಏನು ಎನ್ನುವುದು ಪುರುಷನಾಗಿ ನನಗೆ ತಿಳಿಯಿತು ಎಂದು ಅಭಿಪ್ರಾಯಪಟ್ಟರು.
ಲೇಖಕಿ ಮೇಘನಾ ಸುಧೀಂದ್ರ ಮಾತನಾಡಿ, ಅವಳಿ ಮಕ್ಕಳ ಹೆರಿಗೆ ಸಮಯದಲ್ಲಿ ಉಂಟಾದ ಎರಡು ತಲೆಮಾರಿನ ಸಂಪ್ರದಾಯ, ಆಚಾರ-ವಿಚಾರಗಳು ಮತ್ತು ವೈದ್ಯಕೀಯ ಚಿಕಿತ್ಸೆ ನಡುವಿನ ಅಂತರ, ಈ ಎರಡರ ನಡುವಿನ ಆಯ್ಕೆಯ ತೊಳಲಾಟದ ಬಗ್ಗೆ ವಿವರಿಸಿದರು.
ಹೃದಯ ಶಿವ ಅವರ ಕಥೆಗಳ ಸಂಕಲನವಾದ ‘ಸೂಪರ್ ಗಾಡ್ ಸಣ್ಣಯ್ಯ’ ಮತ್ತು ದಾದಾಪೀರ್ ಜೈಮನ್ ಅವರ ಬೆಂಗಳೂರಿನ ಅನುಭವಗಳನ್ನು ಒಳಗೊಂಡ ‘ಜಂಕ್ಷನ್ ಪಾಯಿಂಟ್’ ಕೃತಿಗಳನ್ನು ಸಹ ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು.