ಮತ್ತೆ ಟ್ರಂಪ್‌-ಮೆಲೋನಿ ಜಟಾಪಟಿ

KannadaprabhaNewsNetwork |  
Published : Jun 21, 2026, 03:00 AM ISTUpdated : Jun 21, 2026, 04:45 AM IST
Donald Trump

ಸಾರಾಂಶ

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನನ್ನ ಜೊತೆ ಫೋಟೊ ಬೇಕೆಂದು ಬೇಡಿಕೊಂಡರು ಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಶನಿವಾರ ಅದೇ ಆರೋಪವನ್ನು ಪುನರುಚ್ಚರಿಸಿದ್ದಾರೆ. ‘ಇಟಲಿಯಲ್ಲಿ ಮೆಲೋನಿ ಜನಪ್ರಿಯತೆ ಕುಸಿತವಾಗುತ್ತಿದ್ದು, ಅದನ್ನು ಮರಳಿ ಗಿಟ್ಟಿಸಿಕೊಳ್ಳಲು ಈ ತಂತ್ರ ಹೂಡಿದ್ದರು’ ಎಂದಿದ್ದಾರೆ.

 ವಾಷಿಂಗ್ಟನ್‌: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನನ್ನ ಜೊತೆ ಫೋಟೊ ಬೇಕೆಂದು ಬೇಡಿಕೊಂಡರು ಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಶನಿವಾರ ಅದೇ ಆರೋಪವನ್ನು ಪುನರುಚ್ಚರಿಸಿದ್ದಾರೆ. ‘ಇಟಲಿಯಲ್ಲಿ ಮೆಲೋನಿ ಜನಪ್ರಿಯತೆ ಕುಸಿತವಾಗುತ್ತಿದ್ದು, ಅದನ್ನು ಮರಳಿ ಗಿಟ್ಟಿಸಿಕೊಳ್ಳಲು ಈ ತಂತ್ರ ಹೂಡಿದ್ದರು’ ಎಂದಿದ್ದಾರೆ.

ಆದರೆ ಇದಕ್ಕೆ ಮೆಲೋನಿ ತಿರುಗೇಟು ನೀಡಿದ್ದು, ‘ನನ್ನ ಜನಪ್ರಿಯತೆ ಬಗ್ಗೆ ನಿಮಗೆ ಚಿಂತೆ ಬೇಡ. ಅದರ ಅವಶ್ಯಕತೆಯೂ ನಿಮಗಿಲ್ಲ. ಇಟಲಿಗೆ ನಾನು ಹೇಗೆ ರಕ್ಷಣೆ ನೀಡುತ್ತೇನೆ ಎಂಬುದನ್ನು ಆಧರಿಸಿ ಜನ್ನ ಜನಪ್ರಿಯತೆ ತೀರ್ಮಾನ ಆಗುತ್ತದೆ. ನಿಮ್ಮ ಜತೆಗಿನ ಸ್ನೇಹದಿಂದ ತೀರ್ಮಾನ ಆಗಲ್ಲ’ ಎಂದು ಕಿಡಿಕಾರಿದ್ದಾರೆ.

ಟ್ರಂಪ್‌ ಮತ್ತೆ ಕ್ಯಾತೆ:

ಟ್ರುತ್‌ ಸೋಶಿಯಲ್‌ನಲ್ಲಿ ಪೋಸ್ಟ್‌ ಮಾಡಿರುವ ಟ್ರಂಪ್‌, ‘ಫ್ರಾನ್ಸ್‌ನಲ್ಲಿ ನಡೆದ ಜಿ7 ಶೃಂಗದ ವೇಳೆ ನನ್ನೊಂದಿಗೆ ಫೋಟೊ ಬೇಕೆಂದು ಮೆಲೋನಿ ಮೇಲಿಂದ ಮೇಲೆ ಬೇಡಿಕೊಂಡರು. ಇರಾನ್ ಅಣ್ವಸ್ತ್ರ ಅಭಿವೃದ್ಧಿಪಡಿಸುವುದನ್ನು ವಿರೋಧಿಸುವ ವಿಷಯ ಬಂದಾಗ (ಆದರೆ ನ್ಯಾಟೋ ಕೂಡ ಹಾಗೆ ಮಾಡಿದೆ!), ಇಟಲಿಯನ್ನು ನಿಜವಾಗಿಯೂ ಪ್ರೀತಿಸುವ ಮತ್ತು ರಕ್ಷಿಸುವ ದೇಶವಾದ ಅಮೆರಿಕವನ್ನು ಅವರು ತಿರಸ್ಕರಿಸಿದರು. ಬಹುಶಃ ಇದೇ ಕಾರಣಕ್ಕೆ ಇಟಲಿಯಲ್ಲಿ ಆಕೆಯ ಜನಪ್ರಿಯತೆ ಕಳಪೆಯಾಗಿದೆ’ ಎಂದು ಕುಟುಕಿದರು.‘ಈಗ ಇರಾನ್ ಅನ್ನು ಅಮೆರಿಕ ಯುದ್ಧದಲ್ಲಿ ಸೋಲಿಸಿದ ನಂತರ, ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಮೆಲೋನಿ ಮತ್ತೆ ನಮ್ಮ ಸ್ನೇಹಿತರಾಗಲು ಬಯಸುತ್ತಿದ್ದಾರೆ. ಬೇಡ ಧನ್ಯವಾದಗಳು!!!’ ಎಂದು ಟ್ರಂಪ್‌ ತಿರುಗೇಟು ನೀಡಿದ್ದಾರೆ.

ಅಮೆರಿಕವು ವರ್ಷಕ್ಕೆ ನೂರಾರು ಶತಕೋಟಿ ಡಾಲರ್‌ಗಳನ್ನು ವ್ಯಯಿಸುತ್ತಿದೆ

‘ಇಟಲಿಯ ಲ್ಯಾಂಡಿಂಗ್ ಸ್ಟ್ರಿಪ್‌ ಅಥವಾ ರನ್‌ವೇಗಳನ್ನು ಬಳಸಲು ಅವರು ನಮಗೆ ಅವಕಾಶ ನೀಡಲಿಲ್ಲ. ಇದು ದೊಡ್ಡ ಲಾಜಿಸ್ಟಿಕ್ ಅನನುಕೂಲತೆಯಾಗಿದೆ. ಆದರೂ ಇಟಲಿ ಮತ್ತು ಇತರ ತಥಾಕಥಿತ ನ್ಯಾಟೋ ಮಿತ್ರರಾಷ್ಟ್ರಗಳನ್ನು ರಕ್ಷಿಸಲು ಅಮೆರಿಕವು ವರ್ಷಕ್ಕೆ ನೂರಾರು ಶತಕೋಟಿ ಡಾಲರ್‌ಗಳನ್ನು ವ್ಯಯಿಸುತ್ತಿದೆ’ ಎಂದಿದ್ದಾರೆ.

ಶುಕ್ರವಾರವಷ್ಟೆ ಟ್ರಂಪ್‌, ‘ಮೆಲೋನಿ ಫೋಟೊಗಾಗಿ ಬೇಡಿಕೊಂಡರು. ಆಕೆಯನ್ನು ಕಂಡು ಅಯ್ಯೋ ಪಾಪ ಎನಿಸಿತು’ ಎಂದಿದ್ದರು. ಇದನ್ನು ಅಲ್ಲಗಳೆದ ಮೆಲೋನಿ, ‘ನಾನು ಮತ್ತು ಇಟಲಿ ಎಂದಿಗೂ ತಲೆಬಾಗುವುದಿಲ್ಲ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇಬ್ಬರು ಠಾಕ್ರೆ ಆಪ್ತರು ಶಿಂಧೆ ಶಿವಸೇನೆಗೆ
ಮಹಾರಾಷ್ಟ್ರ : ಹನುಮಂತ ದೇಗುಲದ ಛಾವಣಿ ಕುಸಿದು 6 ಸಾವು