ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತರಲು ರಕ್ಷಣಾ ಸಿಬ್ಬಂದಿ ವಿಸ್ತೃತ ಯೋಜನೆಯೊಂದನ್ನು ಸಿದ್ಧಪಡಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ ಶುಕ್ರವಾರದ ವೇಳೆಗೆ 41 ಜನರನ್ನು ಒಬ್ಬರಾದ ಮೇಲೆ ಒಬ್ಬರಂತೆ ಚಕ್ರವಿರುವ ಪುಟ್ಟ ಸ್ಟ್ರೆಚರ್ ಮೇಲೆ ಮಲಗಿಸಿ ಹೊರತರಲು ಎಲ್ಲಾ ಸಿದ್ಧತೆ ನಡೆಸಲಾಗಿದೆ.
ಕಾರ್ಮಿಕರು ಎಲ್ಲಿದ್ದಾರೆ?:ಕಾರ್ಯಾಚರಣೆ ನಡೆಸುತ್ತಿರುವ ಸ್ಥಳದಿಂದ 57 ಮೀಟರ್ ದೂರದಲ್ಲಿ ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ. ಇದುವರೆಗೂ ಅಂದಾಜು 45ರಿಂದ 50 ಮೀಟರ್ ದೂರದವರೆಗೆ ಪೈಪ್ ಅಳವಡಿಸಲಾಗಿದೆ. ಈ ಪೈಪ್ 80 ಸೆಂ.ಮೀ. ಸುತ್ತಳತೆ ಹೊಂದಿದ್ದು, ಒಂದು ಸಲಕ್ಕೆ ಒಬ್ಬ ವ್ಯಕ್ತಿ ಅದರೊಳಗೆ ತೂರಬಹುದಾಗಿದೆ. ಪೈಪ್ ಅಳವಡಿಕೆ ಕೊನೆಗೆ 57 ಮೀಟರ್ ದೂರದ ಸ್ಥಳ ತಲುಪಿದಾಗ ರಕ್ಷಣಾ ಕಾರ್ಯ ಆರಂಭವಾಗಲಿದೆ. ಇದೇ ಪೈಪ್ ಮೂಲಕ ಕಾರ್ಮಿರನ್ನು ಒಬ್ಬೊಬ್ಬರಾಗಿ ಹೊರತರಲಾಗುತ್ತದೆ.
ರಕ್ಷಣೆ ನಡೆಯುವುದು ಹೀಗೆ:ಪೈಪ್ ಅಳವಡಿಕೆ ಮುಗಿದ ಬಳಿಕ ಎನ್ಡಿಆರ್ಎಫ್ನ ಕೆಲ ಸಿಬ್ಬಂದಿ, ಕಾರ್ಮಿಕರು ಸಿಕ್ಕಿಬಿದ್ದ ಸ್ಥಳಕ್ಕೆ ತಾವೇ ಪೈಪ್ ಮೂಲಕ ತೆರಳಲಿದ್ದಾರೆ. ಆಗ ಅವರು ಪೈಪ್ನೊಳಗೆ ಯಾವುದೇ ಮಣ್ಣು, ಕಲ್ಲು ಹಾಗೂ ಇತರ ತ್ಯಾಜ್ಯ ಪದಾರ್ಥ ಇರದಂತೆ ನೋಡಿಕೊಂಡು, ಸ್ವಚ್ಛಗೊಳಿಸುತ್ತಾರೆ.
ಸುರಂಗದ ಹೊರಗೆ ಪ್ರತಿ ಕಾರ್ಮಿಕರಿಗೆ ಒಬ್ಬರಂತೆ 41 ಆ್ಯಂಬುಲೆನ್ಸ್ ಸಿದ್ಧಪಡಿಸಲಾಗಿದೆ. ಹೊರಬಂದ ಕಾರ್ಮಿಕರನ್ನು ಆ್ಯಂಬುಲೆನ್ಸ್ ಮೂಲಕ ಸಮೀಪದಲ್ಲಿ ಸಿದ್ಧಪಡಿಸಲಾಗಿರುವ 41 ಬೆಡ್ನ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್ಡಿಆರ್ಎಫ್) ಪ್ರಧಾನ ನಿರ್ದೇಶಕ ಅತುಲ್ ಕರ್ವಾಲ್ ಗುರುವಾರ ಮಾಹಿತಿ ನೀಡಿದ್ದಾರೆ.