ಸರಳಭಾಷೆಯಲ್ಲಿರುವ, ಗೊಂದಲಗಳಿಲ್ಲದ ನೂತನ ಆದಾಯ ತೆರಿಗೆ ಮಸೂದೆ ಇಂದು ಲೋಕಸಭೆಯಲ್ಲಿ ಮಂಡನೆ

KannadaprabhaNewsNetwork |  
Published : Feb 13, 2025, 12:47 AM ISTUpdated : Feb 13, 2025, 04:22 AM IST
ಸಂಸತ್ತು | Kannada Prabha

ಸಾರಾಂಶ

ಸರಳಭಾಷೆಯಲ್ಲಿರುವ, ಗೊಂದಲಗಳಿಲ್ಲದ, ವ್ಯಾಜ್ಯಗಳಿಗೆ ಹೆಚ್ಚಿನ ಅ‍ವಕಾಶ ನೀಡದ ಕೇಂದ್ರ ಸರ್ಕಾರದ ಹೊಸ ಆದಾಯ ತೆರಿಗೆ ಮಸೂದೆ-2025 ಗುರುವಾರ ಲೋಕಸಭೆಯಲ್ಲಿ ಮಂಡನೆಯಾಗಲಿದೆ.

ನವದೆಹಲಿ: ಸರಳಭಾಷೆಯಲ್ಲಿರುವ, ಗೊಂದಲಗಳಿಲ್ಲದ, ವ್ಯಾಜ್ಯಗಳಿಗೆ ಹೆಚ್ಚಿನ ಅ‍ವಕಾಶ ನೀಡದ ಕೇಂದ್ರ ಸರ್ಕಾರದ ಹೊಸ ಆದಾಯ ತೆರಿಗೆ ಮಸೂದೆ-2025 ಗುರುವಾರ ಲೋಕಸಭೆಯಲ್ಲಿ ಮಂಡನೆಯಾಗಲಿದೆ.

ಸದ್ಯ ಜಾರಿಯಲ್ಲಿರುವ ಆರು ದಶಕಗಳಷ್ಟು ಹಳೆಯ ಆದಾಯ ತೆರಿಗೆ ಕಾಯ್ದೆಯ ಜಾಗದಲ್ಲಿ ಈ ನೂತನ ಕಾಯ್ದೆಯು ಅನುಷ್ಠಾನಕ್ಕೆ ಬರಲಿದೆ. ಹಾಲಿ ಕಾಯ್ದೆಯು ಗೊಂದಲಗಳಿಂದ ಕೂಡಿದ್ದು, ಸುಲಭವಾಗಿ ಅರ್ಥವಾಗುವಂತಿರಲಿಲ್ಲ. ಹೀಗಾಗಿ ಈ ನೂತನ ಆದಾಯ ತೆರಿಗೆ ಕಾಯ್ದೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಹೊಸ ಕಾಯ್ದೆಯು ಹಾಲಿ ಕಾನೂನಿನಲ್ಲಿರುವ ''''''''ಹಿಂದಿನ ವರ್ಷ ಅಥವಾ ತೆರಿಗೆ ನಿರ್ಧಾರ ವರ್ಷ'''''''' ಎಂಬ ಪರಿಕಲ್ಪನೆಯನ್ನು ತೆಗೆದು ಹಾಕಿ ಆ ಜಾಗದಲ್ಲಿ ‘ತೆರಿಗೆ ವರ್ಷ’ ಎಂಬ ಪದವನ್ನು ಸೇರ್ಪಡೆ ಮಾಡಲಿದೆ. ಇದರಿಂದ ತೆರಿಗೆದಾರರು ಯಾವುದೇ ಗೊಂದಲಗಳಿಲ್ಲದೆ ಆದಾಯ ತೆರಿಗೆ ನಿಯಮಗಳಿಗೆ ಬದ್ಧರಾಗಲು ಅನುಕೂಲವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಕಡಿಮೆ ಪುಟಗಳು: 1961ರಲ್ಲಿ ಜಾರಿಗೆ ಬಂದ ಕಾಯ್ದೆಯನ್ನು ಆ ಕಾಲದ ತೆರಿಗೆ ವ್ಯವಸ್ಥೆಗೆ ಅನುಗುಣವಾಗಿ ರೂಪಿಸಲಾಗಿತ್ತು. ಹಳೆಯ ಕಾಯ್ದೆಯು ಅನುಷ್ಠಾನಕ್ಕೆ ಬರುವಾಗಲೇ 880 ಪುಟಗಳನ್ನು ಒಳಗೊಂಡಿತ್ತು. ಆ ಬಳಿಕ ಈ ಕಾಯ್ದೆಗೆ ಸಾಕಷ್ಟು ತಿದ್ದುಪಡಿಗಳೂ ಆಗಿದ್ದವು. ಆದರೆ ಇದೀಗ ಜಾರಿ ಮಾಡಲು ಉದ್ದೇಶಿಸಿರುವ ಹೊಸ ಕಾಯ್ದೆಯು 622 ಪುಟಗಳನ್ನು ಹೊಂದಿರಲಿದೆ.

ಹೊಸ ಕಾಯ್ದೆಯು 536 ಸೆಕ್ಷನ್‌ಗಳನ್ನು ಹೊಂದಿರಲಿದ್ದು, ಹಾಲಿ ಕಾಯ್ದೆಗೆ ಹೋಲಿಸಿದರೆ 298 ಸೆಕ್ಷನ್‌ಗಳನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾಗಿದೆ. ಹಾಲಿ ಕಾಯ್ದೆ 14 ಶೆಡ್ಯೂಲ್‌ಗಳನ್ನು ಹೊಂದಿದ್ದರೆ ಹೊಸ ಕಾಯ್ದೆಯಲ್ಲಿ ಅದನ್ನು 16ಕ್ಕೇರಿಸಲಾಗಿದೆ. ಕಾಯ್ದೆಯು ಎಲ್ಲರಿಗೂ ಅರ್ಥವಾಗುವಂತೆ ರೂಪಿಸಲಾಗಿದೆ. ಗೊಂದಲಗಳನ್ನು ಕಡಿಮೆ ಮಾಡಲಾಗಿದೆ. ಅನಗತ್ಯವಾದ ನಿಯಮಗಳನ್ನು ತೆಗೆದುಹಾಕಲಾಗಿದೆ.

ಇನ್‌ಫ್ಲುವೆನ್ಸರ್‌ಗಳಿಗೂ ಕಟ್ಟುನಿಟ್ಟು: ವಿಶೇಷವಾಗಿ ಸಾಮಾಜಿಕ ಜಾಲತಾಣದ ಇನ್‌ಫ್ಲುವೆನ್ಸರ್‌ಗಳಿಗೂ ಹೊಸ ಕಾಯ್ದೆಯು ಜಿಎಸ್‌ಟಿ ನೋಂದಣಿ ಮಾಡುವುದು ಕಡ್ಡಾಯ(20 ಲಕ್ಷಕ್ಕಿಂತ ಹೆಚ್ಚಿನ ವ್ಯವಹಾರ ನಡೆದರೆ) ಮಾಡಲಿದೆ. ಈ ಮೂಲಕ ಅವರನ್ನೂ ಕಟ್ಟುನಿಟ್ಟಾಗಿ ತೆರಿಗೆ ವ್ಯಾಪ್ತಿಗೆ ತರುವ ಪ್ರಯತ್ನ ಮಾಡಲಾಗಿದೆ. ಇತರೆ ವ್ಯವಹಾರಗಳಂತೆ ಇನ್‌ಫ್ಲುವೆನ್ಸರ್‌ಗಳು ಉಚಿತ ಕೊಡುಗೆಗಳು, ಕೊಡುಕೊಳ್ಳುವಿಕೆ ವ್ಯವಹಾರಗಳಿಂದ ಬಂದ ಆದಾಯವನ್ನು ಬಹಿರಂಗಪಡಿಸಿ ತೆರಿಗೆ ಪಾವತಿಸಬೇಕಾಗುತ್ತದೆ.

ಲೋಕಸಭೆಯಲ್ಲಿ ಈ ವಿಧೇಯಕವನ್ನು ಮಂಡಿಸಿದ ಬಳಿಕ ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗೆ ಕಳುಹಿಸಿಕೊಡಲಾಗುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ